ಸಿಂಧನೂರು ತಾಲೂಕಿನ ಹರೇಟನೂರು ದ್ಯಾವಮ್ಮ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ದನಗಳ ಕೊಬ್ಬು ಕೆತ್ತುವ ನೆಪದಲ್ಲಿ ದೇವಸ್ಥಾನಗಳನ್ನು ಗುರುತಿಸುತ್ತಿದ್ದ ಖದೀಮನನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.

ರಾಯಚೂರು (ಫೆ.14): ಜಿಲ್ಲೆಯ ಸಿಂಧನೂರು ತಾಲೂಕಿನ ಹರೇಟನೂರು ಗ್ರಾಮದಲ್ಲಿ ನಡೆದಿದ್ದ ದೇವಸ್ಥಾನದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಸಿಂಧನೂರು ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ದೇವಿಯ ಆಭರಣಗಳನ್ನು ದೋಚಿದ್ದ ಕುಖ್ಯಾತ ಕಳ್ಳನನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹರೇಟನೂರು ದ್ಯಾವಮ್ಮ ದೇಗುಲದಲ್ಲಿ ಕಳ್ಳತನ

ಕಳೆದ ಅಕ್ಟೋಬರ್ 8, 2025 ರಂದು ಹರೇಟನೂರು ಗ್ರಾಮದ ಪ್ರಸಿದ್ಧ ದ್ಯಾವಮ್ಮ ದೇವಿಯ ದೇವಸ್ಥಾನದ ಬೀಗ ಮುರಿದು ಕಳ್ಳತನ ನಡೆದಿತ್ತು. ದೇವಿಯ ಮೈಮೇಲಿದ್ದ ಚಿನ್ನಾಭರಣಗಳು ಹಾಗೂ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಒಡೆದು ನಗದು ಹಣವನ್ನು ದೋಚಲಾಗಿತ್ತು. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿತ್ತು. ಘಟನೆಗೆ ಸಂಬಂಧಿಸಿದಂತೆ ಅರ್ಚಕ ಆಂಜನೇಯ ಅವರು ಸಿಂಧನೂರು ಗ್ರಾಮೀಣ ಠಾಣೆಗೆ ದೂರು ನೀಡಿದ್ದರು.

ದನಗಳ ಕೊಬ್ಬು ಕೆತ್ತುವ ನೆಪದಲ್ಲಿ ಹೊಂಚು!

ಬಂಧಿತ ಆರೋಪಿಯನ್ನು ತುರ್ವಿಹಾಳ ಗ್ರಾಮದ ನಿವಾಸಿ ಜಿಲಾನಿ ಎಂದು ಗುರುತಿಸಲಾಗಿದೆ. ಈತ ಹಳ್ಳಿಗಳಲ್ಲಿ 'ದನಗಳ ಕೊಬ್ಬು ಕೆತ್ತುವ' ನೆಪದಲ್ಲಿ ಸಂಚರಿಸುತ್ತಾ, ಯಾವ ದೇವಸ್ಥಾನದಲ್ಲಿ ಹೆಚ್ಚಿನ ಆಭರಣಗಳಿವೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದ ಖದೀಮ. ಹರೇಟನೂರು ದೇವಸ್ಥಾನದ ಮೇಲೆ ಕಣ್ಣಿಟ್ಟಿದ್ದ ಇವನು, ಸರಿಯಾದ ಸಮಯ ಸಾಧಿಸಿ ಕಳ್ಳತನ ಮಾಡಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಪೊಲೀಸ್ ತಂಡದಿಂದ ಮಿಂಚಿನ ಕಾರ್ಯಾಚರಣೆ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಂಧನೂರು ಡಿವೈಎಸ್ ಪಿ ಅವರು ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡವು ಸತತ ಕಾರ್ಯಾಚರಣೆ ನಡೆಸಿ ಆರೋಪಿ ಜಿಲಾನಿಯನ್ನು ಸೆರೆಹಿಡಿದಿದೆ. ಬಂಧಿತನಿಂದ 5 ಗ್ರಾಂ ಚಿನ್ನದ ನತ್ತು (₹60,000 ಮೌಲ್ಯ), 5 ಗ್ರಾಂ ತಾಯಿಬೊಟ್ಟು (₹60,000 ಮೌಲ್ಯ) ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಸೇರಿದಂತೆ ಒಟ್ಟು 1.50 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ.

ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದ ಖಾಕಿ

ಹುಂಡಿಯಲ್ಲಿದ್ದ 30 ಸಾವಿರಕ್ಕೂ ಅಧಿಕ ನಗದು, ಬಂಗಾರದ ಬುಗಡಿ, ಖಡ್ಗ ಹಾಗೂ ಲಿಂಗು ಸೇರಿದಂತೆ ಹಲವು ಸಾಮಗ್ರಿಗಳನ್ನು ದೋಚಿದ್ದ ಕಳ್ಳನನ್ನು ಜೈಲಿಗಟ್ಟುವ ಮೂಲಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

YouTube video player