ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸಾರಿಗೆ ಸಂಪರ್ಕವೇ ಇಲ್ಲದ ಮಲ್ಲೆ ಹರವು ಗ್ರಾಮದ ಕೂಲಿಕಾರರ ಮಗಳು ಓ.ಕೃಷ್ಣವೇಣಿ, ಎಸ್ಸೆಸ್ಸೆಲ್ಸಿ 625ಕ್ಕೆ 606 ಅಂಕ ಗಳಿಸಿ ಮಹತ್ತರ ಸಾಧನೆ. ಬಾಂಡ್ರವಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಈ ಸಾಧನೆಗೈದು ಇತರರಿಗೆ ಸ್ಫೂರ್ತಿಯಾಗಿದ್ದಾಳೆ.
ಮೊಳಕಾಲ್ಮೂರು (ಏ.24): ಸಾರಿಗೆ ಸಂಪರ್ಕವೇ ಇಲ್ಲದ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಗಡಿ ಗ್ರಾಮ ಬಾಂಡ್ರವಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೂಲಿಕಾರರ ಮಗಳು ಓ.ಕೃಷ್ಣವೇಣಿ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 606 ಅಂಕ (ಶೇ.96.96) ಗಳಿಸುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾಳೆ.
ಆಧುನಿಕ ಪ್ರಪಂಚದಿಂದ ದೂರ ಉಳಿದಿರುವ ಮೂಲ ಸೌಲಭ್ಯಗಳೇ ಇಲ್ಲದ ಮಲ್ಲೆ ಹರವು ಗ್ರಾಮದಲ್ಲಿ ಪ್ರೌಢಶಾಲೆ ಇಲ್ಲದ ಪರಿಣಾಮ ಸಾರಿಗೆ ಸಂಪರ್ಕವೇ ಇಲ್ಲದ ಬಾಂಡ್ರಾವಿ ಸರ್ಕಾರಿ ಪ್ರೌಢಶಾಲೆಗೆ ಕೃಷ್ಣವೇಣಿ ದಾಖಲಾಗಿದ್ದಳು. ಮಾವನ ಮನೆಯಲ್ಲಿದ್ದುಕೊಂಡು ಪೋಷಕರ ಕಷ್ಟ ಅರಿತು ಅಧ್ಯಯನ ಮಾಡಿದ್ದಾಳೆ.
ಸ್ವತಂತ್ರ ಸಿಕ್ಕು 7 ದಶಕ ಕಳೆದರೂ ಮಲ್ಲೆ ಹರವು ಗ್ರಾಮಕ್ಕೆ ಸಾರಿಗೆ ಸಂಪರ್ಕವಿಲ್ಲ. ಸುತ್ತಲೂ ಗುಡ್ಡಗಾಡು ಆವರಿಸಿರುವ ಕಾಲು ದಾರಿಯಲ್ಲಿ ನಡೆದು ಮುಖ್ಯರಸ್ತೆಗೆ ಬಂದು ಸಿಕ್ಕ ವಾಹನಗಳನ್ನು ಹಿಡಿದು ಬಾಂಡ್ರವಿ ಗ್ರಾಮಕ್ಕೆ ಬರಬೇಕಿದೆ. ಕೂಲಿ ಕೆಲಸದಿಂದಲೇ ಜೀವನ ನಡೆಸುವ ತಂದೆ ಒಬಕಾಸ್ವಾಮಿ, ತಾಯಿ ಪಾಪಮ್ಮ ಅವರು ತಮ್ಮ ಮಗಳ ವಿದ್ಯಾಭ್ಯಾಸಕ್ಕೆ ಹೆಗಲಾಗಿದ್ದಾರೆ. ಮಲ್ಲೆ ಹರವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಗ್ರಾಮವಾಗಿದ್ದು, ಕರಡಿ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಆವಾಸ ಸ್ಥಾನವಾಗಿದೆ. ಇಂಥ ಗ್ರಾಮದ ವಿದ್ಯಾರ್ಥಿನಿ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.


