ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಡುಮಲ್ಲೇಶ್ವರ, ಗವಿ ಗಂಗಾಧರೇಶ್ವರ ಸೇರಿದಂತೆ ಪ್ರಮುಖ ಶಿವ ದೇವಾಲಯಗಳು ವಿಶೇಷ ಪೂಜೆ ಹಾಗೂ ಜಾಗರಣೆಗೆ ಸಜ್ಜಾಗಿವೆ. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಹೂವು ಮತ್ತು ಹಣ್ಣುಗಳ ಬೆಲೆ ಏರಿಕೆಯಾಗಿದ್ದು, ಬಿಲ್ವಪತ್ರೆಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.

ಬೆಂಗಳೂರು (ಫೆ.15): ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ನಗರದ ಶಿವ ದೇವಾಲಯಗಳು ಭಾನುವಾರ ವಿಶೇಷ ಪೂಜೆಗೆ ಸಜ್ಜಾಗಿವೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಾಡು ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ ದೇಗುಲ, ಮುರುಗೇಶ್‌ ಪಾಳ್ಯದ ಶಿವೋಹಂ ಶಿವ ದೇವಾಲಯ, ಗವಿಪುರಂ ಗವಿ ಗಂಗಾಧರೇಶ್ವರ, ಹಲಸೂರು ಸೋಮೇಶ್ವರ, ಓಂಕಾರ ಹಿಲ್ಸ್‌ನ ದ್ವಾದಶ ಜ್ಯೋತಿರ್ಲಿಂಗ ದೇವಾಲಯ ಸೇರಿದಂತೆ ಶಿವ ದೇವಾಲಗಳಲ್ಲಿ ವಿಶೇಷ ಪೂಜೆಗಳು ಜರುಗಲಿವೆ. ಜತೆಗೆ ಹಲವೆಡೆ ರಾತ್ರಿ ಜಾಗರಣೆಗೆ ಸಾಂಸ್ಕೃತಿಕ, ಹಾಸ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶಿವರಾತ್ರಿ ಹಬ್ಬದ ಪ್ರಯುಕ್ತ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಸಕಲ ಸಿದ್ಧತೆಯಾಗಿದೆ. ಹೂವು ಹಣ್ಣುಗಳಿಂದ ದೇವಸ್ಥಾನಕ್ಕೆ ಅಲಂಕಾರ ಮಾಡಲಾಗಿದ್ದು, ದೇವಾಲಯದ ಒಳಾಂಗಣವನ್ನು ಪೂರ್ತಿ ಕಬ್ಬುಗಳಿಂದ ಸಿಂಗರಿಸಲಾಗಿದೆ. ನಸುಕಿನಿಂದಲೇ ವಿಶೇಷ ಪೂಜೆ ನಡೆಯಲಿದ್ದು, ಬ್ರಹ್ಮರಥೋತ್ಸವ ಜರುಗಲಿದೆ. ಭಕ್ತರಲ್ಲಿ ನೂಕುನುಗ್ಗಲು ಆಗದಂತೆ ದೇವಸ್ಥಾನದ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಕ್ರಮ ವಹಿಸಲಾಗಿದೆ.

ಶಿವರರಾತ್ರಿಗೆ ಬೆಲೆ ಏರಿಕೆ ಬಿಸಿ

ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿ ಬಜಾರ್ ಹಾಗೂ ಯಶವಂತಪುರ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಜೋರಾಗಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ದರ ಏರಿಕೆ ಮಾಡಿದ್ದಾರೆ. ಶಿವರಾತ್ರಿ ಪೂಜೆಗೆ ಅತ್ಯಗತ್ಯವಾದ ಬಿಲ್ವಪತ್ರೆಗೆ ಭಾರೀ ಬೇಡಿಕೆ ಉಂಟಾಗಿದೆ. ಪೂಜೆಗೆ ಬೇಕಾದ ಏಲಕ್ಕಿ ಬಾಳೆಹಣ್ಣು, ದ್ರಾಕ್ಷಿ, ಸೇಬು, ದಾಳಿಂಬೆ ಹಾಗೂ ಕಿತ್ತಳೆ ಹಣ್ಣುಗಳ ದರವೂ ಕಳೆದ ವಾರಕ್ಕಿಂತ ಶೇ. 20 - 30 ರಷ್ಟು ಹೆಚ್ಚಾಗಿದೆ. ಕಲ್ಲಂಗಡಿ ಹಣ್ಣು ಮತ್ತು ಕಬ್ಬಿನ ಜಲ್ಲೆಗಳನ್ನು ಜನತೆ ಹೆಚ್ಚಾಗಿ ಖರೀದಿಸಿದ್ದಾರೆ.

ಯಾವ ಹೂವಿನ ಬೆಲೆ ಎಷ್ಟಿದೆ?

ಹೂವು (ಕೇಜಿ-₹)

ಸೇವಂತಿ 250

ಗುಲಾಬಿ 200

ಮಲ್ಲಿಗೆ 1400

ಕನಕಾಂಬರ 800

ಚೆಂಡು ಹೂವು 60

ಸುಗಂಧ ರಾಜ 120

ತಾವರೆ (ಒಂದಕ್ಕೆ) 40

ಕಾಕಡ 400

------

ಶಿವರಾತ್ರಿ ಹಣ್ಣುಗಳ ಬೆಲೆ ಏರಿಕೆ

ಸೇಬು 180

ಆರೆಂಜ್ 100

ದಾಳಿಂಬೆ 300

ಪಪ್ಪಾಯ 60

ಕಾಬುಲ್ ದ್ರಾಕ್ಷಿ 140

ಕಲ್ಲಂಗಡಿ 30

ಏಲಕ್ಕಿ ಬಾಳೆ ಹಣ್ಣು 120

ಕಿವಿ ಹಣ್ಣು 300

ಸಪೋಟ 80

ಡ್ರ್ಯಾಗನ್ 200

ಕರಬೂಜ 50 

YouTube video player