
ಬೆಳಗ್ಗೆ ಗಂಡನಿಗೆ ಪಾದ ಪೂಜೆ, ಸಂಜೆ ಹೆಂಡತಿಯ ಅನುಮಾನಾಸ್ಪದ ಸಾವು; ತಂಗಿಗೆ ಹೋಗಿತ್ತೊಂದು ಸಂದೇಶ!
ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಮದುವೆಯಾದ ಸ್ಪಂದನಾ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದಾರೆ. ಮದುವೆಯ ನಂತರ ಗಂಡನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾಯುವ ಮುನ್ನ ಕಳುಹಿಸಿದ ತನ್ನ ತಂಗಿಗೆ ಕಳಿಸಿದ ಒಂದು ಸಂದೇಶದಲ್ಲಿ ಸಾವಿನ ಕಾರಣವನ್ನು ಬಹಿರಂಗಪಡಿಸಿದ್ದಾಳೆ.
ನಾಡಿನಾದ್ಯಂತ ಭೀಮನ ಅಮವಾಸ್ಯೆಯನ್ನ ಮಹಿಳೆಯರು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ತಮ್ಮ ಗಂಡನಿಗೆ ಪಾದ ಪೂಜೆಯನ್ನು ಮಾಡಿ, ಗಂಡನಿಗೆ ದೀರ್ಘಾಯುಷ್ಯ ಸಿಗಲಿ, ನೂರ್ಕಾಲ ಜೊತೆಯಾಗಿ ಮುತ್ತೈದೆಯಾಗಿ ಬಾಳಬೇಕು ಎನ್ನುವ ಉದ್ದೇಶದಿಂದ ಈ ಪೂಜೆ ಮಾಡುತ್ತಾರೆ. ಇನ್ನು ಸುಖ ದಾಂಪತ್ಯದ ಕನಸಿನಿಂದ ಗಂಡನ ಪಾದ ಪೂಜೆ ಮಾಡಿದ ಹೆಂಡತಿ ಸ್ಪಂದನಾ ಸಂಜೆ ವೇಳೆಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಂಗಳೂರು ಹೊರವಲಯದಲ್ಲಿನ ದಾಸನಪುರದ ಅಂಚೆಪಾಳ್ಯದಲ್ಲಿ ಘಟನೆ ನಡೆದಿದ್ದು, 24 ವರ್ಷದ ಸ್ಪಂದನಾ ಮೃತ ಮಹಿಳೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ಅಭಿಷೇಕ್ ಎಂಬಾತನನ್ನು 2024ರಲ್ಲಿ ಸ್ಪಂದನಾ ಮದುವೆಯಾಗಿದ್ದರು. ಕನಕಪುರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಅತ್ಯಂತ ಸರಳವಾಗಿ ಮದುವೆ ನಡೆದಿತ್ತು. ಇನ್ನು ಅಭಿಷೇಕ್ ಕನಕಪುರದ ಕರಿಕಲ್ಲದೊಡ್ಡಿ ನಿವಾಸಿ. ಬೆಂಗಳೂರಿನ ಕಾಲೇಜಿನಲ್ಲಿ ಪಿಜಿ ಓದುವಾಗ ಅಭಿಷೇಕ್ ಮತ್ತು ಸ್ಪಂದನಾ ಭೇಟಿಯಾಗಿದ್ದರೂ, ಇನ್ಸ್ಟಾಗ್ರಾಮ್ ಮೂಲಕ ಆಪ್ತರಾಗಿದ್ದರು.
ಮದುವೆಯ ನಂತರ ವರದಕ್ಷಿಣೆಗಾಗಿ ಗಂಡನಿಂದ ಕಿರುಕುಳ ಶುರುವಾಗಿದೆ. ಅಂಚೆಪಾಳ್ಯದಲ್ಲಿ ವಾಸವಿದ್ದ ಸ್ಪಂದನಾ, ಬೆಂಗಳೂರಿನ ಬೃಂದಾವನ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದರು. ಮದುವೆಯ ನಂತರವೂ ಆಕೆಯನ್ನು ತಾಯಿಯೇ ಓದಿಸುತ್ತಿದ್ದರು ಎನ್ನುವುದು ಗೊತ್ತಾಗಿದೆ. ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸ್ಪಂದನ ಮೃತದೇಹ ಪತ್ತೆಯಾಗಿದ್ದು, ಕೂಡಲೇ ಗಂಡ ಆಸ್ಪತ್ರೆಗೆ ಸಾಗಿಸಿದ್ದಾನೆ. ಆದ್ರೆ ಅಷ್ಟರಲ್ಲಿ ಸ್ಪಂದನಾ ಮೃತಪಟ್ಟಿದ್ದಳು ಎನ್ನಲಾಗಿದೆ.
ಸಾಯುವುದಕ್ಕೂ ಮುನ್ನ ತಂಗಿಗೆ ಮೆಸೇಜ್ ಕಳುಹಿಸಿರುವ ಸ್ಪಂದನಾ, ನನ್ನ ಸಾವಿಗೆ ಅಭಿ ಹಾಗೂ ಅವರ ಕುಟುಂಬಸ್ಥರು ಹಾಗೂ ಕೆಲಸ ಮಾಡುತ್ತಿರುವ ಜಾಗದಲ್ಲಿರುವವರು ಕಾರಣ ಎಂದು ಬರೆದಿದ್ದಾರೆ. ಸದ್ಯ ಅಭಿಷೇಕ್ನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸ್ಪಂದನಾ ಕನಕಪುರ ಕಾಂಗ್ರೆಸ್ ಮುಖಂಡನ ಮಗಳು. ಕನಕಪುರ ಗ್ರಾಮಪಂಚಾಯ್ತಿ ಸದಸ್ಯ ಚಂದ್ರು ಎನ್ನುವವರ ಪುತ್ರಿ.
ಸ್ಪಂದನಾ ಸಾವಿನ ಬಳಿಕ ಪೋಷಕರಿಗೆ ಸ್ಥಳೀಯರು ವಿಚಾರ ಮುಟ್ಟಿಸಿದ್ದಾರೆ. ಮಹಿಳೆ ಸಾವಿನ ಬಗ್ಗೆ ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಗಂಡ ಅಭಿಷೇಕ್ ಆತನ ತಾಯಿ ಲಕ್ಷ್ಮಮ್ಮ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.