- Home
- Life
- Relationship
- ಹನಿಮೂನ್ಗೆ 50 ಮಂದಿ, ಹೆಸ್ರು ಹೇಳಲು 3 ತಿಂಗ್ಳು! ಕೋಟೆ ಪ್ರಭಾಕರ್ ಲವ್ಸ್ಟೋರಿಗೆ ನಾಚಿದ Amruthadhaare ಭೂಮಿಕಾ
ಹನಿಮೂನ್ಗೆ 50 ಮಂದಿ, ಹೆಸ್ರು ಹೇಳಲು 3 ತಿಂಗ್ಳು! ಕೋಟೆ ಪ್ರಭಾಕರ್ ಲವ್ಸ್ಟೋರಿಗೆ ನಾಚಿದ Amruthadhaare ಭೂಮಿಕಾ
ನಟ ಕೋಟೆ ಪ್ರಭಾಕರ್ ಮತ್ತು ಅವರ ಪತ್ನಿ ಮಾಲತಿ 'ಜೋಡಿ ನಂಬರ್ 1' ವೇದಿಕೆಯಲ್ಲಿ ತಮ್ಮ 30 ವರ್ಷಗಳ ದಾಂಪತ್ಯದ ಸ್ವಾರಸ್ಯಕರ ಕಥೆಯನ್ನು ಹಂಚಿಕೊಂಡಿದ್ದಾರೆ. ಮದುವೆಗೆ ಕಾಲು ನೋಡಿ ಒಪ್ಪಿಕೊಂಡಿದ್ದು, 50 ಜನರೊಂದಿಗೆ ಹನಿಮೂನ್ಗೆ ಹೋಗಿದ್ದು ಸೇರಿದಂತೆ ಹಲವು ತಮಾಷೆಯ ಘಟನೆಗಳನ್ನು ಅವರು ಬಹಿರಂಗಪಡಿಸಿದರು.

ನಟ ಕೋಟೆ ಪ್ರಭಾಕರ್- ಮಾಲತಿ ದಂಪತಿ
ಓಂ, ಎಕೆ 47, ಅಸುರ, ಸಾರಥಿ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ, 250ಕ್ಕೂ ವಿವಿಧ ಸಿನಿಮಾಗಳಲ್ಲಿ ಖಳ ನಾಯಕ ಹಾಗೂ ಪೋಷಕ ಪಾತ್ರದಲ್ಲಿ ಜನಮನ ಗೆದ್ದಿರುವವರು ಕೋಟೆ ಪ್ರಭಾಕರ. ಲುಕ್ಕು, ನಟನೆ ಎಲ್ಲವೂ ವಿನಲ್ ರೀತಿ. ಆದರೆ, ಒಳ ಮನಸ್ಸು ಮಾತ್ರ ಸಿಕ್ಕಾಪಟ್ಟೆ ಸಾಫ್ಟ್ ಎನ್ನುತ್ತಲೇ ಜೀ ಕನ್ನಡದ ಜೋಡಿ ನಂಬರ್ 1 ವೇದಿಕೆಯ ಮೇಲೆ ತಮ್ಮ ಲವ್ಸ್ಟೋರಿ ತೆರೆದಿಟ್ಟಿದ್ದಾರೆ ಪ್ರಭಾಕರ್ ಮತ್ತು ಅವರ ಪತ್ನಿ ಮಾಲತಿ.
ಮಾಲತಿ ಎಂದು ಕರೆದಾಗ
ಮದುವೆಯಾಗಿ 30 ವರ್ಷಗಳ ಸಾರ್ಥಕ ಜೀವನ ನಡೆಸುತ್ತಿರುವ ಈ ಜೋಡಿಯ ಸ್ಟೋರಿ ಮಾತ್ರ ಸಕತ್ ಇಂಟರೆಸ್ಟಿಂಗ್ ಆಗಿದೆ. ಮದುವೆಯಾಗಿ ಮೂರು ತಿಂಗಳಾದರೂ ಮಾಲತಿ ಎಂದು ಕರೆಯಲಿಲ್ಲವಂತೆ ನಟ. ಅದೊಮ್ಮೆ ಮನೆಯಲ್ಲಿ ನೆಂಟರು ಬಂದಾಗ, ಅಡುಗೆ ಮಾಡುತ್ತಿದ್ದೆ. ನೆಂಟರು ಬಂದ ಗಾಬರಿಯಲ್ಲಿ ಅವರು ಮಾಲತಿ ಎಂದು ಕರೆದುಬಿಟ್ಟರು. ನನಗೆ ದಿಕ್ಕೇ ತೋಚದಾಯಿತು, ಗಾಬರಿಯಿಂದ ಕೈಯಲ್ಲಿದ್ದ ಅಡುಗೆ ಪಾತ್ರೆಯನ್ನೇ ಬಿಟ್ಟುಬಿಟ್ಟೆ ಎಂದು ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಮಾಲತಿ. ಈ ಷೋಗೆ ಅತಿಥಿಯಾಗಿ ಬಂದಿರೋ ಅಮೃತಧಾರೆ ಭೂಮಿಕಾ ಉರ್ಫ್ ಛಾಯಾ ಸಿಂಗ್ ಅವರು, ಇದನ್ನು ಕೇಳಿ ಬಿದ್ದೂ ಬಿದ್ದೂ ನಕ್ಕಿದ್ದಾರೆ.
ಕಾಲು ನೋಡಿ ಹುಡುಗಿ ಓಕೆ
ಮದುವೆಗೆ ಹುಡುಗಿ ನೋಡಲು ಬಂದಾಗ, ಹೋಗಿ ಹೋಗಿ ಗಿಣಿಯನ್ನ ಗಿಡುಗನಿಗೆ ಕೊಡ್ತಿದ್ದೀರಾ. ಅವನು ನೋಡಿದ್ರೆ ಹಂಗವ್ನೆ’ ಅಂತ ನೆರೆ ಮನೆಯವರು ಹೇಳಿದ್ದರಂತೆ. ಆಗ ಗುಣ ನೋಡಿ ಹೆಣ್ಣು ಕೊಡಬೇಕಮ್ಮಾ ಎಂದು ನನ್ನ ಅಪ್ಪ ಹೇಳಿದ್ದರು. ಅದು ನಿಜವಾಯ್ತು. ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ತಾರೆ ಎಂದರು ಮಾಲತಿ. ಇದೇ ವೇಳೆ ಮದುವೆಗೆ ಹುಡುಗಿ ನೋಡಲು ಹೋದಾಗ ಮುಖ ನೋಡಲು ಭಯವಾಗಿ ಬರೀ ಕಾಲು ನೋಡಿ ಹುಡುಗಿಯನ್ನು ಒಪ್ಪಿಕೊಂಡಿದ್ರಂತೆ ನಟ!
ಹನಿಮೂನ್ ಪಯಣ
ಈ ವೇಳೆ ಹನಿಮೂನ್ ಬಗ್ಗೆಯೂ ಮಾತನಾಡಿದೆ ಜೋಡಿ. ನಮ್ಮ ಹನಿಮೂನ್ಗೆ 50 ಜನ ಹೋಗಿದ್ವಿ. ಒಂದು ಬಸ್ ಮಾಡಿದ್ದರು. ನಮಗೆ ಅಂತ ಬೇರೆ ರೂಮ್ ಇತ್ತು. ಆದ್ರೆ ನಮ್ಮ ಅತ್ತೆ ಅವನು ಆ ರೂಮ್ನಲ್ಲಿರಲಿ.. ನೀನು ಈ ರೂಮ್ನಲ್ಲಿರು ಎಂದುಬಿಟ್ಟರು. ಹೀಗೆ ಹನಿಮೂನ್ ಮುಗೀತು ಎಂದು ನಕ್ಕಿದ್ದಾರೆ ಮಾಲತಿ.
ದೇವತೆಯಂತೆ ಕಂಡಿದ್ದಾರೆ
ಇದೇ ವೇಳೆ, ಮೂವತ್ತು ವರ್ಷಗಳ ಈ ಪಯಣದಲ್ಲಿ ದೇವತೆಯಂತೆ ನನ್ನನ್ನು ನೋಡಿಕೊಂಡಿದ್ದಾರೆ ಮಾಲತಿ ಎಂದು ನಟ, ಪತ್ನಿಯ ಗುಣಗಾನ ಮಾಡಿದ್ದಾರೆ. ನಾನು ಇವತ್ತು ಈ ಮಟ್ಟಕ್ಕೆ ಬೆಳೆದಿದ್ದೇನೆ ಅಂದ್ರೆ ಅದಕ್ಕೆ ಕಾರಣ ಇವರು. ನನ್ನ ಹೆಂಡತಿಯಿಂದಲೇ ನಾನು ಉದ್ಧಾರ ಆಗಿದ್ದು ಎಂದಿದ್ದಾರೆ.
ಕಣ್ಣೀರಾದ ನಟ
ಖಳ ನಟ ಆಗಿರುವ ಕಾರಣ ಹೆಚ್ಚಿನ ಸಿನಿಮಾಗಳಲ್ಲಿ ಇವರು ಸಾಯುವ ಸೀನ್ ಇರುತ್ತೆ. ಅದನ್ನೆಲ್ಲಾ ನಾನು ನೋಡಲ್ಲ. ಟಿವಿಯಲ್ಲಿ ಹಾಕಿದರೂ ನೋಡಲ್ಲ ಎಂದು ಮಾಲತಿ ಹೇಳಿದರೆ, ಅಲ್ಲಿ ನನ್ನದು ಖಳನಟನ ರೋಲ್, ಆದರೆ ಈ ವೇದಿಕೆಯಲ್ಲಿ ನನಗೆ ಹೀರೋ ರೀತಿ ಫೀಲ್ ಆಗತ್ತೆ ಎಂದು ಪ್ರಭಾಕರ್ ಕಣ್ಣೀರಾದರು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

