Gummadi Narsaiah Movie: ನಟ ಶಿವರಾಜ್ಕುಮಾರ್ ಅವರು ತೆಲುಗು ಭಾಷೆಯ ‘ಗುಮ್ಮಡಿ ನರಸಯ್ಯ’ ಸಿನಿಮಾದಲ್ಲಿ ನಟಿಸಲು ರೆಡಿಯಾಗಿದ್ದಾರೆ. ಈ ಸಿನಿಮಾದ ಮುಹೂರ್ತದಲ್ಲಿ ಅವರು ಭಾಗಿಯಾಗಿದ್ದರು. ಗುಮ್ಮಡಿ ನರಸಯ್ಯ ಅವರ ಬಗ್ಗೆ ಮಾಹಿತಿ ಇಲ್ಲಿದೆ.
ನಟ ಶಿವರಾಜ್ಕುಮಾರ್ ಅವರು ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಅವರು ತೆಲುಗು ಭಾಷೆಯಲ್ಲಿ ಗುಮ್ಮಡಿ ನರಸಯ್ಯ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 5 ಬಾರಿ ಶಾಸಕರಾಗಿ ಆಯ್ಕೆಯಾಗಿ ಸರಳ ಜೀವನ ನಡೆಸಿದ ಆಂಧ್ರದ ಮಾಜಿ ಶಾಸಕ ಗುಮ್ಮಡಿ ನರಸಯ್ಯ ಅವರ ಜೀವನಾಧಾರಿತ ಸಿನಿಮಾ ಇದಾಗಿದೆ. ಈ ಸಿನಿಮಾದ ಮುಹೂರ್ತ ಸಮಾರಂಭ ತೆಲಂಗಾಣದ ಪಾಲ್ವಂಚದಲ್ಲಿ ಅದ್ಧೂರಿಯಾಗಿ ನಡೆದಿದೆ.
‘ಗುಮ್ಮಡಿ ನರಸಯ್ಯ’ ಸಿನಿಮಾ ಮುಹೂರ್ತದಲ್ಲಿ ಗಣ್ಯರು
‘ಗುಮ್ಮಡಿ ನರಸಯ್ಯ’ ಸಿನಿಮಾದ ಮುಹೂರ್ತದಲ್ಲಿ ಪಾತ್ರಧಾರಿಗಳ ಜೊತೆಗೆ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಕವಿತಾ, ಮಲ್ಲು ಭಟ್ಟಿ ವಿಕ್ರಮಾರ್ಕ ಅವರ ಪತ್ನಿ ನಂದಿನಿ ಮಲ್ಲು, ರಾಜಕೀಯ ಗಣ್ಯರು ಭಾಗವಹಿಸಿದ್ದರು. ಗೀತಾ ಶಿವರಾಜ್ ಕುಮಾರ್ ಚಿತ್ರಕ್ಕೆ ಕ್ಲಾಪ್ ಮಾಡಿದರು, ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಮಲ್ಲು ಭಟ್ಟಿ ವಿಕ್ರಮಾರ್ಕ ಅವರ ಪತ್ನಿ ನಂದಿನಿ ಸ್ಕ್ರಿಪ್ಟ್ ನಿರ್ದೇಶಕರಿಗೆ ಹಸ್ತಾಂತರಿಸಿದರು.
ಶಿವರಾಜ್ಕುಮಾರ್ ಏನು ಹೇಳಿದರು?
ಶಿವರಾಜ್ಕುಮಾರ್ ಮಾತನಾಡಿ, “ಇಂದು ನಾನು ಅಂತಹ ಉದಾತ್ತ ಮನುಷ್ಯನ ಸಿನಿಮಾ ಮಾಡಲು ನಿಜವಾಗಿಯೂ ಸಂತೋಷವಾಗುತ್ತಿದೆ, ಹೆಮ್ಮೆಪಡುತ್ತೇನೆ. ಈ ಅವಕಾಶಕ್ಕಾಗಿ ಪರಮೇಶ್ವರ್ ಮತ್ತು ಎನ್ ಸುರೇಶ್ ರೆಡ್ಡಿ ಅವರಿಗೆ ನನ್ನ ಧನ್ಯವಾದಗಳು. ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯನಂತೆಯೇ ಜನರ ಸೇವೆ ಸಲ್ಲಿಸಿದ್ದಾರೆ. ಅವರು ಯಾವಾಗಲೂ ‘ನಿಮಗಾಗಿ ಬದುಕಬೇಡಿ, ಇತರರಿಗಾಗಿ ಬದುಕಿ’ ಎಂದು ಹೇಳುತ್ತಿದ್ದರು. ನಾನು ಇತ್ತೀಚೆಗೆ ಗುಮ್ಮಡಿ ನರಸಯ್ಯ ಅವರ ಮನೆಗೆ ಭೇಟಿ ನೀಡಿದಾಗ, ನಾನು ನನ್ನ ತಂದೆಯ ಬಳಿಗೆ ಹಿಂತಿರುಗಿದಂತೆ ಭಾಸವಾಯಿತು. ಈ ಸಿನಿಮಾದಲ್ಲಿ ಅವರ ಪಾತ್ರದಲ್ಲಿ ನಾನು ನಟಿಸುತ್ತಿರುವುದು ನನ್ನ ಆಶೀರ್ವಾದ. ನಾನು ಈ ಸಿನಿಮಾಕ್ಕಾಗಿ ತೆಲುಗು ಕಲಿಯುತ್ತಿದ್ದೇನೆ, ನನಗಾಗಿ ಡಬ್ಬಿಂಗ್ ಮಾಡುತ್ತೇನೆ. ನಿಮ್ಮ ಆಶೀರ್ವಾದ ನನಗೆ ಸಿಗಲಿ ಎಂದು ನಾನು ಭಾವಿಸುತ್ತೇನೆ. ಈ ಸಿನಿಮಾವು ಎಲ್ಲ ರಾಜಕೀಯ ನಾಯಕರಿಗೆ ಸ್ಫೂರ್ತಿಯಾಗಲಿದೆ” ಎಂದರು.
ಗುಮ್ಮಡಿ ನರಸಯ್ಯ ಮಾತನಾಡಿ, “ಈ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು, ಆ ಬದಲಾವಣೆ ನಮ್ಮೊಳಗೇ ಆರಂಭವಾಗಬೇಕು. ನಾವು ಒಬ್ಬರನ್ನೊಬ್ಬರು ಮೋಸಗೊಳಿಸುವುದನ್ನು ಕೊನೆಗಾಣಿಸಬೇಕು. ಅದು ನನ್ನ ಏಕೈಕ ಆಸೆ. ನಾನು ಮಹಾನ್ ನಾಯಕನಲ್ಲ; ನಾನು ಎಲ್ಲರಂತೆ ಸಾಮಾನ್ಯ ವ್ಯಕ್ತಿ. ನನ್ನನ್ನು ವೈಭವೀಕರಿಸುವ ಬದಲು, ಸಿನಿಮಾವು ನನ್ನ ನಂಬಿಕೆಗಳನ್ನು ತಿಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಪರಮೇಶ್ವರ್ ಅವರು ಬಾಲ್ಯದಿಂದ ಇಲ್ಲಿಯವರೆಗೆ ನನ್ನ ಜೀವನವನ್ನು ಅಧ್ಯಯನ ಮಾಡಿ ಈ ಸಿನಿಮಾವನ್ನು ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಅವರು ನನ್ನನ್ನು ಚಿತ್ರಿಸುತ್ತಿರುವುದು ನನಗೆ ಸಂತೋಷವಾಗಿದೆ. ಈ ಸಿನಿಮಾ ಬಿಡುಗಡೆಯಾದ ನಂತರ ಸಮಾಜ ಮತ್ತು ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿ ಎಂದು ಆಶಿಸುತ್ತೇನೆ” ಎಂದರು.
ನಿರ್ದೇಶಕ ಪರಮೇಶ್ವರ್ ಹಿವ್ರಾಳೆ ಅವರು ಗುಮ್ಮಡಿ ನರಸಯ್ಯ ಅವರ ಜೀವನಗಾಥೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರವಲ್ಲಿಕಾ ಆರ್ಟ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎನ್ ಸುರೇಶ್ ರೆಡ್ಡಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿದ್ದ ಫಸ್ಟ್ ಲುಕ್ ನಲ್ಲಿ ಶಿವಣ್ಣನ ವಿಶೇಷವಾಗಿ ಕಾಣಿಸಿಕೊಂಡಿದ್ದರು. ಧೋತಿ ಉಟ್ಟು, ಶರ್ಟ್ ಹಾಕಿದ್ದಾರೆ. ಹೆಗಲ ಮೇಲೆ ಒಂದು ಕೆಂಪು ಬಣ್ಣದ ಶಾಲು ಇದೆ. ಓಡಾಡೋಕೆ ಒಂದು ಸೈಕಲ್ ಇದೆ. ಇದು ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್.


