ತಮ್ಮ ತಂದೆ ಮುಖ್ಯಮಂತ್ರಿಯಾಗಿರುವವರೆಗೆ ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹಿರಿಯರಿಗೆ ಅವಕಾಶ ಸಿಗಬೇಕು ಎಂದಿರುವ ಅವರು, ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ಸಹಜ ಎಂದು ಬೈಲಹೊಂಗಲದಲ್ಲಿ ಹೇಳಿಕೆ ನೀಡಿದ್ದಾರೆ.

ಬೈಲಹೊಂಗಲ (ಏ.17): ನಮ್ಮ ತಂದೆ ಮುಖ್ಯಮಂತ್ರಿ ಇರುವವರೆಗೆ ಸಚಿವ ಸ್ಥಾನಕ್ಕೆ ನಾನು ಆಕಾಂಕ್ಷಿ ಅಲ್ಲ. ಹಿರಿಯರು ಹಾಗೂ ಅನುಭವಿಗಳಿಗೆ ಅವಕಾಶ ಸಿಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ಶಾಸಕರು ಸಚಿವ ಸ್ಥಾನ ಕೇಳುವುದು ಸಹಜ. ಯಾವುದೇ ಸಚಿವ ಸಂಪುಟದಲ್ಲಿ ಹೊಸಬರು ಹಾಗೂ ಅನುಭವಿಗಳಿರುತ್ತಾರೆ ಎಂದರು. ತಮ್ಮ ತಂದೆ ಮುಂದಿನ ಐದು ವರ್ಷ ರಾಜ್ಯವನ್ನು ಮುನ್ನಡೆಸಲಿ ಎಂಬುದು ನನ್ನ ವೈಯಕ್ತಿಕ ಆಶಯ ಮಾತ್ರ. ಐದು ವರ್ಷ ಆಡಳಿತದ ಕುರಿತು ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಸಿಎಂ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಸಹಜ. ರಾಜ್ಯದ ಜನರಿಗೆ ಒಳ್ಳೆಯದಾಗುವುದೇ ಮುಖ್ಯ ಎಂದು ಹೇಳಿದರು.

136 ಶಾಸಕರಿದ್ದರೂ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲ ಸರ್ಕಾರಗಳಲ್ಲಿಯೂ ಇಂತಹ ಚರ್ಚೆಗಳು ನಡೆಯುತ್ತವೆ. ಬಿಜೆಪಿ ಸರ್ಕಾರದಲ್ಲಿಯೂ ಮುಖ್ಯಮಂತ್ರಿಗಳ ಬದಲಾವಣೆ ನಡೆದಿತ್ತು. ಎಲ್ಲ ಪಕ್ಷಗಳಲ್ಲಿಯೂ ಸಿಎಂ ಆಕಾಂಕ್ಷಿಗಳು ಇರುವುದು ಸಾಮಾನ್ಯ ಎಂದರು. ಬಾಗಲಕೋಟೆ ಹಾಗೂ ದಾವಣಗೆರೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.