ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಕಾಂಬಿನೇಶನ್ನ ‘ಮಾರುತ’ ಸಿನಿಮಾ ಇದೇ ನವೆಂಬರ್ 21ಕ್ಕೆ ತೆರೆಗೆ ಬರುತ್ತಿದೆ. ಎಸ್ ನಾರಾಯಣ್ ನಿರ್ದೇಶಿಸಿ, ಕೆ ಮಂಜು ಹಾಗೂ ರಮೇಶ್ ಯಾದವ್ ಜಂಟಿಯಾಗಿ ನಿರ್ಮಿಸಿರುವ ಚಿತ್ರವಿದು.
ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಕಾಂಬಿನೇಶನ್ನ ‘ಮಾರುತ’ ಸಿನಿಮಾ ಇದೇ ನವೆಂಬರ್ 21ಕ್ಕೆ ತೆರೆಗೆ ಬರುತ್ತಿದೆ. ಎಸ್ ನಾರಾಯಣ್ ನಿರ್ದೇಶಿಸಿ, ಕೆ ಮಂಜು ಹಾಗೂ ರಮೇಶ್ ಯಾದವ್ ಜಂಟಿಯಾಗಿ ನಿರ್ಮಿಸಿರುವ ಚಿತ್ರವಿದು. ಬೃಂದಾ ಆಚಾರ್ಯ ಚಿತ್ರದ ನಾಯಕಿಗ. ಎಸ್ ನಾರಾಯಣ್, ‘ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕತೆಯನ್ನು ಒಳಗೊಂಡ ಈ ಚಿತ್ರದ ಪ್ರಮುಖ ಪಾತ್ರಕ್ಕೆ ಗಮನ ಸೆಳೆಯುವ ಕಲಾವಿದರು ಬೇಕಿತ್ತು. ಆಗ ನಮಗೆ ನೆನಪಾಗಿದ್ದೇ ದುನಿಯಾ ವಿಜಯ್ ಅವರು. ಅವರು ಪಾತ್ರವನ್ನು ಒಪ್ಪಿ- ನಟಿಸಿದ್ದು ಖುಷಿ ಕೊಟ್ಟಿದೆ.
ಇದು ನನ್ನ ನಿರ್ದೇಶನದ 51ನೇ ಚಿತ್ರ. ನಮ್ಮ ಮಕ್ಕಳ ಬಗ್ಗೆ ಎಷ್ಟು ಗಮನ ಕೊಟ್ಟರೂ ಕಡಿಮೆ. ಅದರಲ್ಲೂ ಹೆಣ್ಣುಮಕ್ಕಳ ಮೇಲಂತೂ ವಿಶೇಷ ಗಮನ ಕೊಡಬೇಕು. ತಂದೆ - ತಾಯಿ ಮಕ್ಕಳ ಜೊತೆಗೆ ಸ್ವಲ್ಪ ಸಮಯ ಕೊಡಬೇಕು. ಇಲ್ಲದೆ ಹೋದರೆ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ತೋರಿಸಿದ್ದೇವೆ. ‘ಮಾರುತ 2’ ಕೂಡ ಬರಲಿದೆ. ಅದರ ಚಿತ್ರಕಥೆ ನಡೆಯುತ್ತಿದೆ. ಅದರಲ್ಲೂ ದುನಿಯಾ ವಿಜಯ್ ಅವರು ನಟಿಸಲಿದ್ದಾರೆ’ ಎಂದರು.
ನವೆಂಬರ್ ನಮಗೆ ಲಕ್ಕಿ ತಿಂಗಳು
ವಿಶೇಷ ಪಾತ್ರದಲ್ಲಿ ರವಿಚಂದ್ರನ್ ಅವರು ನಟಿಸಿದ್ದಾರೆ. ದುನಿಯಾ ವಿಜಯ್, ‘ಮನುಷ್ಯನಿಗೆ ಶಿಸ್ತು ಮತ್ತು ಸಮಯ ಪಾಲನೆ ಮುಖ್ಯ. ನಾನು ಅದನ್ನು ಎಸ್ ನಾರಾಯಣ್ ಅವರಿಂದ ಕಲಿತಿದ್ದೇನೆ. ಒಂದು ಒಳ್ಳೆಯ ಚಿತ್ರದ ಮೂಲಕ ನಿಮ್ಮ ಮುಂದೆ ಬರುತ್ತಿದ್ದೇವೆಂಬ ಖುಷಿ ಇದೆ’ ಎಂದರು. ಕೆ ಮಂಜು, ‘ನ.21ಕ್ಕೆ 225ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ನವೆಂಬರ್ ನಮಗೆ ಲಕ್ಕಿ ತಿಂಗಳು.
ಯಾಕೆಂದರೆ ನನ್ನ ನಿರ್ಮಾಣದ ‘ರಾಜಾಹುಲಿ’ ಹಾಗೂ ರಮೇಶ್ ಯಾದವ್ ನಿರ್ಮಾಣದ ‘ದಾಸ’ ಚಿತ್ರಗಳು ನವೆಂಬರ್ನಲ್ಲೇ ತೆರೆಕಂಡು ಸೂಪರ್ ಹಿಟ್ ಆಗಿದ್ದವು. ಈಗ ‘ಮಾರುತ’ ಚಿತ್ರ ಕೂಡ ಗೆಲ್ಲಲಿದೆ’ ಎಂದರು. ಚಿತ್ರದ ನಾಯಕ ಶ್ರೇಯಸ್, ನಾಯಕಿ ಬೃಂದಾ ಆಚಾರ್ಯ ಹಾಗೂ ಚಿತ್ರದಲ್ಲಿ ನಟಿಸಿರುವ ಶರತ್ ಲೋಹಿತಾಶ್ವ, ವಿನಯ್ ಬಿದ್ದಪ್ಪ, ರಣವ್ ಹಾಜರಿದ್ದು ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.


