ತುಮಕೂರು ಜಿಲ್ಲೆಯ ಅನುಪನಹಳ್ಳಿ ಗ್ರಾಮದಲ್ಲಿ, ಜ್ಯೋತಿಷಿಯೊಬ್ಬನ ಮಾತು ನಂಬಿದ ಮಗಳು ತನ್ನ ತಾಯಿಯನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಅಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದರೂ, ಗ್ರಾಮಸ್ಥರ ಅನುಮಾನದಿಂದಾಗಿ ಪೊಲೀಸರು ಆರೋಪಿಯನ್ನು ಬಂಧಿಸಿ ಸತ್ಯವನ್ನು ಬಯಲಿಗೆಳೆದಿದ್ದಾರೆ.

ತುಮಕೂರು: ಜಿಲ್ಲೆಯಲ್ಲಿ ಹೃದಯವಿದ್ರಾವಕ ಹಾಗೂ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಹೆತ್ತ ಮಗಳಿಂದಲೇ ತಾಯಿಯನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ತಾಲೂಕಿನ ಅನುಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜ್ಯೋತಿಷಿಯೊಬ್ಬನ ಮಾತು ನಂಬಿದ ಮಗಳು ತಲೆದಿಂಬಿನಿಂದ ಉಸಿರುಗಟ್ಟಿಸಿ ಹೆತ್ತ ತಾಯಿಯನ್ನು ಹತ್ಯೆ ಮಾಡಿದ್ದಾಳೆ. ಬಳಿಕ ಅಸಹಜ ಸಾವು ಎಂದು ಬಿಂಬಿಸಲು ಯತ್ನಿಸಿ ಅಂತ್ಯಕ್ರಿಯೆಗೆ ಮುಂದಾಗಿದ್ದಾಳೆ. ಆದರೆ ಗ್ರಾಮಸ್ಥರ ಅನುಮಾನದಿಂದ ಸತ್ಯ ಹೊರಬಂದಿದೆ.

ಮೃತ ಮಹಿಳೆಯನ್ನು ಪುಪ್ಪವತಿ (55) ಎಂದು ಗುರುತಿಸಲಾಗಿದೆ. ಈ ಕೊಲೆ ಕೃತ್ಯ ಎಸಗಿದ ಆರೋಪಿ ಅವರ ಮಗಳಾದ ಸುಚಿತ್ರಾ (33). ಸುಚಿತ್ರಾ ತುಮಕೂರು ನಗರದ ಶ್ರೀನಗರದಲ್ಲಿ ತನ್ನ ಗಂಡನೊಂದಿಗೆ ವಾಸವಿದ್ದು, ಕೆಲ ದಿನಗಳ ಹಿಂದೆ ಅನುಪನಹಳ್ಳಿ ಗ್ರಾಮದಲ್ಲಿರುವ ತಾಯಿಯ ಮನೆಗೆ ಬಂದಿದ್ದಳು ಎನ್ನಲಾಗಿದೆ.

ಜ್ಯೋತಿಷ್ಯದ ಮಾತು ನಂಬಿ ಹೆತ್ತ ತಾಯಿಯನ್ನೇ ಕೊಂದ ಮಗಳು

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು ಒಂದೂವರೆ ವರ್ಷಗಳ ಹಿಂದೆ ಸುಚಿತ್ರಾಳ ತಂದೆ ನಿಧನರಾಗಿದ್ದರು. ಈ ಸಾವಿಗೆ ತಾಯಿ ಪುಪ್ಪವತಿ ಕಾರಣ ಎನ್ನುವ ಶಂಕೆಯನ್ನು ಜ್ಯೋತಿಷ್ಯಿ ವ್ಯಕ್ತಪಡಿಸಿ ಸುಚಿತ್ರಾಗೆ ಹೇಳಿದ್ದಾನೆ. ತಂದೆ ಸಾವಿಗೆ ನಿಮ್ಮ ತಾಯಿ ಮಾಟ ಮಾಡಿಸಿದ್ದಾಳೆ ಎಂಬ ಜ್ಯೋತಿಷ್ಯದ ಮಾತುಗಳನ್ನು ಸುಚಿತ್ರಾ ನಂಬಿದ್ದಾಳೆ. ಇದೇ ಕಾರಣದಿಂದ ತಾಯಿಯ ಮೇಲಿನ ದ್ವೇಷ ಬೆಳೆಸಿಕೊಂಡು ಕೊಲೆ ಮಾಡಲು ನಿರ್ಧರಿಸಿದ್ದಾಳೆ.

ರಾತ್ರಿ ವೇಳೆ ನಡೆದ ಕೊಲೆ

ಘಟನೆ ನಡೆದ ದಿನ ರಾತ್ರಿ, ಪುಪ್ಪವತಿ ಮನೆಯೊಳಗೆ ನಿದ್ರಿಸುತ್ತಿದ್ದ ವೇಳೆ ಸುಚಿತ್ರಾ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ತಾಯಿಯು ಮೃತಪಟ್ಟ ನಂತರ, ಈ ಸಾವನ್ನು ಸಹಜವಲ್ಲದೆ ಅಸಹಜ ಸಾವು ಎಂದು ಬಿಂಬಿಸಿ, ಅಂತ್ಯಕ್ರಿಯೆ ನಡೆಸಲು ಮಗಳು ಮುಂದಾಗಿದ್ದಳು.

ಗ್ರಾಮಸ್ಥರ ಅನುಮಾನದಿಂದ ಬಯಲಾದ ಸತ್ಯ

ಆದರೆ ಮೃತದೇಹದ ಸ್ಥಿತಿ ಹಾಗೂ ಸಂದರ್ಭಗಳನ್ನು ಗಮನಿಸಿದ ಗ್ರಾಮಸ್ಥರು ಇದು ಅಸಹಜ ಸಾವು ಅಲ್ಲ, ಕೊಲೆ ಆಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದರು. ಕೂಡಲೇ ಕ್ಯಾತಸಂದ್ರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಸುಚಿತ್ರಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆಯ ವೇಳೆ ಸುಚಿತ್ರಾ ತಾನೇ ತಾಯಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದರೊಂದಿಗೆ ಪ್ರಕರಣದ ಭೀಕರ ಸತ್ಯ ಬೆಳಕಿಗೆ ಬಂದಿದೆ.

ಪ್ರಕರಣ ದಾಖಲು, ತನಿಖೆ ಮುಂದುವರಿಕೆ

ಘಟನೆಗೆ ಸಂಬಂಧಿಸಿದಂತೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅಂಧಶ್ರದ್ಧೆ ಹಾಗೂ ಜ್ಯೋತಿಷ್ಯದ ಮಾತುಗಳಿಗೆ ಬಲಿಯಾಗಿ ನಡೆದ ಈ ಭೀಕರ ಕೊಲೆ ಪ್ರಕರಣವು ಸಮಾಜವನ್ನು ಕಲುಷಿತಗೊಳಿಸುವ ಘಟನೆ ಎನ್ನಲಾಗಿದೆ.