ಕೋಲಾರ ಮೂಲದ ಡಾ. ಕೆ.ಎಸ್. ಸೋಮಶೇಖರ್ ಅವರು ರಾಜ್ಯಸಭೆ ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಕಳೆದ ಮೂರು ದಶಕಗಳಿಂದ ಸಂಸದೀಯ ಸೇವೆಯಲ್ಲಿರುವ ಇವರು, ಭಾಷಾಂತರಕಾರರಾಗಿ ವೃತ್ತಿ ಆರಂಭಿಸಿ ಇದೀಗ ಉನ್ನತ ಹುದ್ದೆಗೇರಿದ್ದಾರೆ.

ನವದೆಹಲಿ: ರಾಜ್ಯಸಭೆ ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ಕೋಲಾರ ಮೂಲದ ಡಾ। ಕೆ.ಎಸ್‌.ಸೋಮಶೇಖರ್‌ ಅವರನ್ನು ನೇಮಕ ಮಾಡಿ ರಾಜ್ಯಸಭೆಯ ಸಭಾಧ್ಯಕ್ಷ, ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಕರ್ನಾಟಕ ಸರ್ಕಾರದಲ್ಲಿ ವಿವಿಧ ಹುದ್ದೆ ಮತ್ತು ಕಳೆದ 3 ದಶಕಗಳಿಂದ ವಿವಿಧ ಸಂಸದೀಯ ಹುದ್ದೆ ನಿರ್ವಹಿಸಿದ್ದ ಹಿರಿಯ ಅಧಿಕಾರಿಗೆ ಮತ್ತೊಂದು ಮಹತ್ವದ ಹುದ್ದೆ ಸಿಕ್ಕಂತಾಗಿದೆ.

ಹಿನ್ನೆಲೆ: ಕರ್ನಾಟಕದ ಕೋಲಾರ ಮೂಲದ ಡಾ। ಕೆ.ಎಸ್‌.ಸೋಮಶೇಖರ್‌, ಕರ್ನಾಟಕ ಸರ್ಕಾರದಲ್ಲಿ ವಿವಿಧ ಹುದ್ದೆ ನಿರ್ವಹಿಸಿ ಬಳಿಕ ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದರು. 1993ರಲ್ಲಿ ರಾಜ್ಯಸಭೆಯ ಸಚಿವಾಲಯಕ್ಕೆ ನೇಮಕಗೊಂಡಿದ್ದ ಸೋಮಶೇಖರ್‌ ನಂತರದ 33 ವರ್ಷಗಳಲ್ಲಿ ಸಂಸದೀಯ ನಡವಳಿಕೆಗಳು, ಶಾಸಕಾಂಗದ ಆಡಳಿತ, ಸಮಿತಿ ನಿರ್ವಹಣೆ, ಭಾಷಾಂತರ ಸೇವೆ ಸೇರಿದ ವಿವಿಧ ವಿಷಯಗಳಲ್ಲಿ ಅತ್ಯಂತ ಪರಿಣಿತ ಸೇವೆ ನೀಡಿದ ಅಪಾರ ಅನುಭವ ಹೊಂದಿದ್ದಾರೆ.

ರಾಜ್ಯಸಭೆಯಲ್ಲಿ ಭಾಷಾಂತರಕಾರರಾಗಿ ಸೇವೆ ಆರಂಭಿಸಿದ್ದ ಡಾ. ಸೋಮಶೇಖರ್‌ ನಂತರ 33 ವರ್ಷಗಳಲ್ಲಿ ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ನಿರ್ದೇಶಕ, ಜಂಟಿ ನಿರ್ದೇಶಕರಾಗಿ, ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ಕುರಿತ ಸಂಸದೀಯ ಸಮಿತಿ ಸದಸ್ಯರಾಗಿ, ವಿವಿಧ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.