ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ದಶಕಗಳ ಬೇಡಿಕೆ ಒಳಮೀಸಲಾತಿ ಘೋಷಿಸಿರುವುದು ಐತಿಹಾಸಿಕ ನಿರ್ಧಾರ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಹೈಕಮಾಂಡ್ ಶೀಘ್ರದಲ್ಲೇ..
ಬೆಳಗಾವಿ (ಏ.25): ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ದಶಕಗಳ ಬೇಡಿಕೆ ಒಳಮೀಸಲಾತಿ ಘೋಷಿಸಿರುವುದು ಐತಿಹಾಸಿಕ ನಿರ್ಧಾರ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಸಚಿವರ, ಸಮುದಾಯದ ಸಚಿವರ ಸಮ್ಮುಖದಲ್ಲಿಯೇ ಒಳ ಮೀಸಲಾತಿ ಘೋಷಿಸಿದ್ದೇವೆ. ಎಲ್ಲಾ ಸಮುದಾಯದವರು ಖುಷಿ ವ್ಯಕ್ತಪಡಿಸಿದ್ದು, ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಸರ್ವಾನುಮತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಒಳಮೀಸಲಾತಿ ಹಂಚಿಕೆ ಬಗ್ಗೆ ಬಿಜೆಪಿ ವಿರೋಧಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷಗಳು ಸರ್ಕಾರದ ಪ್ರತಿಯೊಂದು ನಿರ್ಧಾರದಲ್ಲೂ ದೋಷ ಹುಡುಕುವುದು ಸಹಜ. ಆದರೆ, ಜನಹಿತಕ್ಕಾಗಿ ತೆಗೆದುಕೊಂಡ ನಿರ್ಧಾರಕ್ಕೆ ಜನರ ಬೆಂಬಲವಿದೆ ಎಂಬುದು ಸರ್ಕಾರದ ನಿಲುವು. ಆದರೆ, ವಿರೋಧ ಪಕ್ಷದವರು ತಮ್ಮ ಅಸ್ತಿತ್ವಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಾರೆಂದು ತಿರುಗೇಟು ನೀಡಿದರು.
ಶೀಘ್ರದಲ್ಲೇ ತೆರೆ
ಕಾಂಗ್ರೆಸ್ ಪಕ್ಷದ ಒಳಗಿನ ನಾಯಕತ್ವ ಗೊಂದಲದ ಬಗ್ಗೆ ಉತ್ತರಿಸಿದ ಅವರು, ಪಕ್ಷದೊಳಗಿನ ಗೊಂದಲಗಳಿಗೆ ಹೈಕಮಾಂಡ್ ಶೀಘ್ರದಲ್ಲೇ ತೆರೆ ಎಳೆಯಲಿದೆ. ಹೈಕಮಾಂಡ್ ಈಗಾಗಲೇ ಒಂದು ತೀರ್ಮಾನಕ್ಕೆ ಬಂದಿದ್ದು, ಸೂಕ್ತ ಸಮಯದಲ್ಲಿ ಅದನ್ನು ಜಾರಿಗೊಳಿಸಲಿದೆ ಎಂದರು.
ಡಿಕೆಶಿ ದೆಹಲಿಗೆ ಹೋಗುವುದು ಹೊಸದಲ್ಲ. ಅವರು ಎರಡು ಪ್ರಮುಖ ಖಾತೆ ಜೊತೆಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ರಾಜ್ಯದ ಅಭಿವೃದ್ಧಿ ಕೆಲಸಗಳು, ಕೇಂದ್ರ ಸಚಿವರ ಭೇಟಿಗಾಗಿ ದೆಹಲಿಗೆ ಹೋಗುವುದು ಸಹಜ. ದೆಹಲಿ ಭೇಟಿಯನ್ನೇ ನಾಯಕತ್ವ ಬದಲಾವಣೆಯ ಸೂಚನೆ ಎಂದು ಅರ್ಥೈಸುವುದು ಸರಿಯಲ್ಲ. ಪ್ರತಿ ಭೇಟಿಗೂ ರಾಜಕೀಯ ಉದ್ದೇಶ ಕಲ್ಪಿಸಬಾರದು ಎಂದು ತಿಳಿಸಿದರು.


