ಶಿವಣ್ಣ, ಗೀತಕ್ಕನ ಬಗ್ಗೆ ನನಗೆ ಅಪಾರ ಗೌರವ ಇದೆ. ಶಿವಣ್ಣ ನಿಮಗೆ ನೋವಾಗಿದ್ರೆ ಕೈಮುಗಿದು‌ ಕೇಳ್ತಿನಿ.. ತಪ್ಪಾಗಿದ್ರೆ ಕ್ಷಮಿಸಿ. ನಾನು ಪುನೀತ್ ಅವರ ಬಗ್ಗೆ ಮಾತಾಡಿದ್ದು ನೋವಾಗಿದೆ ಅಂತ ಗೊತ್ತು, ದಯವಿಟ್ಟು ಕ್ಷಮಿಸಿ. ದರ್ಶನ್ ಬಗ್ಗೆಯೂ ನನಗೆ ಅಪಾರ ಗೌರವ ಇದೆ…

ಬಗೆಹರಿದ ಕನಕಪುರ ಶ್ರೀನಿವಾಸ್ ವಿವಾದ

ಸ್ಯಾಂಡಲ್ ವುಡ್‌ನ ಕೆಲವು ನಿರ್ದೇಶಕ,‌ ನಟರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ವಿವಾದಕ್ಕೆ ಗುರಿಯಾದ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ (Kanakapura Srinivas) ಅವರು ಇದೀಗ ಫಿಲಂ ಚೇಂಬರ್‌ಗೆ ಬಂದು ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಕೆಟ್ಟ ಪದಗಳನ್ನು ಬಳಸಿ ಬಾಯಿಗೆ ಬಂದಂತೆ ಬೈದಿದ್ದ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬುಲಾವ್ ಮಾಡಿ ಕರೆಸಿಕೊಂಡಿತ್ತು. ಅಷ್ಟೇ ಅಲ್ಲ, ನಿರ್ದೇಶಕರಾದ ಜೋಗಿ ಪ್ರೇಮ್ ಹಾಗೂ ಎ.ಪಿ ಅರ್ಜುನ್ ದೂರು ಕೂಡ ದಾಖಲಿಸಿದ್ದರು.

ಹೀಗಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು‌ ಫಿಲಂ ಚೇಂಬರ್ ಹೊಸ ಅಧ್ಯಕ್ಷೆ ಜಯಮಾಲಾ ಅವರು ಕನಕಪುರ ಶ್ರೀನಿವಾಸ್ ಅವರನ್ಜು ಫಿಲ್ಮ್ ಚೇಂಬರ್‌ಗೆ ಕರೆಸಿಕೊಂಡಿದ್ದರು. ಆ ಬಳಿಕ ಮಾತನ್ನಾಡಿ ಸಮಸ್ಯೆ ಬಗೆಹರಿದಿದೆ ಎಂದಿದ್ದಾರೆ.

ಕಾಟನ್ ಪೇಟೆ ಸಿನಿಮಾ ಸುದ್ದಿಗೋಷ್ಠಿ

ಕಾಟನ್ ಪೇಟೆ ಸಿನಿಮಾ ಸುದ್ದಿಗೋಷ್ಠಿಯಲ್ಲಿ ವೇದಿಕೆಯಲ್ಲೇ ನಾಲಿಗೆ ಹರಿಬಿಟ್ಟಿದ್ದ ಕನಕಪುರ ಶ್ರೀನಿವಾಸ್ ಅವರು ಕನ್ನಡದ ಹಲವು ನಟ-ನಿರ್ದೇಶಕರ ವಿರುದ್ಧ ಮಾತನ್ನಾಡಿ ವಿವಾದ ಸೃಷ್ಟಿಸಿಕೊಂಡಿದ್ದರು. ಆದರೆ ಇದೀಗ, ಕಾಟನ್ ಪೇಟೆ ಸಿನಿಮಾ ಸುದ್ದಿಗೋಷ್ಠಿ ವೇಳೆ ನಾನು ಆ ರೀತಿ ಮಾತಾಡಿದ್ದು ತಪ್ಪು. 'ನನಗೆ ಪುನೀತ್ ಸರ್ ದೇವರು ಇದ್ದಂಗೆ. ನಾನು ದುಡ್ಡಿಗೋಸ್ಕರ ದೇವರು ಅವರನ್ನ ತಗೊಂಡ ಅಂದಿದ್ದೆ ಅಷ್ಟೇ. ಆ ಮಾತನ್ನ ನಾನು ಈಗ ವಾಪಸ್ ತಗೊಳ್ತಿನಿ.

ದರ್ಶನ್ ಅವರೇ.. ಬೇಗ ನೀವು ಹೊರಗೆ ಬನ್ನಿ

ಶಿವಣ್ಣ, ಗೀತಕ್ಕನ ಬಗ್ಗೆ ನನಗೆ ಅಪಾರ ಗೌರವ ಇದೆ. ಶಿವಣ್ಣ ನಿಮಗೆ ನೋವಾಗಿದ್ರೆ ಕೈಮುಗಿದು‌ ಕೇಳ್ತಿನಿ.. ತಪ್ಪಾಗಿದ್ರೆ ಕ್ಷಮಿಸಿ. ನಾನು ಪುನೀತ್ ಅವರ ಬಗ್ಗೆ ಮಾತಾಡಿದ್ದು ನೋವಾಗಿದೆ ಅಂತ ಗೊತ್ತು, ದಯವಿಟ್ಟು ಕ್ಷಮಿಸಿ. ನನ್ನ ಸಿನಿಮಾ ರಿಲೀಸ್ ಆಗಲಿ ಅನ್ನೋ ದುಃಖದಲ್ಲಿ ಆ ರೀತಿ ಹೇಳಿದ್ದೆ. ದರ್ಶನ್ ಬಗ್ಗೆಯೂ ನನಗೆ ಅಪಾರ ಗೌರವ ಇದೆ. ದರ್ಶನ್ ಅವರೇ.. ಬೇಗ ನೀವು ಹೊರಗೆ ಬನ್ನಿ, ನೀವು ಹೊರಗೆ ಬಂದ ಮೇಲೆ ಒಟ್ಟಿಗೆ ಸಿನಿಮಾ ಮಾಡೋಣ' ಎಂದಿದ್ದಾರೆ.

ಜೊತೆಗೆ, 'ಧ್ರುವ ಸರ್ಜಾ ಅವರೇ ನೀವು ಹಳ್ಳಿ ಹುಡುಗ.. ನಮಗೆ ಕಾಲ್ ಶೀಟ್ ಕೊಡಿ.. ನಿಮಗೆ ಒಳ್ಳೆಯ ಡೈರೆಕ್ಟರ್, ಕರೆದುಕೊಂಡು ಬರ್ತಿನಿ. ಸಿನಿಮಾ ಮಾಡೋಣ. ಡೈರೆಕ್ಟರ್ ಪ್ರೇಮ್, ಅರ್ಜುನ್ ಅವರಿಗೂ ಹೇಳ್ತೀನಿ.. ಒಟ್ಟಿಗೆ ಸಿನಿಮಾ ಮಾಡೋಣ. ಕನ್ನಡ‌ ಇಂಡಸ್ಟ್ರೀಯಲ್ಲಿ ನಾನು ಇನ್ನೂ ಕೆಲಸ ಮಾಡಬೇಕು, ದಯವಿಟ್ಟು ನನ್ನನ್ನು ಉಳಿಸಿಕೊಳ್ಳಿ..' ಎಂದಿದ್ದಾರೆ.

ಇನ್ನು ಈ ಬಗ್ಗೆ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಅವರು ಹೀಗೆ ಹೇಳಿದ್ದಾರೆ- 'ಶ್ರೀನಿವಾಸ್ ಅವರಿಗೆ ತಾವು ಆಡಿರೋ ಮಾತು ತಪ್ಪು ಅನ್ನೋದು ಈಗ ಅರಿವಾಗಿದೆ. ತಾವು ಆಡಿದ ಮಾತಿಗೆ ಕ್ಷಮೆ ಕೇಳಿ, ಇನ್ಮುಂದೆ ಹೀಗೆ ಮಾತಾಡೋದಿಲ್ಲ ಅಂದಿದ್ದಾರೆ. ಹಾಗಾಗಿ ಈ ವಿಚಾರ ಇಲ್ಲಿಗೆ ಬಿಡೋಣ. ಯಾರು ಕೂಡ ಈ ರೀತಿ ಮಾತಾಡೋ ಹಾಗಿಲ್ಲ. ಕನ್ನಡ ಚಿತ್ರರಂಗಕ್ಕೆ ಬೆಲೆ ಇದೆ.. ನಮ್ಮ ಬಂಡವಾಳವೇ ನಮ್ಮ ಕಲಾವಿದರು. ಬಂಡವಾಳದ ಮೇಲೆ ಪೆಟ್ಟು ಬಿದ್ದಿದೆ.. ಬೇಸರ.. ಕೋಪದಲ್ಲಿ ಮಾತಾಡಿದ್ದಾರೆ ಶ್ರೀನಿವಾಸ್. ಈ ವಿವಾದ ಬಗೆಹರಿದಿದೆ' ಎಂದಿದ್ದಾರೆ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷೆ ಜಯಮಾಲಾ.