ದೆಹಲಿ ಹೈಕೋರ್ಟ್ ಆದೇಶ ಉಲ್ಲಂಘಿಸಿ ಸೇವಾ ಶುಲ್ಕ ವಿಧಿಸಿದ ಐದು ದೆಹಲಿ ರೆಸ್ಟೋರೆಂಟ್ಗಳ ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕ್ರಮ ಕೈಗೊಂಡಿದೆ. ಮಖ್ನಾ ಡೆಲಿ, ಕ್ಸೆರೋ ಕೋರ್ಟ್ಯಾರ್ಡ್ ಸೇರಿದಂತೆ ಐದು ರೆಸ್ಟೋರೆಂಟ್ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕಡ್ಡಾಯ ಸೇವಾ ಶುಲ್ಕ ವಸೂಲಿ ಗ್ರಾಹಕ ರಕ್ಷಣಾ ಕಾಯ್ದೆ ಉಲ್ಲಂಘನೆಯಾಗಿದೆ.
ನವದೆಹಲಿ (ಏ.29): ಈಗಾಗಲೇ ದೆಹಲಿ ಸೇರಿದಂತೆ ದೇಶದಾದ್ಯಂತ ಯಾವುದೇ ರೆಸ್ಟೋರೆಂಟ್ಗಳಲ್ಲಿ ಸೇವಾ ಶುಲ್ಕವನ್ನು ಪಡೆಯಬಾರದು ಎಂದು ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ. ಆದರೆ, ಇದೀಗ ದೆಹಲಿ ಹೈಕೋರ್ಟ್ ಆದೇಶವನ್ನೂ ಮೀರಿ 5 ರೆಸ್ಟೋರೆಂಟ್ಗಳು ಸೇವಾ ಶುಲ್ಕವನ್ನು ವಸೂಲಿ ಮಾಡಿದ್ದು, ಸಂಬಂಧಪಟ್ಟ ರೇಸ್ಟೋರೆಂಟ್ ಮಾಲೀಕರ ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕ್ರಮ ಕೈಗೊಂಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ನಮ್ಮ ದೇಶದಲ್ಲಿ ಕಾರ್ಯ ನಿರ್ವಹಿಸುವ ರೆಸ್ಟೋರೆಂಟ್ಗಳಲ್ಲಿ ಗ್ರಾಹಕರಿಗೆ ಒತ್ತಾಯ ಪೂರ್ವಕವಾಗಿ ಸೇವಾ ಶುಲ್ಕ ವಿಧಿಸದಂತೆ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಹೀಗಿದ್ದರೂ ಸಹ ಕೆಲವೊಂದು ರೆಸ್ಟೋರೆಂಟ್ಗಳು ಕೋರ್ಟ್ ಆದೇಶವನ್ನು ಕೇರ್ ಮಾಡದೇ ಸೇವಾ ಶುಲ್ಕ ವಸೂಲಿ ಮಾಡುತ್ತಿದ್ದು, ಅವುಗಳ ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ದೆಹಲಿಯ 5 ರೆಸ್ಟೋರೆಂಟ್ಗಳ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿದೆ ಎಂದರು.
ಕಡ್ಡಾಯ ಸೇವಾ ಶುಲ್ಕ ವಿಧಿಸುವಿಕೆ ಮತ್ತು ಸೇವಾ ಶುಲ್ಕದ ಮೊತ್ತ ಮರುಪಾವತಿಸದ ಬಗ್ಗೆ ರೆಸ್ಟೋರೆಂಟ್ಗಳ ವಿರುದ್ಧ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ದೂರುಗಳನ್ನು ಸ್ವೀಕರಿಸಿದೆ. ದೆಹಲಿ ಹೈಕೋರ್ಟ್ ತೀರ್ಪಿನ ಹೊರತಾಗಿಯೂ ಕಡ್ಡಾಯ ಸೇವಾ ಶುಲ್ಕ ಮರುಪಾವತಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ CCPA ಬಿಗಿ ಕ್ರಮ ಕೈಗೊಂಡಿದೆ. ದೆಹಲಿಯ ಮಖ್ನಾ ಡೆಲಿ, ಕ್ಸೆರೋ ಕೋರ್ಟ್ಯಾರ್ಡ್, ಕ್ಯಾಸಲ್ ಬಾರ್ಬೆಕ್ಯೂ, ಚಾಯೋಸ್ ಮತ್ತು ಫಿಯೆಸ್ಟಾ ಬೈ ಬಾರ್ಬೆಕ್ಯೂ ನೇಷನ್ ರೆಸ್ಟೋರೆಂಟ್ಗಳಿಗೆ ಗ್ರಾಹಕ ರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ನೋಟಿಸ್ ನೀಡಿದ್ದು, ಕಡ್ಡಾಯ ಸೇವಾ ಶುಲ್ಕದ ಮೊತ್ತವನ್ನು ಮರುಪಾವತಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದರು.
ಇದನ್ನೂ ಓದಿ: ನೀರು ಮಾತ್ರವಲ್ಲ, ಪಾಕಿಸ್ತಾನಕ್ಕೆ ಈ ವಸ್ತುಗಳ ಪೂರೈಕೆಯನ್ನು ಭಾರತ ನಿಲ್ಲಿಸಬಹುದು!
ಯಾವುದೇ ನೆಪದಲ್ಲೂ ಸೇವಾ ಶುಲ್ಕ ವಿಧಿಸುವಂತಿಲ್ಲ: ಯಾವುದೇ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಸೇವಾ ಶುಲ್ಕಕ್ಕೆ ಗ್ರಾಹಕರನ್ನು ಒತ್ತಾಯಿಸಬಾರದು. ಜೊತೆಗೆ ಮತ್ತಿನ್ಯಾವುದೇ ರೂಪದಲ್ಲಿ ಗ್ರಾಹಕರಿಂದ ಸೇವಾಶುಲ್ಕ ಸಂಗ್ರಹ ಮಾಡಬಾರದು. ಹೋಟೆಲ್ ಅಥವಾ ರೆಸ್ಟೋರೆಂಟ್ನ ಬಿಲ್ನಲ್ಲಿ ಸ್ವಯಂ ಚಾಲಿತವಾಗಿ ಅಥವಾ ಪೂರ್ವ ನಿಯೋಜಿತವಾಗಿ ಸೇವಾ ಶುಲ್ಕವನ್ನೂ ಸೇರಿಸಬಾರದು. ಆಹಾರಕ್ಕೆ ನಿಗದಿ ಮಾಡಿದ ಬೆಲೆಯನ್ನಷ್ಟೇ ಬಿಲ್ನಲ್ಲಿ ನಮೂದಿಸಬೇಕು ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ 2022ರಲ್ಲೇ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದನ್ನು ದೆಹಲಿ ಹೈಕೋರ್ಟ್ ಸಹ ಎತ್ತಿ ಹಿಡಿದಿದೆ.
ಹೈಕೋರ್ಟ್ ಆದೇಶದ ಹೊರತಾಗಿಯೂ ಕೆಲವು ರೆಸ್ಟೋರೆಂಟ್ಗಳು ಗ್ರಾಹಕರಿಂದ ಪೂರ್ವಾನುಮತಿ ಪಡೆಯದೆ ಕಡ್ಡಾಯ ಸೇವಾ ಶುಲ್ಕ ಪಡೆಯುತ್ತಿರುವ ಬಗ್ಗೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (1915)ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಹಕ್ಕುಗಳ ನಿರ್ಲಕ್ಷ್ಯ ಮತ್ತು ಗ್ರಾಹಕ ರಕ್ಷಣಾ ಕಾಯ್ದೆ 2019ರ ಉಲ್ಲಂಘನೆ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿಗೆ ಸರ್ ತನ್ ಸೇ ಜುಧಾ ಎಂದಿತಾ ಕಾಂಗ್ರೆಸ್: ಕೈ ಟ್ವಿಟ್ಗೆ ಬಿಜೆಪಿ ತೀವ್ರ ಆಕ್ರೋಶ
ಬೆಳಗಾವಿಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದವರ ವಿರುದ್ಧ ಎಫ್ಐಆರ್:
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಬಿಜೆಪಿಯ ಆರು ಜನ ಕಾರ್ಯಕರ್ತೆಯರ ಮೇಲೆ ಬೆಳಗಾವಿ ಕ್ಯಾಂಪ್ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಲ್ಪಾ ಕೇಕ್ರೆ, ಪವಿತ್ರಾ ಹಿರೇಮಠ, ರೇಷ್ಮಾ ಬರಮೂಚೆ, ಮಂಜುಳಾ ಹಣ್ಣೀಕೇರಿ, ಅನ್ನಪೂರ್ಣಾ ಹವಳ ಸೇರಿ ಆರು ಬಿಜೆಪಿ ಮಹಿಳಾಕಾರ್ಯಕರ್ತೆಯರ ವಿರುದ್ಧ ಬಿಎನ್ಎಸ್ 189(1)(C), ಬಿಎನ್ಎಸ್ 352 ಅಡಿ ಆರು ಬಿಜೆಪಿ ಕಾರ್ಯಕರ್ತೆಯರ ವಿರುದ್ಧ ದೂರು ದಾಖಲಾಗಿದೆ.
