ಕನ್ನಡ ಚಿತ್ರರಂಗವನ್ನು ಗಡಿಯಾಚೆಗೆ ಕೊಂಡೊಯ್ದವರು ಡಾ. ವಿಷ್ಣುವರ್ಧನ್. ಪಂಚಭಾಷಾ ನಟ ಎನ್ನಿಸಿಕೊಂಡಿದ್ದ ವಿಷ್ಣುದಾದಾರ ಹಳೆಯ ಕುತೂಹಲದ ವಿಡಿಯೋ ಒಂದು ವೈರಲ್ ಆಗಿದೆ. ಏನಿದೆ ಇದರಲ್ಲಿ?
ಕನ್ನಡ ಚಿತ್ರರಂಗವನ್ನು ಗಡಿಯಾಚೆಗೆ ಕೊಂಡೊಯ್ದವರು ಡಾ. ವಿಷ್ಣುವರ್ಧನ್. ನೇರ ಚಿತ್ರಗಳು ಮತ್ತು ಡಬ್ಬಿಂಗ್ ಬಿಡುಗಡೆಗಳ ಮೂಲಕ, ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಹೀಗೆ ಈ ಐದು ಭಾಷೆಗಳಲ್ಲಿಯೂ ಹಿಟ್ ಚಿತ್ರಗಳನ್ನು ನೀಡಿದ ಏಕೈಕ ಕನ್ನಡ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಕನ್ನಡದಲ್ಲಿ ಅತಿ ಹೆಚ್ಚು ದ್ವಿಪಾತ್ರದಲ್ಲಿ ನಟಿಸಿರುವ ನಟ ಇವರು. ದಾದಾ ಖ್ಯಾತಿಯ ನಟ ವಿಷ್ಣು ಅವರು 25 ಚಿತ್ರಗಳಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ದ್ವಿಪಾತ್ರದ ಮೊಟ್ಟಮೊದಲ ಸಿನಿಮಾ 'ಒಂದೇ ರೂಪ ಎರಡು ಗುಣ' 1975ರಲ್ಲಿ ಬಿಡುಗಡೆ ಆಗಿತ್ತು, ಒಟ್ಟೂ 23 ಚಿತ್ರಗಳಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದರು. ಇದು ಬೇರೆ ಯಾವುದೇ ಕನ್ನಡದ ನಟ ಇಲ್ಲಿಯವರೆಗೆ ಮಾಡಿರದ ಸಾಧನೆ. ಇದೊಂದೇ ಅದಲ್ಲದೇ ಹಲವು ಸಾಧನೆಗಳನ್ನು, ದಾಖಲೆಗಳನ್ನು ಮಾಡಿದ್ದಾರೆ ವಿಷ್ಣು ದಾದಾ.
ಇದೀಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ಕಲಾವಿದರನ್ನು ಉತ್ತರದವರು, ದಕ್ಷಿಣದವರು ಎಂದು ತಾರತಮ್ಯ ಮಾಡುವ ಬಗ್ಗೆ ನಟ ನೋವಿನಿಂದ ನುಡಿದಿರುವ ಮಾತದು. ಇಂದಿಗೂ ಇಂಥದ್ದೊಂದು ಬೇಧಭಾವ ಇರುವುದನ್ನು ನೋಡಬಹುದಾಗಿದೆ. ಈ ಬಗ್ಗೆ ಹಲವು ನಟರು ದನಿಕೂಡ ಎತ್ತಿದ್ದಾರೆ. ಆದರೆ ಬಹಳ ವರ್ಷಗಳ ಹಿಂದೆಯೇ ವಿಷ್ಣುವರ್ಧನ್ ಈ ವಿಷಯವಾಗಿ ಮಾತನಾಡಿದ್ದರು. ಈ ವಿಡಿಯೋದಲ್ಲಿ ನಟ, ಕಲಾವಿದರಿಗೆ ಉತ್ತರ- ದಕ್ಷಿಣ ಎನ್ನುವುದು ಇಲ್ಲ. ಎಲ್ಲವೂ ಕಲಾವಿದನಿಗೆ ಸೇರಿದ್ದು. ಆದರೆ ಕೆಲವೊಮ್ಮೆ ಈ ರೀತಿಯ ವಿಭಿನ್ನ ನಿಲುವು ತೋರುತ್ತಿರುವುದು ಕಲಾವಿದರಿಗೆ ತುಂಬಾ ಮಾನಸಿಕ ನೋವು ಉಂಟು ಮಾಡುತ್ತದೆ ಎಂದಿದ್ದಾರೆ. ಬಾಲಿವುಡ್ ಅನ್ನು ಎಲ್ಲೆಡೆ ಒಪ್ಪಿಕೊಳ್ಳುವಾಗ, ಇಲ್ಲಿಯ ಕಲಾವಿದರೂ ಬೇರೆ ಕಡೆ ಹೋದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ, ದಕ್ಷಿಣದಿಂದ ಯಾರಾದರೂ ಉತ್ತರಕ್ಕೆ ಹೋದರೆ, ನಾನು ತುಂಬಾ ಹೆಮ್ಮೆ ಪಡುತ್ತೇನೆ. ಅದು ದಕ್ಷಿಣದ ಕೀರ್ತಿಯನ್ನು ಭಾರತಾದ್ಯಂತ ಪ್ರಸರಿಸಿದಂತೆ ಎಂದು ಅವರು ಹೇಳಿದ್ದಾರೆ.
ಹಾಗೆಂದು ವಿಷ್ಣುವರ್ಧನ್ ಅವರ ಕನ್ನಡದ ಪ್ರೀತಿ ಅಷ್ಟಿಷ್ಟಲ್ಲ. ಬೆಂಗಳೂರಿನಲ್ಲಿ ಕನ್ನಡ ಮರೆಯಾಗುತ್ತಿರುವುದಕ್ಕೆ ಹಿಂದೊಮ್ಮೆ ಬೇಸರ ಕೂಡ ವ್ಯಕ್ತಪಡಿಸಿದ್ದರು. ಬ್ರಿಟೀಷರ ವಶದ ಬಗ್ಗೆ ಮಾತನಾಡುತ್ತಾ, ‘ಬೆಂಗಳೂರನ್ನು ಹಲವು ಭಾಷೆಯವರು ವಶ ಮಾಡಿಕೊಂಡಿದ್ದಾರೆ. ಮುಂದಿನ ವರ್ಷಗಳಲ್ಲಿ ಬೆಂಗಳೂರಲ್ಲಿ ಕನ್ನಡಿಗರು ಎಲ್ಲಿದ್ದಾರೆ ಎಂಬುದನ್ನು ದುರ್ಬೀನ್ ಹಾಕಿ ಹುಡುಕಬೇಕಾಗುತ್ತದೆ’ ಎಂದಿದ್ದರು. ಅದು ಈಗ ನಿಜ ಎನಿಸುತ್ತಿದೆ.
ಅಷ್ಟಕ್ಕೂ, ನಟ ವಿಷ್ಣುವರ್ಧನ್ ಅವರಿಗೆ ಎಲ್ಲ ಕ್ಯಾಮೆರಾಗೂ ಪರ್ಫೆಕ್ಟ್ ಫೋಟೋಜೆನಿಕ್ ಫೇಸ್ ಇತ್ತು ಎನ್ನುವುದು ಅಂದಿನ ಎಲ್ಲ ನಿರ್ದೇಶಕರ ಮಾತಾಗಿತ್ತು. ಯಾವುದೇ ಆಂಗಲ್ನಲ್ಲಿ ತೋರಿಸಿದರೂ ನಟ ವಿಷ್ಣುವರ್ಧನ್ ಮುಖ ಚೆನ್ನಾಗಿಯೇ ಕಾಣುತ್ತಿತ್ತು ಎನ್ನಲಾಗುತ್ತಿತ್ತು. ಸರ್ವೇಯಲ್ಲೂ ಬಹಳಷ್ಟು ಜನರು ನಟ ವಿಷ್ಣುವರ್ಧನ್ ಅವರ ಹೆಸರನ್ನೇ ಹೇಳಿದ್ದರು. ಬೇರೆಯವರಿಗಿಂತ ವೋಟಿಂಗ್ನಲ್ಲಿ ನಟ ವಿಷ್ಣುವರ್ಧನ್ ಭಾರೀ ಮುಂದಿದ್ದರಂತೆ. ಆದ್ದರಿಂದಲೇ ಅವರನ್ನು ಭಾರತದ ಅತ್ಯಂತ ಹ್ಯಾಂಡ್ಸಮ್ ಹೀರೋ ಎಂದು ಘೋಷಿಸಲಾಗಿತ್ತು. ಈ ಬಗ್ಗೆ ಕಳೆದ ತಿಂಗಳಷ್ಟೇ ರಿವೀಲ್ ಆಗಿದೆ. ಕೊಡಕ್ (Kodak) ಹಾಗೂ ಫ್ಯೂಜಿ (Fuji) ಸಂಸ್ಥೆ ಇದನ್ನು ಘೋಷಿಸಿರುವುದು ಬೆಳಕಿಗೆ ಬಂದಿದೆ.


