ಸಂವಿಧಾನದಿಂದ 'ಜಾತ್ಯತೀತ' ಮತ್ತು 'ಸಮಾಜವಾದಿ' ಪದಗಳನ್ನು ತೆಗೆದುಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ಸವಾಲು ಹಾಕಿದ್ದಾರೆ. 

ಹೈದರಾಬಾದ್ (ಜು.4): ಸಂವಿಧಾನದಿಂದ 'ಜಾತ್ಯತೀತ' ಮತ್ತು 'ಸಮಾಜವಾದಿ' ಪದಗಳನ್ನು ತೆಗೆದುಹಾಕಲು ಯಾವುದೇ ನಾಯಕನಿಗೆ ಸಾಧ್ಯವಿಲ್ಲ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದರು.

ಶುಕ್ರವಾರ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿರುವುದರ ಕೀರ್ತಿ ಕಾರ್ಯಕರ್ತರ ಶ್ರಮಕ್ಕೆ ಸಲ್ಲುತ್ತದೆ. ಕೆಸಿಆರ್‌ರಂತಹವರನ್ನು ಸೋಲಿಸಿ, ನೀವು ರಾಜ್ಯದಲ್ಲಿ ಕಾಂಗ್ರೆಸ್‌ನ ಬಲವಾದ ಸರ್ಕಾರವನ್ನು ಸ್ಥಾಪಿಸಿದ್ದೀರಿ ಎಂದು ಕಾರ್ಯಕರ್ತರನ್ನು ಕೊಂಡಾಡಿದರು.

ಪ್ರತಿಯೊಬ್ಬರಿಗೆ 15 ಲಕ್ಷ ಬಂತಾ?

ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡ ಖರ್ಗೆ, ಪ್ರತಿಯೊಬ್ಬರಿಗೆ 15 ಲಕ್ಷ ರೂ., ವರ್ಷಕ್ಕೆ ಎರಡು ಕೋಟಿ ಉದ್ಯೋಗ, ರೈತರ ಆದಾಯ ದ್ವಿಗುಣಗೊಳಿಸುವ ಮೋದಿ ಭರವಸೆಗಳು ಕೇವಲ ಸುಳ್ಳುಗಳಾಗಿವೆ ಎಂದು ಆರೋಪಿಸಿದ ಅವರು, ಬಿಜೆಪಿ ಸಾರ್ವಜನಿಕರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಹೈದರಾಬಾದ್‌ನಲ್ಲಿ ಸ್ಥಾಪಿಸಿದ 50 ಸಾರ್ವಜನಿಕ ಸಂಸ್ಥೆಗಳು ಮತ್ತು ಕಾರ್ಖಾನೆಗಳ ಕಾಂಗ್ರೆಸ್ ಸರ್ಕಾರದ ಕೊಡುಗೆ. ಬಿಜೆಪಿ ಯಾವುದೇ ಕೊಡುಗೆ ನೀಡಿಲ್ಲ ಎಂದು ಕಿಡಿಕಾರಿದರು.

ಹೊಸಬಾಳೆ ಹೇಳಿಕೆಗೆ ಖರ್ಗೆ ತಿರುಗೇಟು:

ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ 'ಜಾತ್ಯತೀತ' ಮತ್ತು 'ಸಮಾಜವಾದಿ' ಪದಗಳನ್ನು ಸಂವಿಧಾನದಿಂದ ತೆಗೆದುಹಾಕಬೇಕು ಎಂಬ ಹೇಳಿಕೆಗೆ ತಿರುಗೇಟು ನೀಡಿದ ಖರ್ಗೆ, 'ಬಿಜೆಪಿಯ ಸ್ವಂತ ಸಂವಿಧಾನದಲ್ಲಿ ಈ ಪದಗಳಿವೆ. ಮೋದಿ ಮತ್ತು ಶಾ ಇವುಗಳನ್ನು ದ್ವೇಷಿಸುತ್ತಿದ್ದರೆ, ತಮ್ಮ ಪಕ್ಷದ ಸಂವಿಧಾನದಿಂದ ಏಕೆ ತೆಗೆಯಲಿಲ್ಲ? ಎಂದು ಪ್ರಶ್ನಿಸಿದರು. ಬಿಜೆಪಿಯ ದಾಖಲೆಯಲ್ಲಿ ಜಾತ್ಯತೀತತೆ, ಸಮಾಜವಾದ, ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ಬದ್ಧತೆ ಇದೆ ಎಂದು ಉಲ್ಲೇಖಿಸಿದರು.

ವಿದೇಶಾಂಗ ನೀತಿ ವಿಫಲ:

ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿದ ಖರ್ಗೆ, ಚೀನಾ, ಪಾಕಿಸ್ತಾನ, ಮತ್ತು ಈಗ ನೇಪಾಳ ಕೂಡ ಭಾರತದಿಂದ ದೂರವಾಗುತ್ತಿದೆ. ಮೋದಿ ಕೇವಲ ದೊಡ್ಡದಾಗಿ ಮಾತನಾಡುತ್ತಾರೆ, ಆದರೆ ಕಾರ್ಯವಿಲ್ಲ. ಇಂದಿರಾ ಗಾಂಧಿ ಅವರಿಗೆ ಅಮೆರಿಕದ ಭಯವಿರಲಿಲ್ಲ. ಧೈರ್ಯದಿಂದ ಪಾಕಿಸ್ತಾನವನ್ನು ಎರಡು ಭಾಗವಾಗಿಸಿದರು. ಕಾಂಗ್ರೆಸ್‌ಗೆ ಯಾವುದೇ ಬಾಹ್ಯ ಶಕ್ತಿಯ ಭಯವಿಲ್ಲ ಎಂದು ಒತ್ತಿಹೇಳಿದರು. ನಾವು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದೇವೆ, ಆದರೆ ಬಿಜೆಪಿ-ಆರ್‌ಎಸ್‌ಎಸ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವ ಕೊಡುಗೆಯನ್ನೂ ನೀಡಿಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.