Bidar: ಬಿಸಿಲಾಘಾತಕ್ಕೆ ಕುಸಿದು ಸಾವನ್ನಪ್ಪಿದ 20 ವರ್ಷದ ಯುವಕ; ರಸ್ತೆಬದಿ ಪತ್ತೆಯಾದ ಶವ
ಬೀದರ್ ಜಿಲ್ಲೆಯ ಕಮಲನಗರದಲ್ಲಿ 20 ವರ್ಷದ ಯುವಕನೋರ್ವ ರಸ್ತೆ ಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಉತ್ತರ ಪ್ರದೇಶ ಮೂಲದ ಮೊಹ್ಮದ್ ಸಮೀರ್, ಬಿಸಿಲಿನ ತಾಪ ತಾಳಲಾರದೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬಿಸಿಲಿನ ಹೊಡೆತಕ್ಕೆ ಯುವಕನ ಸಾವು?
ಏಪ್ರಿಲ್ 14ರಂದು 20 ವರ್ಷದ ಯುವಕನೋರ್ವ ರಸ್ತೆ ಬದಿ ಶವವಾಗಿ ಪತ್ತೆಯಾಗಿದ್ದು, ಆತನ ಸಾವಿಗೆ ಅತಿಯಾದ ಬಿಸಿಲು ಕಾರಣ ಎಂದು ಹೇಳಲಾಗುತ್ತಿದೆ. ಬೀದರ್ ಜಿಲ್ಲೆಯ ಕಮಲನಗರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50 ಬಳಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು.
20 ವರ್ಷದ ಮೊಹ್ಮದ್ ಸಮೀರ್
ಮೃತ ಯುವಕನನ್ನು ಉತ್ತರ ಪ್ರದೇಶ ಮೂಲದ ಮೊಹ್ಮದ್ ಸಮೀರ್ ಎಂದು ಗುರುತಿಸಲಾಗಿದೆ. ಕಳೆದ ಹಲವು ತಿಂಗಳಿಂದ ಮೃತ ಸಮೀರ್ ಕಮಲನಗರ ಪಟ್ಟಣದ ಕಟಿಂಗ್ ಶಾಪ್ನಲ್ಲಿ ಕೆಲಸ ಮಾಡಿಕೊಂಡಿದ್ದನು. ಬಿಸಿಲಿನ ತಾಪ ತಾಳಲಾರದೇ ತಲೆ ಸುತ್ತು ಬಿದ್ದು ಸಮೀರ್ ಮೃತನಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಏಪ್ರಿಲ್ 14ರಂದು ನಡೆದ ಘಟನೆ
ಏಪ್ರಿಲ್ 14ರಂದು ಬೆಳ್ಳಗ್ಗೆ 10 ಗಂಟೆಗೆ ತರಕಾರಿ ತೆಗೆದುಕೊಂಡು ಬರಲು ಸಮೀರ್ ರೂಮ್ನಿಂದ ಹೊರ ಬಂದಿದ್ದಾನೆ. ತರಕಾರಿ ಖರೀದಿಸಿ ಹಿಂದಿರುಗುವಾಗ ಬಿಸಿಲಿನ ಪ್ರಮಾಣ ಏರಿಕೆಯಾಗಿತ್ತು. ಈ ವೇಳೆ ರಸ್ತೆ ಬದಿಯ ಮೆಕಾನಿಕ್ ಅಂಗಡಿಯಲ್ಲಿ ನೀರು ಕುಡಿದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ್ದಿದ್ದನು. ಸ್ವಲ್ಪ ಚೇತರಿಸಿಕೊಂಡ ನಂತರ ಸಮೀರ್ ಡಿಗ್ಗಿ ಗ್ರಾಮಕ್ಕೆ ಹೊರಟಿದ್ದನು.
ಪ್ರಕರಣ ದಾಖಲು
ಮಾರ್ಗಮಧ್ಯೆಯೇ ಸಮೀರ್ ತಲೆಸುತ್ತು ಬಂದು ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು ಮಾಹಿತಿ ನೀಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಶ್ರೀಕಾಂತ್ ಅಲ್ಲಾಪುರೆ ಮತ್ತು ಪಿಎಸ್ಐ ಆಶಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಮೀರ್ ತಂದೆ ಲಯಿಕ್ ಅಹ್ಮದ್ ನೀಡಿದ ದೂರಿನ ಮೇರೆಗೆ ಕಮಲನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಮಹಾದುರಂತ; ಆತಂಕದಿಂದ ಕಣ್ಣೀರಿಟ್ಟ ಪ್ರಯಾಣಿಕರು
ಹೆಚ್ಚಾಗುತ್ತಿರುವ ಬಿಸಿಲಿನ ತಾಪಮಾನ
ಈ ವರ್ಷ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ತನ್ನ ಪ್ರಖರತೆ ಹೆಚ್ಚಿಸುತ್ತಾ ಸಾಗಿದ್ದು, ಜನರು ಮನೆಯಿಂದ ಹೊರಗಡೆ ಬರಲು ಭಯಪಡುವಂತಾಗಿದೆ. ಅನಿವಾರ್ಯವಾಗಿ ಹೊರ ಬರುವ ಜನರು ಛತ್ರಿ ಬಳಕೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕಳೆದ ಕೆಲವು ದಿನಗಳಿಂದ ಬೀದರ್ ಜಿಲ್ಲೆಯಲ್ಲಿ 35 ರಿಂದ 38 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ದಾಖಲಾಗುತ್ತಿದೆ. ಬೇಸಿಗೆಯ ಹೊಡೆತಕ್ಕೆ ಈಗಾಗಲೇ ಕೃಷಿಹೊಂಡ, ಹಳ್ಳ, ಕೊಳ್ಳಗಳು ಬತ್ತಿ ಹೋಗುತ್ತಿದ್ದು, ಜಾನುವಾರುಗಳು ಸಹ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಇದನ್ನೂ ಓದಿ: Mysuru: ವೀಕೆಂಡ್ ಪಾರ್ಟಿಯಲ್ಲಿ ಗಲಾಟೆ; ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಟೆಕ್ಕಿ

