- Home
- Sports
- Cricket
- BCCI ಕೇಂದ್ರಿಯ ಗುತ್ತಿಗೆ ಪ್ರಕಟ: ಮುಗಿಯಿತಾ ಈ ಮೂವರ ಕ್ರಿಕೆಟ್ ಬದುಕು? ಈ ಲಿಸ್ಟ್ನಲ್ಲಿದೆ ಒಂದು ಅಚ್ಚರಿ ಹೆಸರು
BCCI ಕೇಂದ್ರಿಯ ಗುತ್ತಿಗೆ ಪ್ರಕಟ: ಮುಗಿಯಿತಾ ಈ ಮೂವರ ಕ್ರಿಕೆಟ್ ಬದುಕು? ಈ ಲಿಸ್ಟ್ನಲ್ಲಿದೆ ಒಂದು ಅಚ್ಚರಿ ಹೆಸರು
ನವದೆಹಲಿ: 2025-26ನೇ ಸಾಲಿನ ವಾರ್ಷಿಕ ಕೇಂದ್ರಿಯ ಗುತ್ತಿಗೆಯನ್ನು BCCI ಘೋಷಿಸಿದೆ. ಈ ಬಾರಿ ಒಟ್ಟು 30 ಆಟಗಾರರು ಎ, ಬಿ, ಸಿ ದರ್ಜೆಯ ಗುತ್ತಿಗೆ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಪ್ರಮುಖ ಮೂವರು ಆಟಗಾರರನ್ನು ಕೈಬಿಡಲಾಗಿದ್ದು, ಇವರ ಕ್ರಿಕೆಟ್ ಭವಿಷ್ಯ ಮುಗಿಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿವೆ.

BCCI ಕಾಂಟ್ರ್ಯಾಕ್ಟ್ನಲ್ಲಿ ರೋಹಿತ್-ಕೊಹ್ಲಿಗೆ ಹಿಂಬಡ್ತಿ
ಬಿಸಿಸಿಐ ನೂತನವಾಗಿ ಸೋಮವಾರ ಪ್ರಕಟಿಸಿದ ಸೆಂಟ್ರಲ್ ಕಾಂಟ್ರ್ಯಾಕ್ಟ್ನಲ್ಲಿ ಎ+ ಗ್ರೇಡ್ ರದ್ದು ಮಾಡಲಾಗಿದ್ದು, ಮಾಜಿ ನಾಯಕರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯವರನ್ನು ಎ+ ಗ್ರೇಡ್ನಿಂದ ನೇರವಾಗಿ ಬಿ ಗ್ರೇಡ್ಗೆ ಹಿಂಬಡ್ತಿ ನೀಡಲಾಗಿದೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಘೋಷಿಸಿದ್ದು, ಕೇವಲ ಏಕದಿನ ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
'ಎ' ಗ್ರೇಡ್ನಲ್ಲಿ ಮೂವರು ಆಟಗಾರರಿಗೆ ಸ್ಥಾನ
ಇದೀಗ 'ಎ' ಗ್ರೇಡ್ ಹೊಂದಿರುವ ಆಟಗಾರರು ಬಿಸಿಸಿಐನಿಂದ ವಾರ್ಷಿಕ 5 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ. ಇನ್ನು 'ಬಿ' ಗ್ರೇಡ್ನಲ್ಲಿ 3 ಕೋಟಿ ಹಾಗೂ 'ಸಿ' ಗ್ರೇಡ್ ಹೊಂದಿರುವ ಆಟಗಾರರು ಒಂದು ಕೋಟಿ ರುಪಾಯಿ ವಾರ್ಷಿಕ ಸಂಭಾವನೆ ಪಡೆಯಲಿದ್ದಾರೆ. ಸದ್ಯ 'ಎ' ಗ್ರೇಡ್ನಲ್ಲಿ ಶುಭ್ಮನ್ ಗಿಲ್, ರವೀಂದ್ರ ಜಡೇಜಾ ಹಾಗೂ ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದಾರೆ. ಬಿ ಗ್ರೇಡ್ನಲ್ಲಿ ರೋಹಿತ್, ಕೊಹ್ಲಿ, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಪಂತ್, ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಸ್ಥಾನ ಪಡೆದಿದ್ದಾರೆ.
ಈ ಮೂವರು ಸ್ಟಾರ್ ಆಟಗಾರರಿಗಿಲ್ಲ ಸ್ಥಾನ!
ಆದರೆ ಈ ಬಾರಿಯ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ನಲ್ಲಿ ಸ್ಥಾನಗಿಟ್ಟಿಲು ಭಾರತದ ಮೂವರು ಪ್ರಮುಖ ಆಟಗಾರರು ವಿಫಲವಾಗಿದ್ದಾರೆ. ಈ ಮೂಲಕ ಈ ಆಟಗಾರರ ಕ್ರಿಕೆಟ್ ಬದುಕು ಮುಗಿಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಅಷ್ಟಕ್ಕೂ ಯಾರು ಆ ಮೂವರು ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
1. ಮೊಹಮ್ಮದ್ ಶಮಿ:
ಟೀಂ ಇಂಡಿಯಾದ ಅತ್ಯಂತ ನಂಬಿಗಸ್ಥ ಹಾಗೂ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿಯನ್ನು ಇದೇ ಮೊದಲ ಬಾರಿಗೆ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ನಿಂದ ಕೈಬಿಡಲಾಗಿದೆ. ಶಮಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಾದ ಬಳಿಕ ಗಾಯದಿಂದ ಕೆಲಕಾಲ ಕ್ರಿಕೆಟ್ನಿಂದ ಹೊರಗುಳಿದಿದ್ದ ಶಮಿ, ಆ ಬಳಿಕ ದೇಶಿ ಕ್ರಿಕೆಟ್ನಲ್ಲಿ ಅಸಾಧಾರಣ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಹೀಗಿದ್ದೂ ಶಮಿಯನ್ನು ಬಿಸಿಸಿಐ ಕಡೆಗಣಿಸಿದೆ. ಈ ಮೂಲಕ ಶಮಿ ಕ್ರಿಕೆಟ್ ಭವಿಷ್ಯದ ಕುರಿತಂತೆ ಪ್ರಶ್ನೆಗಳು ಏಳಲಾರಂಭಿಸಿವೆ.
2. ಸರ್ಫರಾಜ್ ಖಾನ್:
ಮುಂಬೈ ಮೂಲದ ಪ್ರತಿಭಾನ್ವಿತ ಮಧ್ಯಮ ಕ್ರಮಾಂಕದ ಬ್ಯಾಟರ್ ಸರ್ಫರಾಜ್ ಖಾನ್ ಅವರನ್ನು ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ನಿಂದ ಕೈಬಿಟ್ಟಿದೆ. ಕಿವೀಸ್ ಎದುರಿನ ಟೆಸ್ಟ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಸರ್ಫರಾಜ್ ಖಾನ್ ಆ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪದೇ ಪದೇ ಎಡವುತ್ತಿದ್ದರು. ದೇಶಿ ಕ್ರಿಕೆಟ್ನಲ್ಲಿ ಸರ್ಫರಾಜ್ ಶತಕಗಳ ಮೇಲೆ ಶತಕ ಸಿಡಿಸಿದರೂ ಬಿಸಿಸಿಐ, ಸರ್ಫರಾಜ್ ಖಾನ್ ಕಡೆ ಕಣ್ಣೆತ್ತಿಯೂ ನೋಡುತ್ತಿಲ್ಲ. ಸರ್ಫರಾಜ್ ಖಾನ್ ಮತ್ತೆ ಭಾರತ ತಂಡಕ್ಕೆ ಮರಳಲು ಹರಸಾಹಸ ಪಡಬೇಕಿದೆ.
3. ಇಶಾನ್ ಕಿಶನ್:
ಈ ಕೇಳಿದಾಗ ನಿಮಗೂ ಅಚ್ಚರಿಯಾಗಬಹುದು. ಇತ್ತೀಚೆಗೆ ಕಿವೀಸ್ ಎದುರಿನ ಟಿ20 ಸರಣಿಯಲ್ಲಿ ಸ್ಪೋಟಕ ಶತಕ ಸಿಡಿಸಿದ್ದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ಸದ್ಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಿದ್ದೂ ಜಾರ್ಖಂಡ್ ಮೂಲದ ಎಡಗೈ ಬ್ಯಾಟರ್ ಇಶಾನ್ ಕಿಶನ್ ಅವರನ್ನು ಸೆಂಟ್ರಲ್ ಕಾಂಟ್ರ್ಯಾಕ್ಟ್ನಿಂದ ಕೈಬಿಟ್ಟಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

