ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು,ಬೊಲೆರೋ ಜೀಪ್ ಡಿಕ್ಕಿಯಾಗಿ ಮೂವರು ಯುವಕರು ಮೃತಪಟ್ಟಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಬೊಲೆರೋ ಚಾಲಕ ಪರಾರಿಯಾಗಿದ್ದಾನೆ.
ಕೊಪ್ಪಳ (ಡಿ.17) ಮಹೀಂದ್ರ ಬೊಲೆರೋ ಹಾಗೂ ಬೈಕ್ ನಡುವ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಪ್ಪಳದ ಇಂದರಗಿ ಬಳಿ ನಡೆದಿದೆ. ಬೈಕ್ಗೆ ಬೊಲೆರೋ ಜೀಪ್ ಡಿಕ್ಕಿಯಾದ ಪರಿಣಾಮ ಬೈಕ್ನಲ್ಲಿದ್ದ ಮೂವರು ಯುವಕರು ಮೃತಪಟ್ಟಿದ್ದಾರೆ. 17 ವರ್ಷದ ವಾಜೀದ್, 17 ವರ್ಷದ ರಾಜಾ ಹುಸೇನ್ ಹಾಗೂ 18 ವರ್ಷದ ಆಸೀಫ್ ಮೃತ ಬೈಕ್ ಸವಾರರು. ಒಂದೇ ಬೈಕ್ನಲ್ಲಿ ಮೂವರು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೊಸಹಳ್ಳಿಗೆ ತೆರಳುತ್ತಿದ್ದ ವೇಳೆ ಅಪಘಾತ
ಒಂದು ಬೈಕ್ನಲ್ಲಿ ಮೂವರು ಶ್ರೀರಾಮನಗರಿಂದ ಹೊಸಹಳ್ಳಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮೃತ ವಾಜೀದ್, ರಾಜಾಹುಸೇನ್ ದ್ಕೊಪ್ಪಳ ತಾಲೂಕಿನ ಹೊಸಹಳ್ಳಿ ನಿವಾಸಿಗಳಾಗಿದ್ದರೆ, ಮತ್ತೋರ್ವ ಬೈಕ್ ಸವಾರ ಆಸೀಫ್ ಗಂಗಾವತಿ ತಾಲೂಕಿನ ಶ್ರೀರಾಮನಗರ ನಿವಾಸಿ ಎಂದು ಗುರುತಿಸಲಾಗಿದೆ. ಅಪಘಾತದ ಬಳಿ ಬೊಲೆರೋ ವಾಹನ ಚಾಲಕ ಪರಾರಿಯಾಗಿದ್ದಾನೆ.
ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು
ಕೊಡಗಿನ ಕುಶಾಲನಗರ ತಾಲ್ಲೂಕಿನ ಆನೆಕಾಡು ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ. ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ನಿವಾಸಿ ಮಹೇಶ್ ಮೃತಪಟ್ಟಿದ್ದಾನೆ. ಕುಶಾಲನಗರದ ಕಡೆಯಿಂದ ಬೈಕಿನಲ್ಲಿ ಸುಂಟಿಕೊಪ್ಪದ ಕಡೆ ತೆರಳುವಾಗ ಅಪರಿಚತ ವಾಹನ ಡಿಕ್ಕಿಯಾಗಿದೆ. ಪರಿಣಾಮ 31 ವರ್ಷದ ಮಹೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಬ್ಬು ತುಂಬಿದ್ದ ಲಾರಿ ಪಲ್ಟಿ
ಬೈಕ್ ಅಪಘಾತ ತಪ್ಪಿಸಲು ಹೋಗಿ ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯೊಂದು ಪಲ್ಟಿಯಾಗಿರೋ ಘಟನೆ ಬಾಗಲಕೋಟೆಯ ನವನಗರದ ತೇಜಸ್ ಶಾಲೆ ಬಳಿ ನಡೆದಿದೆ. ಅಪಘಾತದಲ್ಲಿ ಲಾರಿ ಚಾಲಕ ವಿಜಯಪುರ ಜಿಲ್ಲೆಯ ಲಿಂಗದಹಳ್ಳಿ ಗ್ರಾಮದ ಉಮೇಶ್ ಚಲವಾದಿ (35) ಅವರ ಬಲಗಾಲು ಮುರಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರೂರು ಸಮೀಪದ ಸಕ್ಕರೆ ಕಾರ್ಖಾನೆಗೆ ಕಬ್ಬು ತುಂಬಿಕೊಳ್ಳಲು ಬಾದಾಮಿ ಕಡೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ರಸ್ತೆ ಕ್ರಾಸ್ ಮಾಡಲು ವೇಗವಾಗಿ ಬಂದ ಬೈಕ್ಗೆ ಡಿಕ್ಕಿ ತಪ್ಪಿಸಲು ಹೋಗಿ ಲಾರಿ ನಿಯಂತ್ರಣ ತಪ್ಪಿದೆ. ಪರಿಣಾಮ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಮನೆಗೆ ಕೋಳಿತರಲು ಹೋಗಿದ್ದ ಯುವಕ ಅಪಘಾತದಲ್ಲಿ ಸಾವು
ಚನ್ನರಾಯಪಟ್ಟಣದ ಸಾಗತಹಳ್ಳಿ ಗಾರಮದ 34 ವರ್ಷದ ನಂದೀಶ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಹಿಟ್ ಅಂಡ್ ರನ್ಗೆ ನಂದೀಶ್ ಬಲಿಯಾಗಿದ್ದಾನೆ. ಮನೆಗೆ ಕೋಳಿ ತರಲು ಪಟ್ಟಣಕ್ಕೆ ತೆರಳಿದಾಗ ಅಪಘಾತ ಸಂಭವಿಸಿದೆ. ಸಾವಿನಲ್ಲೂ ಕುಟುಂಬ ಸಾರ್ಥಕತೆ ಮೆರೆದಿದೆ. ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ನಂದೀಶ್ ಕುಟುಂಬ ಅಂಗಾಗ ದಾನ ಮಾಡಿದೆ. ನಂದೀಶ್ ಹೃದಯವನ್ನು ಮೈಸೂರು ಜಯದೇವ ಆಸ್ಪತ್ರೆಗೆ ರಾವನೆ ಮಾಡಲಾಗಿದೆ.


