ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (KERC) ರಾಜ್ಯದ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 56 ಪೈಸೆ ವಿದ್ಯುತ್ ದರ ಏರಿಕೆಗೆ ಅನುಮೋದನೆ ನೀಡಿದೆ. ಆದಾಯ ಕೊರತೆ ಸರಿದೂಗಿಸಲು ಈ 'ಟ್ರೂ ಅಪ್' ಶುಲ್ಕವನ್ನು ವಿಧಿಸಲಾಗಿದ್ದು, ಮೇ 2026 ರಿಂದ ಗ್ರಾಹಕರ ಬಿಲ್‌ನಲ್ಲಿ ಇದು ಜಾರಿಗೆ ಬರಲಿದೆ.

ಬೆಂಗಳೂರು (ಏ.17): ಸುಡುವ ಬಿಸಿಲಿನ ಬೇಗೆಯಿಂದ ಕಂಗಾಲಾಗಿರುವ ರಾಜ್ಯದ ಜನರಿಗೆ ವಿದ್ಯುತ್ (ಎಲ್ಲಾ ಎಸ್ಕಾಂಗಳು-ESCOM) ಗ್ರಾಹಕರಿಗೆ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (KERC) ವಿದ್ಯುತ್ ದರವನ್ನು ಏರಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಹೊಸ ಆದೇಶದನ್ವಯ ಪ್ರತಿ ಯೂನಿಟ್ ವಿದ್ಯುತ್ ಬಳಕೆಯ ಮೇಲೆ 56 ಪೈಸೆ ಹೆಚ್ಚುವರಿ ಹೊರೆಯನ್ನು ಗ್ರಾಹಕರು ಹೊರಬೇಕಾಗಿದೆ.

ದರ ಏರಿಕೆಗೆ ಕಾರಣವೇನು?

ಕೆಇಆರ್‌ಸಿ ಹೊರಡಿಸಿರುವ ಆದೇಶದ ಪ್ರಕಾರ, ಈ ದರ ಏರಿಕೆಯು 2024-25ರ ಆರ್ಥಿಕ ವರ್ಷದ ಆದಾಯದ ಕೊರತೆಯನ್ನು ಸರಿದೂಗಿಸಲು ಮಾಡಲಾದ 'ಟ್ರೂ ಅಪ್' (True up Charges) ಪ್ರಕ್ರಿಯೆಯಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಬೆಸ್ಕಾಂ ಒಟ್ಟು 34,087.94 ಕೋಟಿ ರೂಪಾಯಿ ಆದಾಯವನ್ನು ನಿರೀಕ್ಷಿಸಿತ್ತು. ಆದರೆ, ವಾಸ್ತವದಲ್ಲಿ ವಿದ್ಯುತ್ ಮಾರಾಟದಿಂದ ಬಂದ ಆದಾಯ ಕೇವಲ 32,019.56 ಕೋಟಿ ರೂಪಾಯಿಗಳು ಮಾತ್ರ. ಇದರಿಂದಾಗಿ ಬೆಸ್ಕಾಂಗೆ ಬರೋಬ್ಬರಿ 2,068.38 ಕೋಟಿ ರೂಪಾಯಿಗಳ ಬೃಹತ್ ಆದಾಯದ ಕೊರತೆ ಉಂಟಾಗಿದೆ.

ಈ ಎರಡು ಸಾವಿರ ಕೋಟಿಗೂ ಅಧಿಕ ಮೊತ್ತದ ಕೊರತೆಯನ್ನು ತುಂಬಿಕೊಳ್ಳಲು ಎಸ್ಕಾಂಗಳು ದರ ಏರಿಕೆಯ ಪ್ರಸ್ತಾವನೆಯನ್ನು ಸಲ್ಲಿಸಿದ್ದವು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಕೆಇಆರ್ಸಿ, ಕೊರತೆಯನ್ನು ನೀಗಿಸಲು ಪ್ರತಿ ಯೂನಿಟ್‌ಗೆ 56 ಪೈಸೆಯಂತೆ ಗ್ರಾಹಕರಿಂದ ವಸೂಲಿ ಮಾಡಲು ಅನುಮತಿ ನೀಡಿದೆ.

ಯಾವಾಗಿನಿಂದ ಜಾರಿಗೆ ಬರಲಿದೆ?

ಕೆಇಆರ್‌ಸಿಯ ಈ ಆದೇಶವು ಏಪ್ರಿಲ್ 17, 2026 ರಂದು ಹೊರಬಿದ್ದಿದ್ದು, ಪರಿಷ್ಕೃತ ದರವು 2026 ರ ಮೇ 1 ರಿಂದ ಜಾರಿಗೆ ಬರಲಿದೆ. ಅಂದರೆ, ಮೇ ತಿಂಗಳಿನಲ್ಲಿ ಬರುವ ವಿದ್ಯುತ್ ಬಿಲ್‌ಗಳಲ್ಲಿ ಗ್ರಾಹಕರು ಈ ಹೆಚ್ಚುವರಿ 56 ಪೈಸೆ 'ಟ್ರೂ ಅಪ್' ದರವನ್ನು ಪಾವತಿಸಬೇಕಾಗುತ್ತದೆ. ಈ ವಸೂಲಾತಿಯು 2026-27ರ ಇಡೀ ಆರ್ಥಿಕ ವರ್ಷದಲ್ಲಿ ಅನ್ವಯವಾಗಲಿದ್ದು, ಏಪ್ರಿಲ್ 30, 2027 ರವರೆಗೆ ಮುಂದುವರಿಯಲಿದೆ.

ಗ್ರಾಹಕರ ಮೇಲೆ ಬೀರುವ ಪ್ರಭಾವ:

ಗೃಹಬಳಕೆದಾರರು ಮಾತ್ರವಲ್ಲದೆ ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶದ ವಿದ್ಯುತ್ ಗ್ರಾಹಕರಿಗೂ ಈ ಏರಿಕೆ ಅನ್ವಯವಾಗಲಿದೆ. ಉದಾಹರಣೆಗೆ, ಒಂದು ಮನೆ ತಿಂಗಳಿಗೆ 200 ಯೂನಿಟ್ ವಿದ್ಯುತ್ ಬಳಸಿದರೆ, ಆ ಮನೆಯ ಬಿಲ್‌ನಲ್ಲಿ ಕನಿಷ್ಠ 112 ರೂಪಾಯಿಗಳಷ್ಟು ಹೆಚ್ಚುವರಿ ಮೊತ್ತ ಸೇರ್ಪಡೆಯಾಗಲಿದೆ. ಬೃಹತ್ ಪ್ರಮಾಣದಲ್ಲಿ ವಿದ್ಯುತ್ ಬಳಸುವ ಕೈಗಾರಿಕೆಗಳಿಗೆ ಈ ದರ ಏರಿಕೆ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ.

ಆದೇಶದ ಮುಖ್ಯಾಂಶಗಳು:

  • 56 ಪೈಸೆ ಹೆಚ್ಚಳ: ಪ್ರತಿ ಯೂನಿಟ್‌ಗೆ 56 ಪೈಸೆ ಟ್ರೂ ಅಪ್ ಚಾರ್ಜ್ ಸಂಗ್ರಹ.
  • ಮೇ 2026 ರಿಂದ ಜಾರಿ: ಮೇ 1 ರಿಂದ ಪಡೆಯುವ ಮೀಟರ್ ರೀಡಿಂಗ್‌ಗಳಲ್ಲಿ ದರ ಅನ್ವಯ.
  • ಕೊರತೆ ನೀಗಿಸುವ ಗುರಿ: 2,068.38 ಕೋಟಿ ರೂ.ಗಳ ಕಂದಾಯ ಕೊರತೆ ತುಂಬಿಕೊಳ್ಳಲು ಕ್ರಮ.
  • ಪ್ರತ್ಯೇಕ ಲೆಕ್ಕಾಚಾರ: ವಸೂಲಿ ಮಾಡುವ ಮೊತ್ತದ ಬಗ್ಗೆ ಬೆಸ್ಕಾಂ ಪ್ರತ್ಯೇಕ ಲೆಕ್ಕಪತ್ರವನ್ನು ನಿರ್ವಹಿಸಬೇಕೆಂದು ಕೆಇಆರ್ಸಿ ಸೂಚಿಸಿದೆ.

ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಈ ವಿದ್ಯುತ್ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.