ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಅಂತಿಮ ತೀರ್ಪು ನೀಡುವುದಕ್ಕೆ ಮೂರು ದಿನಗಳ ಕಾಲ ಕೋರ್ಟ್ ವಿಚಾರಣೆ ನಡೆಸಿ, ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೇ ಅಪರಾಧಿಗಳು ಬಟ್ಟೆ ಬದಲಿಸಿ 3 ದಿನಗಳಾಗಿದ್ದು, ಬಟ್ಟೆ ಬದಲಿಸಲು ಅವಕಾಶಕ್ಕೆ ಮನವಿ ಮಾಡಿದ್ದಾರೆ.
ಬೆಂಗಳೂರು (ಏ.17): ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕೊನೆಗೂ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಜನರ ಗ್ಯಾಂಗ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ವೇಳೆ ಕಣ್ಣೀರಿಟ್ಟ ಎಲ್ಲ ಅಪರಾಧಿಗಳು ಕಳೆದ ಮೂರು ದಿನಗಳಿಂದ ಕೋರ್ಟ್ ವಿಚಾರಣೆಗೆ ಬಂದು ಒಂದೇ ಬಟ್ಟೆಯಲ್ಲಿದ್ದಾರೆ. ಅವರಿಗೆ ಬಟ್ಟೆಯನ್ನು ಬದಲಾವಣೆಗೆ ಅವಕಾಶ ಮಾಡಿಕೊಡಿ ಎಂದು ವಕೀಲರು ಮನವಿ ಮಾಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯ ದೇವತೆ ಅಂತಿಮ ತೀರ್ಪು ನೀಡಿದ್ದಾಳೆ. ಪ್ರಭಾವಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಬೆನ್ನಲ್ಲೇ, ಈಗ ಅಪರಾಧಿಗಳು 3 ದಿನಗಳ ಕಾಲ ಜೈಲಿನಲ್ಲಿ ಕಳೆದ ಸ್ಥಿತಿ ಹೇಗಿತ್ತು ಎಂಬ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ.
ಮೂರು ದಿನದಿಂದ ಒಂದೇ ಬಟ್ಟೆಯಲ್ಲಿ ಅಪರಾಧಿಗಳು!
ಪ್ರಕರಣದ ತೀರ್ಪು ಪ್ರಕಟವಾದ ದಿನದಿಂದಲೂ ಅಂದರೆ ಕಳೆದ ಮೂರು ದಿನಗಳಿಂದ ಅಪರಾಧಿಗಳು ಒಂದೇ ಬಟ್ಟೆಯಲ್ಲಿದ್ದಾರೆ ಎಂಬ ಅಂಶ ನ್ಯಾಯಾಲಯದ ಗಮನಕ್ಕೆ ಬಂದಿದೆ. ಏಪ್ರಿಲ್ 15 ರಂದು ನ್ಯಾಯಾಲಯವು ಇವರನ್ನು ದೋಷಿಗಳೆಂದು ಘೋಷಿಸಿ ವಶಕ್ಕೆ ಪಡೆದ ಕ್ಷಣದಿಂದಲೂ ಇವರು ಬಟ್ಟೆ ಬದಲಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಪರಾಧಿಗಳ ಪರ ವಕೀಲರು ನ್ಯಾಯಾಲಯಕ್ಕೆ ವಿಶೇಷ ಮನವಿ ಸಲ್ಲಿಸಿದ್ದಾರೆ. 'ಅಪರಾಧಿಗಳು ಕಳೆದ ಮೂರು ದಿನಗಳಿಂದ ಒಂದೇ ಬಟ್ಟೆಯಲ್ಲಿದ್ದು, ಅವರಿಗೆ ಬಟ್ಟೆ ಬದಲಿಸಲು ಹಾಗೂ ಅಗತ್ಯ ವೈಯಕ್ತಿಕ ವಸ್ತುಗಳನ್ನು ಬಳಸಲು ಅವಕಾಶ ನೀಡಬೇಕು' ಎಂದು ಕೋರಿದರು. ಈ ಮನವಿಯನ್ನು ಆಲಿಸಿದ ನ್ಯಾಯಾಧೀಶರು, ಜೈಲು ಮ್ಯಾನುವಲ್ (Jail Manual) ಪ್ರಕಾರ ನಿಯಮಾನುಸಾರ ಬಟ್ಟೆ ಬದಲಾವಣೆಗೆ ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶಿಕ್ಷೆಯ ವಿವರ ಮತ್ತು ದಂಡದ ಮೊತ್ತ:
ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಈ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದ್ದಾರೆ. ಹತ್ಯೆಯ ಸಂಚು ರೂಪಿಸಿದ 15ನೇ ಆರೋಪಿ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಚನ್ನಕೇಶವ ಟಿಂಗರೀಕರ್ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಲಾಗಿದೆ. ಉಳಿದ ಅಪರಾಧಿಗಳಿಗೆ ಒಟ್ಟು 16 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ಈ ಮೊತ್ತವನ್ನು ಮೃತ ಯೋಗೇಶ್ ಗೌಡ ಅವರ ಮಕ್ಕಳಿಗೆ ಮತ್ತು ಸಹೋದರ ಗುರುನಾಥ್ ಗೌಡ ಅವರಿಗೆ ಪರಿಹಾರವಾಗಿ ನೀಡಲು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ಜಿಮ್ನಲ್ಲಿ ಯೋಗೇಶ್ ಗೌಡ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರೂ, ನಂತರ ಪ್ರಕರಣವು ಸಿಬಿಐ ಕೈಗೆ ಹಸ್ತಾಂತರವಾಯಿತು. ಸುಮಾರು 8 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ 17 ಮಂದಿ ಅಪರಾಧಿಗಳು ಎಂದು ಸಾಬೀತಾಗಿದೆ. ಸಿಬಿಐ ಪರ ವಕೀಲರು ಈ ಪ್ರಕರಣವನ್ನು "ಅಪರೂಪದಲ್ಲಿ ಅಪರೂಪದ ಪ್ರಕರಣ" ಎಂದು ಪರಿಗಣಿಸಿ ಗರಿಷ್ಠ ಶಿಕ್ಷೆ ನೀಡಬೇಕೆಂದು ವಾದಿಸಿದ್ದರು.
ಯಾರ ಮೇಲೆ ಯಾವ ಸೆಕ್ಷನ್?
ನ್ಯಾಯಾಲಯವು ಐಪಿಸಿ ಸೆಕ್ಷನ್ 302 (ಕೊಲೆ), 120 ಬಿ (ಅಪರಾಧಿಕ ಒಳಸಂಚು), 201 (ಸಾಕ್ಷ್ಯ ನಾಶ) ಸೇರಿದಂತೆ ಅಕ್ರಮ ಕೂಟ ಮತ್ತು ಗಲಭೆ ಎಸಗಿದ ಆರೋಪದಡಿ ಶಿಕ್ಷೆ ವಿಧಿಸಿದೆ. ವಿಶೇಷವೆಂದರೆ, 19ನೇ ಆರೋಪಿಯಾಗಿದ್ದ ಇನ್ಸ್ಪೆಕ್ಟರ್ ಚನ್ನಕೇಶವ ಅವರು ಸಾರ್ವಜನಿಕ ಸೇವೆಯಲ್ಲಿದ್ದುಕೊಂಡು ತಪ್ಪು ದಾಖಲೆ ಸೃಷ್ಟಿಸಿ ಅಪರಾಧಿಗಳಿಗೆ ಸಹಾಯ ಮಾಡಿದ ಕಾರಣಕ್ಕಾಗಿ ಸೆಕ್ಷನ್ 218ರ ಅಡಿ ಶಿಕ್ಷೆಗೊಳಗಾಗಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಲಾಗಿದ್ದು, ಇನ್ನಿಬ್ಬರನ್ನು ಮಾಫಿ ಸಾಕ್ಷಿಗಳನ್ನಾಗಿ ಮಾಡಲಾಗಿತ್ತು.


