karnataka school holiday extension: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ರಜೆಯನ್ನು ವಿಸ್ತರಿಸಿರುವುದಕ್ಕೆ ವಿದ್ಯಾರ್ಥಿ ಸಂಘಟನೆ ಎಐಡಿಎಸ್ಒ ಹಾಗೂ ಪಾಲಕರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಸರ್ಕಾರಿ ಶಾಲಾ ಮಕ್ಕಳ ಕಲಿಕೆಗೆ ಹಿನ್ನಡೆ?
ಬೆಂಗಳೂರು (ಅ.8): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ರಜೆಯನ್ನು ವಿಸ್ತರಿಸಿರುವುದಕ್ಕೆ ವಿದ್ಯಾರ್ಥಿ ಸಂಘಟನೆ ಎಐಡಿಎಸ್ಒ ಹಾಗೂ ಪಾಲಕರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ರಜೆ ವಿಸ್ತರಣೆ ಕ್ರಮವು ಅಪ್ರಜಾತಾಂತ್ರಿಕವಾಗಿದ್ದು, ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಡ್ಡಿಯಾಗುತ್ತದೆ. ಸರ್ಕಾರಿ ಶಾಲಾ ಮಕ್ಕಳು ಕಲಿಕೆಯಲ್ಲಿ ಮತ್ತಷ್ಟು ಹಿಂದುಳಿಯುವಂತಾಗಿ, ಖಾಸಗಿ ಶಾಲೆ ಮತ್ತು ಸರ್ಕಾರಿ ಶಾಲೆ ಮಕ್ಕಳ ನಡುವೆ ತಾರತಮ್ಯ ಉಂಟಾಗುವ ಆತಂಕ ಎದುರಾಗಿದೆ ಎಂದು ಎಐಡಿಎಸ್ಒ ಪ್ರದಾನ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದ್ದಾರೆ.
ಶಾಲಾ ಶಿಕ್ಷಕರು ಪಾಠ ಮಾಡುವ ಜೊತೆಗೆ ಅನೇಕ ಬೋಧಕೇತರ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಇದರಿಂದ ಈಗಾಗಲೇ ಮಕ್ಕಳಿಗೆ ಪಾಠ ಮಾಡುವಲ್ಲಿ ಹಿನ್ನಡೆಯಾಗುತ್ತಿದೆ. ಅದರ ಜೊತೆಗೆ ಸಮೀಕ್ಷೆಯ ಜವಾಬ್ದಾರಿಯು ಹೊರೆಯಾಗಲಿದೆ. ಕಡಿಮೆ ಅವಧಿಯಲ್ಲಿ ಎಲ್ಲ ಪಾಠಗಳನ್ನು ಪೂರ್ಣಗೊಳಿಸುವ ಒತ್ತಡಕ್ಕೆ ಶಿಕ್ಷಕರು ಸಿಲುಕಲಿದ್ದಾರೆ. ತರಗತಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ರಜೆ ವಿಸ್ತರಣೆ ಸರಿಯಲ್ಲ. ಇದರಿಂದ ಫಲಿತಾಂಶ ಕುಸಿಯುವ ಭೀತಿ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ದಸರಾ ರಜೆ ವಿಸ್ತರಣೆ ಸರ್ಕಾರಿ ಶಾಲೆಗಳಿಗೆ ಮಾತ್ರ; ನಾಳೆಯಿಂದ ಖಾಸಗಿ ಶಾಲೆಗಳು ಯಥಾಸ್ಥಿತಿ ಪ್ರಾರಂಭ!
ಪಾಲಕರ ಸಂಘಟನೆ ಆಕ್ಷೇಪ:
ರಜೆ ವಿಸ್ತರಣೆಗೆ ಶಾಲಾ-ಕಾಲೇಜುಗಳ ಪಾಲಕರ ಸಂಘಟನೆಯ ಅಧ್ಯಕ್ಷ ಬಿ.ಎನ್. ಯೋಗಾನಂದ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರಿ ಶಾಲೆಯ ಗುಣಮಟ್ಟ ಮುಖ್ಯವೋ ಗಣತಿ ಮುಖ್ಯವೋ ಎಂದು ಪ್ರಶ್ನಿಸಿದ್ದಾರೆ.


