ದರೋಡೆಗೆ ಯತ್ನಿಸಿ ಫಿಲ್ಮಿ ಸ್ಟೈಲ್ನಲ್ಲಿ ಟ್ರಾಪ್, ಇಬ್ಬರು ಕಳ್ಳರ ಪೈಕಿ ಒಬ್ಬ ಎಸ್ಕೇಪ್ ಆದರೆ ಮತ್ತೊಬ್ಬನಿಗೆ ಸಾಧ್ಯವಾಗಲಿಲ್ಲ. ಸಿನೀಮಿಯಾ ಶೈಲಿಯ ಕಳ್ಳತನ ಅದೇ ಶೈಲಿಯಲ್ಲಿ ಟ್ರಾಪ್ ಆಗಿದ್ದಾನೆ. ಕೊನೆಗೆ ಮಾಲೀಕ ಬಾಗಿಲು ತೆರೆಯುವವರೆಗೆ ನೆಲದ ಮೇಲೆ ಮಲಗಿದ್ದಾನೆ.
ಗೌರಿಬಿದನೂರು (ಫೆ.11) ಮನೆ ಕಳ್ಳತನ, ಸರಗಳ್ಳತನ ಸೇರಿದಂತೆ ದರೋಡೆ ಪ್ರಕರಣಗಳಲ್ಲಿ ಕಳ್ಳರು ಸಾಕಷ್ಟು ಪ್ಲಾನ್ ಮಾಡಿ ಕಳ್ಳತನಕ್ಕೆ ಇಳಿಯುತ್ತಾರೆ. ಸಾಕ್ಷ್ಯಗಳು ಸಿಗದಂತೆ, ಸುಳಿವು ಸಿಗದಂತೆ, ಪೊಲೀಸರ ಪ್ರಕರಣ ಭೇದಿಸಲು ಸಾಧ್ಯವಾಗದಂತೆ ಪ್ಲಾನ್ ಮಾಡುತ್ತಾರೆ. ಇದರ ನಡುವೆ ಕಳ್ಳತನ ಪ್ರಯತ್ನದಲ್ಲೇ ಸಿಕ್ಕಿಬಿದ್ದ ಅಥವಾ ನಿದ್ದೆಗೆ ಜಾರಿದ ಘಟನೆಗಳು ನಡೆದಿದೆ. ಇದೀಗ ಗೌರಿಬಿದನೂರಿನಲ್ಲಿ ಮನೆ ಕಳ್ಳತನಕ್ಕೆ ಎಲ್ಲಾ ಕಳ್ಳರಂತೆ ಪ್ಲಾನ್ ಮಾಡಿ ನುಗ್ಗಿದ್ದಾರೆ. ಆದರೆ ಕಳ್ಳತನ ಬಳಿಕ ಒಬ್ಬ ಎಸ್ಕೇಪ್ ಆದರೆ ಮತ್ತೊಬ್ಬ ಟ್ರಾಪ್ ಆಗಿದ್ದಾನೆ. ಕೊನೆಗೆ ಮನೆಯ ಮಾಲೀಕ ಬಂದು ಬಾಗಿಲು ತೆರೆಯುವರೆಗೆ ಕಳ್ಳ ಮನೆಯ ಒಳಗೆ ನೆಲದಲ್ಲಿ ಮಲಗಿದ ಘಟನೆ ನಡೆದಿದೆ.
ಕಳ್ಳ ಟ್ರಾಪ್ ಆಗಿದ್ದು ಹೇಗೆ?
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಈ ಕಳ್ಳತನ ನಡೆದಿದೆ. ಇಬ್ಬರು ಕಳ್ಳರು ಗೌರಿಬಿದನೂರಿನ ಪ್ರೇಮನಾಥ ಅನ್ನೋ ವ್ಯಾಪಾರಿಯ ಮನೆಗೆ ಕನ್ನ ಹಾಕಲು ನಿರ್ಧರಿಸಿದ್ದಾರೆ. ಪ್ರೇಮನಾಥ ಸಣ್ಣ ಶಾಪ್ ನಡೆಸುತ್ತಿದ್ದಾರೆ. ಕಾರ್ಯಕ್ರಮದ ಕಾರಣ ಶಾಪ್ ಮುಚ್ಚಿ ಕುಟುಂಬ ಸಮೇತ ಹೈದರಾಬಾದ್ಗೆ ತೆರಳಿದ್ದರು. ಶಾಪ್ ಕ್ಲೋಸ್, ಮನೆಯೂ ಕ್ಲೋಸ್ ಅನ್ನೋದು ತಿಳಿದ ಇಬ್ಬರು ಕಳ್ಳರು ಮನೆ ಕಳ್ಳತನಕ್ಕೆ ಪ್ಲಾನ್ ಮಾಡಿದ್ದಾರೆ. ಗ್ಯಾಸ್ ಕಟರ್ ಸೇರಿದಂತೆ ಕೆಲ ಸಲಕರಣೆಗಳ ಮೂಲಕ ಪ್ರೇಮನಾಥ ಮನೆ ಮೇಲೆ ಹತ್ತಿ ಶೀಟ್ ಹಾಕಿದ ಮನೆಯ ರೂಫ್ ಕಟ್ ಮಾಡಿ ಒಳಗೆ ಇಳಿದಿದ್ದಾರೆ.
ಮನೆ ಎಲ್ಲಾ ತಡಕಾಡಿದ್ದಾರೆ. 5000 ರೂಪಾಯಿ ಸಿಕ್ಕಿದೆ. ಈ ಹಣ ತೆಗೆದು ಜೇಬಿಗೆ ತುಂಬಿಸಿದ್ದಾರೆ. ಕೆಲ ಚಿನ್ನಾಭರಣ ದೋಚಿದ್ದಾರೆ. ಸಿಕ್ಕ ಹಣ, ಚಿನ್ನಾಭರಣ ತೆಗೆದು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ಒಬ್ಬರಿಗೆ ಮಾತ್ರ ಕಟ್ ಮಾಡಿದ ರೂಫ್ ಮೂಲಕ ಹೋಗಲು ಸಾಧ್ಯ. ಹಣ ತೆಗೆದುಕೊಂಡು ಒಬ್ಬ ಕಳ್ಳ ಗೋಡೆ ಮೂಲಕ ಹತ್ತಿದ್ದಾನೆ. ಮೆಲ್ಲನೆ ಹೊರಗೆ ನೋಡುತ್ತಿದ್ದಂತೆ ಮನೆಯ ಮುಂಭಾಗದಲ್ಲಿ ಕೆಲ ಸ್ಥಳೀಯರು ನಿಂತಿದ್ದಾರೆ. ಟಾರ್ಚ್ ಹಿಡಿದು ಮಾತನಾಡುತ್ತಿರುವುದನ್ನು ಗಮನಿಸಿದ್ದಾನೆ. ಇತ್ತ ಕೈಸನ್ನೆ ಮೂಲಕ ಕೆಳಗಿರುವ ಮತ್ತೊಬ್ಬ ಕಳ್ಳನಿಗೆ ಸೂಚನೆ ನೀಡಿದ್ದಾನೆ. ಬಳಿಕ ಈತ ಮೆಲ್ಲನೆ ಹಾರಿ ಎಸ್ಕೇಪ್ ಆಗಿದ್ದಾನೆ.
ಮನೆಯ ಒಳಗಿದ್ದ ಮತ್ತೊಬ್ಬ ಕಳ್ಳ ಮೊದಲೇ ಕುಡಿದು ಕಳ್ಳತನಕ್ಕೆ ಇಳಿದಿದ್ದ. ಹೀಗಾಗಿ ಆತನಿಗೆ ಗೋಡೆ ಹತ್ತಿ ಛಾವಣಿ ಮೂಲಕ ಎಸ್ಕೇಪ್ ಆಗಲು ಸಾಧ್ಯವಾಗಿಲ್ಲ. ಇತ್ತ ಮದ್ಯದ ಅಮಲು ಏರತೊಡಗಿದೆ. ಜೊತೆಗೆ ಮನೆಯ ಹೊರಗಡೆ ಹಲವರು ಮಾತುಗಳು ಕೇಳಿಬರುತ್ತಿದೆ. ಸ್ಥಳೀಯರು ಪ್ರೇಮನಾಥ ಮನೆಯಲ್ಲಿ ಕಳ್ಳರು ಛಾವಣಿ ಮೂಲಕ ಹತ್ತುವುದು ಗಮನಿಸಿ ಕೆಲವರ ಜೊತೆ ಕರೆದು ಸ್ಥಳಕ್ಕೆ ಆಗಮಿಸಿದ್ದಾರೆ. ಅಷ್ಟೊತ್ತಿಗೆ ಒಬ್ಬ ಎಸ್ಕೇಪ್ ಆಗಿದ್ದರೆ ಮತ್ತೊಬ್ಬ ಮನೆಯೊಳಗೆ ಲಾಕ್ ಆಗಿದ್ದಾನೆ. ಅಮಲು ಏರತೊಡಗಿದ ಕಾರಣ ಕಳ್ಳ ಮನೆಯ ನೆಲದ ಮೇಲೆ ಮಲಗಿದ್ದಾನೆ. ಇತ್ತ ಪ್ರೇಮನಾಥ ಮಾಹಿತಿ ತಿಳಿದು ರಾತ್ರಿಯೇ ಹೈದರಾಬಾದ್ನಿಂದ ಹೊರಟು ಬಂದಿದ್ದಾರೆ. ಈ ವೇಳೆ ಸ್ಥಳೀಯರ ಮೇಲ್ಛಾವಣಿಯನ್ನು ಮುಚ್ಚಿದ್ದಾರೆ. ಬೆಳಗ್ಗೆ ಪ್ರೇಮನಾಥ ಮನೆಗೆ ಬಂದು ಬಾಗಿಲು ತೆರೆದಿದ್ದಾರೆ. ಎಲ್ಲಾ ಸ್ಥಳೀಯರು ಬೆಳಗಿನ ವರೆಗೆ ಕಾವಲು ಕುಳಿತಿದ್ದಾರೆ. ಮನೆ ಒಳಗೆ ಹೋದಾಗ ಕಳ್ಳ ಗಡದ್ ನಿದ್ದೆಯಲ್ಲಿರುವುದು ನೋಡಿ ಅಚ್ಚರಿಗೊಂಡಿದ್ದಾರೆ. ಇತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಳ್ಳನ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ 5,000 ರೂಪಾಯಿ ಕದ್ದಿರುವುದಾಗಿ ಹೇಳಿದ್ದಾನೆ. ಮತ್ತೊಬ್ಬ ಕಳ್ಳನ ಮಾಹಿತಿ ಮಾತ್ರವಲ್ಲ ಫೋನ್ ನಂಬರ್ ಸಹಿತ ವಿಳಾಸವನ್ನು ಪೊಲೀಸರಿಗೆ ನೀಡಿದ್ದಾನೆ.


