ಭಾನುವಾರ ಹೊಂಬಾಳೆ ಫಿಲ್ಮ್ಸ್, ಏಳು ಭಾಗಗಳಲ್ಲಿ ನಿರ್ಮಾಣವಾಗಲಿರುವ ತನ್ನ ಮಹಾವತಾರ ಸಿನೆಮ್ಯಾಟಿಕ್ ಯೂನಿವರ್ಸ್‌ನ ಎರಡನೇ ಚಿತ್ರ 'ಮಹಾವತಾರ ಪರಶುರಾಮ್' ಅನ್ನು ಘೋಷಿಸಿದೆ. ಸಿನಿಮಾ 2027ರ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ.

ಹೊಂಬಾಳೆ ಫಿಲ್ಮ್ಸ್ ತನ್ನ ಮಹಾವತಾರ ಸಿನೆಮ್ಯಾಟಿಕ್ ಯೂನಿವರ್ಸ್‌ನ ಎರಡನೇ ಆನಿಮೇಟೆಡ್ ಚಿತ್ರ 'ಮಹಾವತಾರ ಪರಶುರಾಮ್' ಅನ್ನು ಘೋಷಿಸಿದೆ. ಅಶ್ವಿನ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದು, ವಿಷ್ಣುವಿನ ಆರನೇ ಅವತಾರದ ಕಥೆಯುಳ್ಳ ಈ ಸಿನಿಮಾ 2027ರ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. ಭಾನುವಾರ ಹೊಂಬಾಳೆ ಫಿಲ್ಮ್ಸ್, ಏಳು ಭಾಗಗಳಲ್ಲಿ ನಿರ್ಮಾಣವಾಗಲಿರುವ ತನ್ನ ಮಹಾವತಾರ ಸಿನೆಮ್ಯಾಟಿಕ್ ಯೂನಿವರ್ಸ್‌ನ ಎರಡನೇ ಚಿತ್ರ 'ಮಹಾವತಾರ ಪರಶುರಾಮ್' ಅನ್ನು ಘೋಷಿಸಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಒಂದು ಪುಟ್ಟ ವಿಡಿಯೋ ಝಲಕ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ.

'ಮಹಾವತಾರ ಪರಶುರಾಮ್' ಬಗ್ಗೆ ಒಂದಿಷ್ಟು

ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿ, ಕ್ಲೀಮ್ ಪ್ರೊಡಕ್ಷನ್ ನಿರ್ಮಿಸಿದ್ದ 'ಮಹಾವತಾರ ನರಸಿಂಹ' ಚಿತ್ರದ ಭಾರಿ ಯಶಸ್ಸಿನ ನಂತರ, ಈಗ 'ಮಹಾವತಾರ ಪರಶುರಾಮ್' ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ಧತೆ ನಡೆದಿದೆ. ಈ ಚಿತ್ರದಲ್ಲಿ ವಿಷ್ಣುವಿನ ಆರನೇ ಅವತಾರದ ಕಥೆಯನ್ನು ಹೇಳಲಾಗುತ್ತಿದೆ. ಅಶ್ವಿನ್ ಕುಮಾರ್ ಈ ಆನಿಮೇಟೆಡ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಪೋಸ್ಟರ್‌ನಲ್ಲಿ "ಸಹನೆ ಎಲ್ಲೆ ಮೀರುವಾಗ, ಪರಶುರಾಮನ ಕೊಡಲಿ ಎದ್ದು ನಿಲ್ಲುತ್ತದೆ!" ಎಂಬ ಟ್ಯಾಗ್‌ಲೈನ್ ಗಮನ ಸೆಳೆಯುತ್ತಿದೆ. ಧರ್ಮವನ್ನು ತೊರೆದು, ಜಗತ್ತನ್ನು ಹಿಂಸಿಸುತ್ತಿದ್ದ ಭ್ರಷ್ಟ ಮತ್ತು ಅಹಂಕಾರಿ ಕ್ಷತ್ರಿಯ ರಾಜರ ದಬ್ಬಾಳಿಕೆಯನ್ನು ಕೊನೆಗಾಣಿಸಲು ವಿಷ್ಣುವು ಹೇಗೆ ಪರಶುರಾಮನ ಅವತಾರ ಎತ್ತಿದ ಎಂಬುದನ್ನು ಈ ಚಿತ್ರವು ಅದ್ಭುತ ದೃಶ್ಯಕಾವ್ಯದ ಮೂಲಕ ತೆರೆದಿಡಲಿದೆ.

ಹೊಂಬಾಳೆ ಫಿಲ್ಮ್ಸ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟರ್ ಮತ್ತು ಝಲಕ್ ಹಂಚಿಕೊಂಡಿದೆ. "ಧರ್ಮಕ್ಕೆ ಗ್ಲಾನಿ ಬಂದಾಗ, ಪರಶು ಎದ್ದು ನಿಲ್ಲುತ್ತಾನೆ. ಮಹಾವತಾರ ಸಿನೆಮ್ಯಾಟಿಕ್ ಯೂನಿವರ್ಸ್‌ನ ಮುಂದಿನ ಚಿತ್ರ 'ಮಹಾವತಾರ ಪರಶುರಾಮ್'. 2027ರ ಡಿಸೆಂಬರ್‌ನಲ್ಲಿ ಬರಲಿದೆ. ಆಳುವವನಲ್ಲ, ಅಧರ್ಮದ ವಿರುದ್ಧದ ಶಕ್ತಿ, ಯುಗಯುಗಗಳ ಸಮತೋಲನವನ್ನು ಮರುಸ್ಥಾಪಿಸುವವನು," ಎಂದು ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದೆ.

View post on Instagram

ನಿರ್ಮಾಪಕರ ಮಾತು

ಚಿತ್ರದ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಅಡಿಪಾಯದ ಬಗ್ಗೆ ಮಾತನಾಡಿದ ನಿರ್ಮಾಪಕ ವಿಜಯ್ ಕಿರಗಂದೂರು, "ನಮ್ಮ ಕಥೆಗಳೇ ನಮ್ಮ ಶಕ್ತಿ. 'ಮಹಾವತಾರ ಪರಶುರಾಮ್' ಮೂಲಕ, ನಮ್ಮ ಬೇರುಗಳ ಶಕ್ತಿಯನ್ನು ಪ್ರೇಕ್ಷಕರಿಗೆ ಮತ್ತೆ ನೆನಪಿಸಲು ನಾವು ಬಯಸಿದ್ದೇವೆ. ಇಂದಿನ ಪೀಳಿಗೆಗೆ ಇಷ್ಟವಾಗುವ ರೀತಿಯಲ್ಲಿ ಇದನ್ನು ಪ್ರಸ್ತುತಪಡಿಸುತ್ತೇವೆ. ಇದು ಪರಂಪರೆ, ಶಕ್ತಿ ಮತ್ತು ಉದ್ದೇಶದ ಕಥೆ," ಎಂದು ಹೇಳಿದರು.

ತಾಂತ್ರಿಕ ತಂಡ ಮತ್ತು ಬಿಡುಗಡೆ

ಅಶ್ವಿನ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಮತ್ತು ಕ್ಲೀಮ್ ಪ್ರೊಡಕ್ಷನ್ ಬ್ಯಾನರ್‌ಗಳ ಅಡಿಯಲ್ಲಿ ವಿಜಯ್ ಕಿರಗಂದೂರು ಮತ್ತು ಶಿಲ್ಪಾ ಧವನ್ ನಿರ್ಮಿಸುತ್ತಿದ್ದಾರೆ. ಸ್ಯಾಮ್ ಸಿ.ಎಸ್. ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರವು 2027ರ ಡಿಸೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.