Mumbai Hostage Crisis ಪೊವೈ ಸ್ಟುಡಿಯೋದಲ್ಲಿ ರೋಹಿತ್ ಆರ್ಯ ಎಂಬ ವ್ಯಕ್ತಿ 17 ಮಕ್ಕಳು ಸೇರಿದಂತೆ 19 ಜನರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ. ಸರ್ಕಾರಿ ಯೋಜನೆಯೊಂದರ ಕುರಿತು ಅಸಮಾಧಾನಗೊಂಡಿದ್ದ ಆತನನ್ನು ಮುಂಬೈ ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ.
ಮುಂಬೈ (ಅ.30): ಪೊವೈ ಪ್ರದೇಶದ ರಾ ಸ್ಟುಡಿಯೋದಲ್ಲಿ ಆಡಿಷನ್ಗಾಗಿ ಕರೆಸಿ 17 ಮಕ್ಕಳು ಸೇರಿದಂತೆ 19 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ವ್ಯಕ್ತಿಯನ್ನು ಎನ್ಕೌಂಟರ್ನಲ್ಲಿ ಮುಂಬೈ ಪೊಲೀಸರು ಕೊಂದಿದ್ದಾರೆ. ಪೊಲೀಸ್ ಕಾರ್ಯಾಚರಣೆಯ ಸಮಯದಲ್ಲಿ ಆರೋಪಿ ರೋಹಿತ್ ಆರ್ಯ ಮೇಲೆ ಗುಂಡು ಹಾರಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಅಲ್ಲಿ ಆತ ಸಾವು ಕಂಡಿದ್ದಾನೆ. ರೋಹಿತ್ ಮಧ್ಯಾಹ್ನ 1.45ಕ್ಕೆ 17 ಮಕ್ಕಳು, ಒಬ್ಬ ಹಿರಿಯ ನಾಗರಿಕ ಮತ್ತು ಒಬ್ಬ ನಾಗರಿಕನನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ. ಕಾರ್ಯಾಚರಣೆಯ ಒಂದು ಗಂಟೆಯೊಳಗೆ ಪೊಲೀಸರು ಮತ್ತು ವಿಶೇಷ ಕಮಾಂಡೋಗಳು ಎಲ್ಲಾ ಒತ್ತೆಯಾಳುಗಳನ್ನು ರಕ್ಷಿಸಿದರು.
ಪೊಲೀಸರು ಘಟನಾ ಸ್ಥಳದಿಂದ ಏರ್ಗನ್ ಮತ್ತು ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಯು 100 ಕ್ಕೂ ಹೆಚ್ಚು ಮಕ್ಕಳನ್ನು ಆಡಿಷನ್ಗೆ ಆಹ್ವಾನಿಸಿದ್ದ.
ನಾನು ಕೆಲವು ಪ್ರಶ್ನೆಗಳನ್ನು ಕೇಳಬೇಕು ಎಂದಿದ್ದ ಆರೋಪಿ ರೋಹಿತ್
ಒತ್ತೆಯಾಳಾಗಿ ತೆಗೆದುಕೊಂಡ ನಂತರ, ರೋಹಿತ್ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೊವನ್ನು ಹಂಚಿಕೊಂಡರು, ಅದರಲ್ಲಿ ಅವರು ಕೆಲ ವಿಚಾರ ಮಾತನಾಡಿದ್ದಾರೆ.
"ನಾನು ರೋಹಿತ್ ಆರ್ಯ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು, ನಾನು ಒಂದು ಯೋಜನೆಯನ್ನು ರೂಪಿಸಿದ್ದೇನೆ ಮತ್ತು ಕೆಲವು ಮಕ್ಕಳನ್ನು ಇಲ್ಲಿ ಒತ್ತೆಯಾಳುಗಳಾಗಿ ಇರಿಸಿದ್ದೇನೆ. ನನ್ನ ಬಳಿ ಹೆಚ್ಚಿನ ಬೇಡಿಕೆಗಳಿಲ್ಲ. ನನಗೆ ತುಂಬಾ ಸರಳವಾದ ಬೇಡಿಕೆಗಳು, ನೈತಿಕ ಬೇಡಿಕೆಗಳು ಮತ್ತು ಕೆಲವು ಪ್ರಶ್ನೆಗಳಿವೆ. ನಾನು ಕೆಲವು ಜನರೊಂದಿಗೆ ಮಾತನಾಡಲು, ಅವರಿಗೆ ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ ಮತ್ತು ಅವರ ಉತ್ತರಗಳಿಗೆ ಪ್ರತಿಕ್ರಿಯೆಯಾಗಿ ನನಗೆ ಯಾವುದೇ ಪ್ರಶ್ನೆಗಳಿದ್ದರೆ, ನಾನು ಅವರನ್ನೂ ಕೇಳಲು ಬಯಸುತ್ತೇನೆ, ಆದರೆ ನನಗೆ ಈ ಉತ್ತರಗಳು ಬೇಕು."
"ನನಗೆ ಬೇರೆ ಏನೂ ಬೇಡ. ನಾನು ಭಯೋತ್ಪಾದಕನಲ್ಲ, ಅಥವಾ ನಾನು ಹೆಚ್ಚು ಹಣವನ್ನು ಬೇಡುವುದಿಲ್ಲ, ಮತ್ತು ನಾನು ಯಾವುದೇ ಅನೈತಿಕ ಬೇಡಿಕೆಗಳನ್ನು ಮಾಡುತ್ತಿಲ್ಲ. ನಾನು ಯೋಜನೆಯ ಭಾಗವಾಗಿ ಮಕ್ಕಳನ್ನು ಒತ್ತೆಯಾಳಾಗಿ ಇರಿಸಿದ್ದೇನೆ. ನನ್ನನ್ನು ಕೆರಳಿರುವ ಪ್ರಯತ್ನ ಮಾಡಿದರೆ, ನಾನು ಈ ಸ್ಥಳಕ್ಕೆ (ಸ್ಟುಡಿಯೋ) ಬೆಂಕಿ ಹಚ್ಚುತ್ತೇನೆ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು ನಾನು ಈ ಯೋಜನೆಯನ್ನು ರೂಪಿಸಿದ್ದೇನೆ. ನನ್ನನ್ನು ಕೆರಳಿಸಬೇಡಿ, ಇಲ್ಲದಿದ್ದರೆ ಮಕ್ಕಳಿಗೆ ಹಾನಿ ಮಾಡುವ ಕ್ರಮಗಳನ್ನು ನಾನು ತೆಗೆದುಕೊಳ್ಳುತ್ತೇನೆ' ಎಂದಿದ್ದ.
ಮಹಾರಾಷ್ಟ್ರ ಸರ್ಕಾರದ ಬಗ್ಗೆ ರೋಹಿತ್ ಅಸಮಾಧಾನಕ್ಕೆ ಕಾರಣವೇನು?
ಮಾಧ್ಯಮ ವರದಿಗಳ ಪ್ರಕಾರ, ಮಹಾರಾಷ್ಟ್ರ ಸರ್ಕಾರ 2022 ರಲ್ಲಿ ಜಾರಿಗೆ ತಂದ "ನನ್ನ ಶಾಲೆ, ಸುಂದರ ಶಾಲೆ" ಯೋಜನೆಯನ್ನು ತಾನು ರೂಪಿಸಿದ್ದಾಗಿ ರೋಹಿತ್ ಹೇಳಿಕೊಂಡಿದ್ದಾರೆ. ಸರ್ಕಾರ ತನ್ನ ಕಲ್ಪನೆ, ಚಿತ್ರಕಥೆ ಮತ್ತು ಚಲನಚಿತ್ರ ಹಕ್ಕುಗಳನ್ನು ಸಹ ಬಳಸಿಕೊಂಡಿತು, ಆದರೆ ಅದಕ್ಕೆ ಕ್ರೆಡಿಟ್ ನೀಡಲಿಲ್ಲ ಅಥವಾ ಪಾವತಿಸಲಿಲ್ಲ ಎಂದು ರೋಹಿತ್ ಆರೋಪಿಸಿದ್ದಾರೆ.
ರೋಹಿತ್ ಆರ್ಯ ಅವರ ಸುದ್ದಿಯ ನಂತರ, ಮಾಜಿ ಸಚಿವ ದೀಪಕ್ ಕೇಸರ್ಕರ್ ಹೇಳಿಕೆ ನೀಡಿದ್ದು, "ರೋಹಿತ್ಗೆ ನನ್ನ ಶಾಲೆಯಲ್ಲಿ ಕೆಲಸ ನೀಡಲಾಯಿತು. ಅವರು ನನ್ನ ಇಲಾಖೆಯಿಂದ ಹಣವನ್ನು ಪಡೆದರು. ಅವರನ್ನು ಒತ್ತೆಯಾಳಾಗಿರಿಸುವುದು ತಪ್ಪು" ಎಂದು ಅವರು ಹೇಳಿದರು. ಪುಣೆ ಮೂಲದ ರೋಹಿತ್ ಆರ್ಯ, ಮಹಾರಾಷ್ಟ್ರದ ಮಾಜಿ ಶಿಕ್ಷಣ ಸಚಿವ ದೀಪಕ್ ಕೇಸರ್ಕರ್ ಅವರ ಅವಧಿಯಲ್ಲಿ ಶಿಕ್ಷಣ ಇಲಾಖೆಯಿಂದ ಶಾಲೆಯೊಂದರ ಟೆಂಡರ್ ಪಡೆದಿದ್ದರು. ಈ ಯೋಜನೆಗೆ ಇನ್ನೂ ಹಣ ಬಂದಿಲ್ಲ ಎಂದು ರೋಹಿತ್ ಹೇಳಿದ್ದರಿಂದ ಅವರಿಗೆ ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಒತ್ತಡ ಉಂಟಾಗಿದೆ.
ಮಕ್ಕಳನ್ನು ಪೊಲೀಸರು ರಕ್ಷಿಸಿದ್ದು ಹೇಗೆ?
ಮಧ್ಯಾಹ್ನ 1:45 ಕ್ಕೆ, ಸ್ಟುಡಿಯೋದಲ್ಲಿ ಮಕ್ಕಳನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂಬ ಮಾಹಿತಿ ಸಿಕ್ಕಿತು. ಪೊಲೀಸ್ ತಂಡ ತಕ್ಷಣ ಸ್ಥಳಕ್ಕೆ ಆಗಮಿಸಿ ಆರೋಪಿಯೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿತು. ಅವನನ್ನು ಮನವೊಲಿಸಲು ಸಾಧ್ಯವಾಗದೆ, ಪೊಲೀಸರು ಬಾತ್ರೂಮ್ ಮೂಲಕ ಸ್ಟುಡಿಯೋಗೆ ಪ್ರವೇಶಿಸಿ ಅವನನ್ನು ಹಿಡಿಯುವ ಪ್ರಯತ್ನ ಮಾಡಿದರು.
ಈ ಸಮಯದಲ್ಲಿ, ಆರ್ಯ ಪೊಲೀಸರ ಮೇಲೆ ಗುಂಡು ಹಾರಿಸಿ ಮಕ್ಕಳನ್ನು ಮಾನವ ಗುರಾಣಿಗಳಾಗಿ ಬಳಸುವ ಪ್ರಯತ್ನ ಮಾಡಿದ್ದ. ಪ್ರತೀಕಾರವಾಗಿ, ಪೊಲೀಸ್ ಗುಂಡೇಟಿನಿಂದ ಆರ್ಯ ಗಾಯಗೊಂಡಿದ್ದ ಮತ್ತು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟನೆಂದು ಘೋಷಿಸಲಾಯಿತು. ಪೊಲೀಸರು ಸ್ಥಳದಿಂದ ಏರ್ ಗನ್ ಮತ್ತು ಕೆಲವು ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡರು. ಈ ರಾಸಾಯನಿಕ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.


