ಹಾಸನದ 25 ವರ್ಷದ ಸಾಫ್ಟ್ವೇರ್ ಉದ್ಯೋಗಿ ಶ್ವೇತಾ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ ವಿಚಾರ ಅನೇಕರನ್ನು ದಂಗಾಗುವಂತೆ ಮಾಡಿದೆ. ಕೆಲಸವನ್ನು ನಿರಂತರವಾಗಿ ಪ್ರೀತಿಸುತ್ತಿದ್ದ, ಶ್ವೇತಾ ತಲೆನೋವನ್ನು ನಿರ್ಲಕ್ಷಿಸಿದ್ದಳು ಎಂದು ಅವರ ಸಹೋದ್ಯೋಗಿ ಹೇಳಿದ್ದಾರೆ.
ಹಾಸನದ ಸಾಫ್ಟ್ವೇರ್ ಉದ್ಯೋಗಿ ಶ್ವೇತಾ ಹಠಾತ್ ಕುಸಿದು ಬಿದ್ದು ಸಾವು
ಹಾಸನ: ನಗರದ ಸಾಫ್ಟ್ವೇರ್ ಉದ್ಯೋಗಿ ಶ್ವೇತಾ ಸಾವಿನ ಬಗ್ಗೆ ಅವರ ಸಹೋದ್ಯೋಗಿ ಮಾತನಾಡಿದ್ದು ಶ್ವೇತಾ ಅವರ ಹಠಾತ್ ಸಾವಿಗೆ ತೀವ್ರ ಆಘಾತ ವ್ಯಕ್ತಪಪಡಿಸಿದ್ದಾರೆ. ಶ್ವೇತಾ ಜೊತೆಗೆ ಕೆಲಸ ಮಾಡುತ್ತಿದ್ದ ನಿಹಾಲ್ ಎಂಬುವವರು ಮಾತನಾಡಿ, ನಾನು ಹಾಗೂ ಶ್ವೇತಾ ಜೊತೆಯಾಗಿ ಕೆಲಸಕ್ಕೆ ಸೇರಿದ್ದೇವು. ಕೆಲಸಕ್ಕೆ ಸೇರಿ 3 ವರ್ಷ ಆಗಿತ್ತು. ಶುಕ್ರವಾರದವರೆಗೆ ಆಕೆ ನಮ್ಮ ಜೊತೆ ಚೆನ್ನಾಗಿಯೇ ಇದ್ದರು. ಕಳೆದ ಮೂರು ತಿಂಗಳಿನಿಂದ ಆಕೆ ತನಗೆ ತುಸು ತಲೆನೋವು ಇದೆ ಎಂದು ಹೇಳುತ್ತಿದ್ದಳು. ಆದರೆ ಊಟ ಮಾಡಿದರೆ ಸರಿ ಹೋಗುತ್ತೆ ಎಂದು ಹೇಳುತ್ತಿದ್ದರು. ಆದರೆ ಈ ರೀತಿ ಆಗಬಹುದು ಎಂದು ನಾವು ಊಹೆಯೂ ಮಾಡಿರಲಿಲ್ಲ.
ಆರೋಗ್ಯ ನಿರ್ಲಕ್ಷಿಸಿ ಕೆಲಸದ ಮೇಲೇಯೇ ಗಮನ
ಹೆಚ್ಚಾಗಿ ಕೆಲಸದ ಮೇಲೆಯೇ ಗಮನ ಹರಿಸುತ್ತಿದ್ದರು. ಯಾವತ್ತು ಅವರು ರಜೆ ತೆಗೆದುಕೊಂಡಿದ್ದೆ ಇಲ್ಲ. ಒಂದೂವರೆ ವರ್ಷಗಳಿಂದ ಅವರು ರಜೆ ತೆಗೆದುಕೊಂಡಿದ್ದೆ ಇರಲಾರದು. ನಾನು ಚೆನ್ನಾಗಿ ಕೆಲಸ ಮಾಡಬೇಕು ಎಂಬ ಆಶಯ ಅವರದಾಗಿತ್ತು. ಬಹುಶಃ ಅದೇ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿರಬಹುದೇನೋ ಎಂದು ಅವರ ಸಹೋದ್ಯೋಗಿ ಹೇಳಿದ್ದಾರೆ. ಕೆಲಸವನ್ನು ಹೆಚ್ಚು ತಲೆಗೆ ಹಾಕಿಕೊಂಡಿದ್ದರು. ಕೆಲಸವನ್ನು ತುಂಬಾ ಪ್ರೀತಿಸುತ್ತಿದ್ದ ಆಕೆ ತಾನು ಎಲ್ಲರಿಗಿಂತ ಕೆಲಸದಲ್ಲಿ ಮುಂದಿರಬೇಕು ಎನ್ನುತ್ತಿದ್ದರೂ ಹಾಗೂ ಹಾಗೆಯೇ ಇದ್ದರೂ ಕೂಡ.
ವಾರದ ಹಿಂದೆ ಅವರಿಗೆ ತಲೆನೋವು ಕಾಣಿಸಿಕೊಂಡಾಗ ಇಲ್ಲೇ ಸಮೀಪದ ಕ್ಲಿನಿಕ್ಗೆ ತೋರಿಸಿದ್ದರು. ಆಗ ಅಲ್ಲಿ ಆಮೂಲಿ ಜ್ವರ ಇದೆ ಎಂದು ಆಕೆಗೆ ಮಾತ್ರೆ ನೀಡಿದ್ದರು. ಸ್ವಲ್ಪ ನಿರ್ಲಕ್ಷ್ಯದಿಂದ ಈ ರೀತಿ ಆಗಿರಬಹುದೇನೋ? ಆಕೆಯ ತಲೆನೋವನ್ನು ಯಾರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕ್ಲಿನಿಕ್ಗೆ ಹೋಗಿಯೂ ಮತ್ತೆ ಕಚೇರಿಗೆ ಬಂದು ಕೆಲಸ ಮಾಡಿದ್ದರು. ಹೀಗಾಗಿ ನಮಗೂ ಅದರ ಬಗ್ಗೆ ಹೆಚ್ಚಿನ ಗಮನ ಇರಲಿಲ್ಲ. ಚೆನ್ನಾಗಿದ್ದಾಳಲ್ಲ ಮಾಮೂಲಿ ಎಲ್ಲರಿಗೂ ಜ್ವರ ಬಂದಂತೆ ಈಕೆಗೂ ಬಂದಿದೆ ಎಂದುಕೊಂಡಿದ್ದೆವು. ಘಟನೆ ನಡೆದಂದು ಕೂಡ ಶುಕ್ರವಾರ ಸಂಜೆಯವರೆಗೂ ಆಕೆ ಕಚೇರಿಯಲ್ಲೇ ಇದ್ದಳು. ಆದರೆ ಮನೆಗೆ ಹೋದ ಮೇಲೆ ಆ ರೀತಿ ಆಗಿದೆ. ನಮಗೆ ಆ ಬಗ್ಗೆ ಗೊತ್ತಿರಲಿಲ್ಲ. ಆದರೆ ಶನಿವಾರ ಅವರು ಕಚೇರಿಗೆ ಬಂದಿರಲಿಲ್ಲ, ಆದರೆ ಆಕೆ ರಜೆಯೇ ಹಾಕುವ ಹುಡುಗಿ ಅಲ್ಲ, ಹೀಗಾಗಿ ಆಕೆ ಹೇಗೆ ರಜೆ ಹಾಕಿದಳು ಎಂದು ಸಹೋದ್ಯೋಗಿಗಳೆಲ್ಲಾ ಆಕೆಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸಲಿಲ್ಲ. ಆದರೆ ನಂತರ ಅವರ ತಾಯಿಗೆ ಕರೆ ಮಾಡಿದಾಗಲೇ ಹೀಗಾಗಿದೆ ಎಂಬ ವಿಚಾರ ತಿಳಿಯಿತು.
ಆದರೆ ಆಕೆ ಹುಷಾರಾಗಿ ಬರುತ್ತಾಳೆ ಎಂದು ನಾವು ನಿರೀಕ್ಷೆ ಇಟ್ಟುಕೊಂಡಿದ್ದೆವು. ಲೋಬಿಪಿಯಾಗಿದೆ ಮತ್ತೆ ಪ್ರಜ್ಞೆ ಬರಬಹುದು ಎಂದು ಭಾವಿಸಿದೆವು. ಆದರೆ ಅವರು ಹಠಾತ್ ಆಗಿ ಸಾವನ್ನಪ್ಪಿದ್ದಾರೆ ಎಂದು ಶ್ವೇತಾ ಅವರ ಸಹೋದ್ಯೋಗಿ ನಿಹಾಲ್ ಅಲೆಕ್ಸ್ ಎಂಬುವವರು ನೋವಿನಿಂದ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಆರೋಗ್ಯ ನಿರ್ಲಕ್ಷಿಸಿ ನಿರಂತರ ಕೆಲಸ: ಹಾಸನದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಹಠಾತ್ ಸಾವು
ಹಾಸನದಲ್ಲಿ ಇಂದು 25 ವರ್ಷದ ಸಾಫ್ಟ್ವೇರ್ ಉದ್ಯೋಗಿ ಶ್ವೇತಾ ಎಂಬುವವರು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಶ್ವೇತಾ ಹಾಸನದ ಮ್ಯಾಗ್ನಾ ಸಾಫ್ಟ್ ಕಂಪನಿಯ ಹಾಸನ ಶಾಖೆಯಲ್ಲಿ ಮೂರು ವರ್ಷದಿಂದ ಕೆಲಸ ಮಾಡಿಕೊಂಡಿದ್ದರು. ಏಪ್ರಿಲ್ 25 ರ ಶುಕ್ರವಾರ ಸಂಜೆ ಮನೆಯಲ್ಲಿ ಕುಸಿದು ಬಿದ್ದಿದ್ದ ಅವರು ಬಳಿಕ ಕೋಮಾಗೆ ಜಾರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಶ್ವೇತಾ ಕುಸಿದು ಬಿದ್ದ ಕೂಡಲೇ ಮನೆಯವರು ಅವರನ್ನು ಚಿಕಿತ್ಸೆಗೆ ಕರೆದೊಯ್ದಿದ್ದರು. ಆದರೆ ಆಗಲೇ ಶ್ವೇತಾ ಕೋಮಾಗೆ ಜಾರಿ ಸಾವನ್ನಪ್ಪಿದ್ದರು.
ಮೆದುಳಿನಲ್ಲಿ ತೀವ್ರ ರಕ್ತಶ್ರಾವದಿಂದಾಗಿ ಶ್ವೇತಾ ಹಠಾತ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಶ್ವೇತಾ ಅವರಿಗೆ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಪೋಷಕರು ಮುಂದಾಗಿದ್ದರು. ಆದರೆ ಅಂಗಾಂಗ ದಾನ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಯುವತಿ ಅಂತ್ಯಕ್ರಿಯೆ ನಡೆದಿದೆ. ಶ್ವೇತಾ ಅವರು ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಯುವತಿಯಾಗಿದ್ದಾರೆ. ಬಂಡಿಲಕ್ಕನಕೊಪ್ಪಲು ಗ್ರಾಮದ ಗಂಗಾಧರ್ ಹಾಗೂ ಸರೋಜ ದಂಪತಿ ಪುತ್ರಿಯಾಗಿದ್ದು, ಶ್ವೇತಾ ಅವರ ಹಠಾತ್ ಸಾವಿನಿಂದ ಕುಟುಂಬದವರು ತೀವ್ರ ಆಘಾತಕ್ಕೀಡಾಗಿದ್ದಾರೆ.
ಇದನ್ನೂ ಓದಿ: ಬೀದಿ ಬದಿ ಪಾನಿಪುರಿ ಸೇವಿಸಿದ್ದ 8 ವರ್ಷದ ಬಾಲಕ ಸಾವು: 18ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು


