- Home
- News
- State
- ಡೆವಿಲ್ ಇನ್ ಟ್ರಬಲ್: ನಟ ದರ್ಶನ್ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು
ಡೆವಿಲ್ ಇನ್ ಟ್ರಬಲ್: ನಟ ದರ್ಶನ್ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಳಿ ಪರವಾನಗಿ ಪಡೆದ ಎರಡು ಶಸ್ತ್ರಾಸ್ತ್ರಗಳಿದ್ದವು. ಬೆಂಗಳೂರು ಪೊಲೀಸರು ಪಿಸ್ತೂಲನ್ನು ವಶಪಡಿಸಿಕೊಂಡಿದ್ದರೂ, ಮೈಸೂರಿನಲ್ಲಿ ಪರವಾನಗಿ ಪಡೆದ .22 mm ರೈಫಲ್ ಮತ್ತು ಬುಲೆಟ್ಗಳು ಇನ್ನೂ ಸೀಜ್ ಆಗಿಲ್ಲ.

ದರ್ಶನ್ ಬಳಿ ಮತ್ತೊಂದು ಪಿಸ್ತೂಲ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಸಂಬಂಧಿಸಿದ ಮತ್ತೊಂದು ಸ್ಫೋಟಕ ಸುದ್ದಿ ಈಗ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದರ್ಶನ್ ಬಳಿ ಪರವಾನಗಿ ಪಡೆದ ಎರಡು ಶಸ್ತ್ರಾಸ್ತ್ರಗಳಿದ್ದವು. ಇವುಗಳಲ್ಲಿ .32 mm ವಾಲ್ಥರ್ PPK ಪಿಸ್ತೂಲನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರೂ, .22 mm ರೈಫಲ್ ಮತ್ತು ಬುಲೆಟ್ಗಳು ಇನ್ನೂ ಸೀಜ್ ಆಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಒಂದು ಮಾತ್ರ ಕೊಟ್ಟು, ಇನ್ನೊಂದು ಕೊಡಲು ಕಳ್ಳಾಟ
ಕಳೆದ ವರ್ಷ ಡಿಸೆಂಬರ್ 24ರಂದೇ ದರ್ಶನ್ ಅವರ ಪಿಸ್ತೂಲ್ ಲೈಸೆನ್ಸ್ ಅನ್ನು ಸಸ್ಪೆಂಡ್ ಮಾಡಲಾಗಿತ್ತು. ನಂತರ ಜನವರಿ 22ರಂದು RR ನಗರ ಪೊಲೀಸರು ನಟನ ಅಪಾರ್ಟ್ಮೆಂಟ್ನಿಂದ ಪಿಸ್ತೂಲನ್ನು ವಶಪಡಿಸಿಕೊಂಡಿದ್ದರು. ಆದರೆ, ಇದರ ಜೊತೆಗೆ ದರ್ಶನ್ ಬಳಿ ಮೈಸೂರು ಗ್ರಾಮಾಂತರ ಪೊಲೀಸರು ನೀಡಿದ ಪರವಾನಗಿ ಹೊಂದಿರುವ .22 mm ರೈಫಲ್ ಮತ್ತು ಬುಲೆಟ್ಗಳೂ ಇವೆ. ಈ ರೈಫಲ್ ಮೈಸೂರಿನ ಫಾರ್ಮ್ ಹೌಸ್ನಲ್ಲಿ ಅಥವಾ ಬೆಂಗಳೂರಿನ ಮನೆಯಲ್ಲಿ ಅಡಗಿದೆ ಎನ್ನಲಾಗಿದೆ.
ಪೊಲೀಸ್ ನಿರ್ಲಕ್ಷ್ಯವೋ? ದರ್ಶನ್ ಕಳ್ಳಾಟವೋ?
ಕೊಲೆ ಅಥವಾ ಗಂಭೀರ ಅಪರಾಧ ಪ್ರಕರಣದಲ್ಲಿ ಆರೋಪಿಯಾದ ತಕ್ಷಣವೇ ಆತನ ಬಳಿಯಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ತಕ್ಷಣ ವಶಕ್ಕೆ ಪಡೆಯಬೇಕು ಎಂಬ ನಿಯಮವಿದೆ. ಗನ್ ಬಳಸಿ ಆರೋಪಿಯು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಅಥವಾ ಬೇರೆ ಅಪರಾಧ ಚಟುವಟಿಕೆ ನಡೆಸುವ ಸಾಧ್ಯತೆ ಇರುವುದರಿಂದ ಈ ಕ್ರಮ ಅನಿವಾರ್ಯ. ಆರೋಪಿಯು ಶಸ್ತ್ರಾಸ್ತ್ರ ನೀಡಲು ನಿರಾಕರಿಸಿದರೆ, ಆತನ ಮೇಲೆ ‘ಆರ್ಮ್ಸ್ ಆ್ಯಕ್ಟ್’ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ಸಹ ದಾಖಲಿಸಬಹುದು.
ರೈಫಲ್, ಬುಲೆಟ್ ಎರಡೂ ಸೀಜ್ ಮಾಡಿಲ್ಲ
ಆದರೆ, ರೇಣುಕಾಸ್ವಾಮಿ ಕೊಲೆ ಕೇಸ್ ದಾಖಲಾಗಿ ತಿಂಗಳುಗಳು ಕಳೆದರೂ ಮೈಸೂರು ಗ್ರಾಮಾಂತರ ಪೊಲೀಸರು ದರ್ಶನ್ ಬಳಿ ಇರುವ ರೈಫಲ್ ಮತ್ತು ಬುಲೆಟ್ಗಳನ್ನು ಸೀಜ್ ಮಾಡಿಲ್ಲ. ಒಂದು ಕಡೆ ಬೆಂಗಳೂರು ಪೊಲೀಸರು ತಕ್ಷಣ ಕ್ರಮ ಕೈಗೊಂಡರೆ, ಇನ್ನೊಂದು ಕಡೆ ಮೈಸೂರು ಗ್ರಾಮಾಂತರ ಪೊಲೀಸರು ಕೊಲೆ ಆರೋಪಿಯ ಬಳಿ ಇರುವ ಮಾರಕ ರೈಫಲ್ನ ಕುರಿತು ನಿರ್ಲಕ್ಷ್ಯ ತಾಳಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ದರ್ಶನ್ ಪ್ರಭಾವಕ್ಕೆ ಮಣಿದರೇ ಪೊಲೀಸರು
ಇದು ಪೊಲೀಸರ ಕರ್ತವ್ಯ ಲೋಪವೇ ಅಥವಾ ದರ್ಶನ್ನ ಪ್ರಭಾವಕ್ಕೆ ಮಣಿದಿರುವ ಕಳ್ಳಾಟವೇ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಕೂಡಲೇ ಮೈಸೂರು ಗ್ರಾಮಾಂತರ ಪೊಲೀಸರು ಈ ರೈಫಲನ್ನು ವಶಕ್ಕೆ ಪಡೆದು, ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

