ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಚಿಕ್ಕಮಕ್ಕಳನ್ನು ಹಲವು ಚಟವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದಕ್ಕೆ ಕಡಿವಾಣ ಹಾಕಿ, ಸೂಕ್ತ ನಿಯಮ ರೂಪಿಸಬೇಕೆಂದು ರಾಜ್ಯಸಭೆಯಲ್ಲಿ ಸಂಸದೆ ಸುಧಾ ಮೂರ್ತಿ ಆಗ್ರಹಿಸಿದ್ದಾರೆ.

ನವದೆಹಲಿ : ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಚಿಕ್ಕಮಕ್ಕಳನ್ನು ಹಲವು ಚಟವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದಕ್ಕೆ ಕಡಿವಾಣ ಹಾಕಿ, ಸೂಕ್ತ ನಿಯಮ ರೂಪಿಸಬೇಕೆಂದು ರಾಜ್ಯಸಭೆಯಲ್ಲಿ ಸಂಸದೆ ಸುಧಾ ಮೂರ್ತಿ ಆಗ್ರಹಿಸಿದ್ದಾರೆ.

ಮಕ್ಕಳು ನಮ್ಮ ಭವಿಷ್ಯ. ಅವರನ್ನು ಉತ್ತಮ ಮೌಲ್ಯಗಳಿಂದ ಬೆಳೆಸಬೇಕು

ಶೂನ್ಯ ವೇಳೆಯಲ್ಲಿ ವಿಚಾರ ಪ್ರಸ್ತಾಪಿಸಿದ ಅವರು, ‘ಮಕ್ಕಳು ನಮ್ಮ ಭವಿಷ್ಯ. ಅವರನ್ನು ಉತ್ತಮ ಮೌಲ್ಯ, ವಿವಿಧ ಚಟುವಟಿಕೆಗಳಿಂದ ಬೆಳೆಸಬೇಕು. ಆದರೆ ಹೆಚ್ಚಿನ ಪೋಷಕರು ಜಾಲತಾಣದಲ್ಲಿ ತಮ್ಮ ಮಕ್ಕಳನ್ನು ವಿವಿಧ ಭಾವ, ಭಂಗಿಗಳು. ಉಡುಪಿನಲ್ಲಿ ಪ್ರದರ್ಶಿಸಿ 10 ಸಾವಿರ, 5 ಲಕ್ಷ ಫಾಲೋವರ್ಸ್‌ಗಳನ್ನು ಸೃಷ್ಟಿಸಿಕೊಳ್ಳಲು ಯತ್ನಿಸುತ್ತಾರೆ. ಇದು ಪಕ್ಕಾ ವ್ಯಾವಹಾರಿಕ. ಅವರಿಗೆ ಇದು ಆರ್ಥಿಕವಾಗಿ ನೆರವಾಗಬಹುದು, ಆದರೆ ಮಕ್ಕಳ ಭವಿಷ್ಯ ಏನಾಗಬಹುದು ಎನ್ನುವುದು ಕಳವಳದ ಸಂಗತಿ’ ಎಂದರು.

ಮಾನಸಿಕ ಸ್ಥಿತಿ ಮೇಲೆ ದೀರ್ಘಕಾಲ ಪರಿಣಾಮ

‘ಮಕ್ಕಳು ಪೋಷಕರಿಗೆ ಆದಾಯದ ಮೂಲವಾಗಬಹುದು. ಆದರೆ ಮಾನಸಿಕ ಸ್ಥಿತಿ ಮೇಲೆ ದೀರ್ಘಕಾಲ ಪರಿಣಾಮ ಬೀರುತ್ತದೆ. ಮುಗ್ಧತೆಯನ್ನು ಕಳೆದುಕೊಳ್ಳುತ್ತಾರೆ’ ಎಂದರು.

ಇದೇ ವೇಳೆ ‘ಮಕ್ಕಳು ನಿರ್ದಿಷ್ಟ ರೀತಿಯ ಉಡುಗೆ ಧರಿಸುವಂತಿಲ್ಲ. ಭಾವ ಭಂಗಿ ಪ್ರದರ್ಶಿಸುವಂತಿಲ್ಲ ಎನ್ನುವ ನಿಯಮ ತರಬೇಕು. ಏಕೆಂದರೆ ನಮ್ಮ ಮುಂದಿನ ಪೀಳಿಗೆಯ ಮಕ್ಕಳನ್ನು ಬೆಳೆಸುವ ರೀತಿ ಇದಲ್ಲ’ ಎಂದರು. ‘ಈಗಾಗಲೇ ಸರ್ಕಾರ ಮಕ್ಕಳು ಜಾಹೀರಾತು, ಸಿನಿಮಾಗಳಲ್ಲಿ ಅಭಿನಯಿಸುವುದಕ್ಕೆ ಕಠಿಣ ನಿಯಮ ತಂದಿರುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳ ವಿಚಾರದಲ್ಲಿಯೂ ತರಬೇಕು’ ಎಂದು ಆಗ್ರಹಿಸಿದರು.

*ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಬಳಕೆಗೆ ಕಡಿವಾಣ ಹಾಕಿ

*ಮಕ್ಕಳು ನಮ್ಮ ಭವಿಷ್ಯ. ಅವರನ್ನು ಉತ್ತಮ ಮೌಲ್ಯದಿಂದ ಬೆಳೆಸಿ

*ವಿವಿಧ ಭಂಗಿಗಳಲ್ಲಿ, ಉಡುಪಿನಲ್ಲಿ ಮಕ್ಕಳ ಬಳಸಿ ಫಾಲೋವರ್ಸ್‌ ಹೆಚ್ಚಳಕ್ಕೆ ಯತ್ನ