ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಗ್ನಿ ದುರಂತಗಳಲ್ಲಿ ಗ್ಯಾರೇಜ್ಗಳಲ್ಲಿದ್ದ ವಾಹನಗಳು ಸುಟ್ಟು ಕರಕಲಾಗಿವೆ. ದಾವಣಗೆರೆಯಲ್ಲಿ ಕಾರುಗಳು ಭಸ್ಮವಾದರೆ, ಇಳಕಲ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೈಕ್ಗಳು ಬೆಂಕಿಗಾಹುತಿಯಾಗಿವೆ.
ದಾವಣಗೆರೆ/ಬಾಗಲಕೋಟೆ (ಫೆ.17): ರಾಜ್ಯದ ಎರಡು ಪ್ರತ್ಯೇಕ ಜಿಲ್ಲೆಗಳಲ್ಲಿ ಭೀಕರ ಅಗ್ನಿ ಅನಾಹುತ ಸಂಭವಿಸಿದ್ದು, ಗ್ಯಾರೇಜ್ಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳು ಬೆಂಕಿಗಾಹುತಿಯಾಗಿವೆ. ದಾವಣಗೆರೆಯಲ್ಲಿ ಕಾರುಗಳು ಸುಟ್ಟು ಭಸ್ಮವಾಗಿದ್ದರೆ, ಬಾಗಲಕೋಟೆಯ ಇಳಕಲ್ನಲ್ಲಿ ಸಾಲು ಸಾಲು ಬೈಕ್ಗಳು ಬೆಂಕಿಗೆ ಆಹುತಿಯಾಗಿವೆ.

ದಾವಣಗೆರೆಯಲ್ಲಿ ಹೊತ್ತಿ ಉರಿದ ಮಾರುತಿ ಗ್ಯಾರೇಜ್

ದಾವಣಗೆರೆಯ ಹಳೆ ಪಿಬಿ ರಸ್ತೆಯ ಎಲ್ಐಸಿ ಕಚೇರಿ ಬಳಿ ಇರುವ ಅರುಣ್ ಎಂಬುವರಿಗೆ ಸೇರಿದ 'ಮಾರುತಿ ಗ್ಯಾರೇಜ್'ನಲ್ಲಿ ಇಂದು ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ್ದು, ಗ್ಯಾರೇಜ್ನಲ್ಲಿದ್ದ ಮೂರು ಕಾರುಗಳು ಹಾಗೂ ಒಂದು ಕ್ರೂಸರ್ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ತಕ್ಷಣವೇ ಎಚ್ಚೆತ್ತ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಗಲಕೋಟೆ: ಶಾರ್ಟ್ ಸರ್ಕ್ಯೂಟ್ನಿಂದ ಲಕ್ಷಾಂತರ ಮೌಲ್ಯದ ಬೈಕ್ಗಳು ನಾಶ!

ಇತ್ತ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ತಡರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ನಿಂದ ಗ್ಯಾರೇಜ್ವೊಂದು ಧಗಧಗನೆ ಹೊತ್ತಿ ಉರಿದಿದೆ. ಇಳಕಲ್ನ ಶ್ರೀನಿವಾಸ ಚಿತ್ರಮಂದಿರದ ಬಳಿ ಇರುವ ಕೃಷ್ಣಾ ವದ್ದಿ ಎಂಬುವರ ಗ್ಯಾರೇಜ್ನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಬೆಂಕಿಯ ತೀವ್ರತೆಗೆ 8ಕ್ಕೂ ಹೆಚ್ಚು ಬೈಕ್ಗಳು ಹಾಗೂ ಒಂದು ವಾಟರ್ ವಾಷ್ ಮಷಿನ್ ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇಳಕಲ್ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ಶಮನಗೊಳಿಸಿದ್ದು, ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


