ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಶ್ರೇಯಸ್ ಅಯ್ಯರ್ ಹಾರ್ದಿಕ್ ಪಾಂಡ್ಯರನ್ನು ಔಟ್ ಮಾಡಲು ಅದ್ಭುತ ರಿಲೇ ಕ್ಯಾಚ್ ಹಿಡಿದರು. ಗಾಳಿಯಲ್ಲಿ ಜಿಗಿದು ಚೆಂಡನ್ನು ಹಿಡಿದ ಅವರು, ಬೌಂಡರಿ ಲೈನ್ ದಾಟುವ ಮುನ್ನ ಸಹ ಆಟಗಾರನಿಗೆ ಎಸೆದು ವಿಕೆಟ್ ಪತನಕ್ಕೆ ಕಾರಣರಾದರು. ಈ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿತು ಎಂದು ಸ್ವತಃ ಅಯ್ಯರ್ ಹೇಳಿದ್ದಾರೆ.
ಮುಂಬೈ: ಐಪಿಎಲ್ ಇತಿಹಾಸದಲ್ಲೇ ಇದು ಅತ್ಯುತ್ತಮ ಕ್ಯಾಚ್ಗಳಲ್ಲೊಂದು. ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್, ವಾಂಖೆಡೆ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ತಮ್ಮ ಫೀಲ್ಡಿಂಗ್ ಮೂಲಕ ದಂಗುಬಡಿಸಿದ್ದಾರೆ. ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯರನ್ನು ಔಟ್ ಮಾಡಲು ಶ್ರೇಯಸ್ ಮಾಡಿದ ಈ ಫೀಲ್ಡಿಂಗ್ ಸಾಹಸದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಮುಂಬೈ ಇನ್ನಿಂಗ್ಸ್ನ 18ನೇ ಓವರ್ನಲ್ಲಿ ಈ ಘಟನೆ ನಡೆಯಿತು.
ಮಾರ್ಕೊ ಯಾನ್ಸೆನ್ ಎಸೆದ ಬಾಲ್ಗೆ ಹಾರ್ದಿಕ್ ಪಾಂಡ್ಯ ದೊಡ್ಡ ಹೊಡೆತಕ್ಕೆ ಕೈಹಾಕಿದರು, ಆದರೆ ಟೈಮಿಂಗ್ ಮಿಸ್ ಆಯ್ತು. ಲಾಂಗ್ ಆನ್ ಕಡೆಗೆ ಹಾರಿದ ಚೆಂಡನ್ನು ಹಿಡಿಯಲು ಶ್ರೇಯಸ್ ಅಯ್ಯರ್ ಓಡಿಬಂದರು. ಗಾಳಿಯಲ್ಲಿ ಹಿಂದಕ್ಕೆ ಜಿಗಿದು ಚೆಂಡನ್ನು ಹಿಡಿದರು. ಆದರೆ, ಬ್ಯಾಲೆನ್ಸ್ ತಪ್ಪಿ ಬೌಂಡರಿ ಲೈನ್ನಿಂದ ಹೊರಗೆ ಬೀಳುತ್ತೇನೆ ಎನ್ನುವುದು ಖಚಿತವಾದಾಗ, ಲಾಂಗ್ ಆಫ್ನಿಂದ ಓಡಿಬರುತ್ತಿದ್ದ ಕ್ಸೇವಿಯರ್ ಬಾರ್ಟ್ಲೆಟ್ಗೆ ಚೆಂಡನ್ನು ಎಸೆದರು. ಬಾರ್ಟ್ಲೆಟ್ ಅದನ್ನು ಸೇಫ್ ಆಗಿ ಕ್ಯಾಚ್ ಹಿಡಿದರು.
ವಿಡಿಯೋ ಹೀಗಿತ್ತು ನೋಡಿ.
ಶ್ರೇಯಸ್ ಅಯ್ಯರ್ ಅವರ ಈ ಅದ್ಭುತ ಫೀಲ್ಡಿಂಗ್ಗೆ ಕಾಮೆಂಟರಿ ಬಾಕ್ಸ್ನಲ್ಲಿದ್ದ ರವಿಶಾಸ್ತ್ರಿ ಫುಲ್ ಫಿದಾ ಆದ್ರು. ಕ್ಯಾಚ್ ಹಿಡಿದ ನಂತರ ಶ್ರೇಯಸ್ ಅಯ್ಯರ್ ಗ್ಯಾಲರಿ ಕಡೆ ನೋಡಿ, 'ಯಾಕೆ ಎಲ್ಲರೂ ಸೈಲೆಂಟ್ ಆದ್ರಿ?' ಎನ್ನುವಂತೆ ಎರಡೂ ಕೈಗಳನ್ನು ಕಿವಿಯ ಬಳಿ ಇಟ್ಟುಕೊಂಡು ಸನ್ನೆ ಮಾಡಿದ್ದು ಕೂಡಾ ಗಮನ ಸೆಳೆಯಿತು. ಶ್ರೇಯಸ್ ಫೀಲ್ಡಿಂಗ್ ನೋಡಿ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ಗೆ ನಂಬೋಕೆ ಆಗ್ಲಿಲ್ಲ. 'ಇದನ್ನು ಹೇಗೆ ಸಾಧ್ಯ?' ಎನ್ನುವಂತೆ ರೋಹಿತ್ ಎರಡೂ ಕೈಗಳನ್ನು ಗಾಳಿಯಲ್ಲಿ ಎತ್ತಿ ಅಚ್ಚರಿ ವ್ಯಕ್ತಪಡಿಸಿದರು. 12 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿ ಹಾರ್ದಿಕ್ ಔಟಾದ ಬಳಿಕ ಮುಂಬೈ ಸ್ಕೋರಿಂಗ್ ವೇಗಕ್ಕೆ ಬ್ರೇಕ್ ಬಿತ್ತು.
ಪಂದ್ಯದ ದಿಕ್ಕನ್ನೇ ಬದಲಿಸಿದ ಕ್ಯಾಚ್ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದೇನು?
ಇನ್ನು ಪಂದ್ಯದ ಮುಕ್ತಾಯದ ಬಳಿಕ ಮ್ಯಾಚ್ ಪ್ರೆಸೆಂಟರ್ ಇಯಾನ್ ಬಿಷಪ್, ಒಂದು ಹಂತದಲ್ಲಿ ಮುಂಬೈ ಇಂಡಿಯನ್ಸ್ ತಂಡವು 200+ ರನ್ ದಾಖಲಿಸುವತ್ತ ಮುನ್ನುಗ್ಗುತ್ತಿತ್ತು. ಹೀಗಿರುವಾಗ ಮುಂಬೈ ಕಟ್ಟಿಹಾಕಿದ್ದು ಹೇಗೆ ಎಂದು ಶ್ರೇಯಸ್ ಅಯ್ಯರ್ ಅವರನ್ನು ಕೇಳುತ್ತಾರೆ. ಆಗ ಶ್ರೇಯಸ್ ನಾನು ಹಿಡಿದ ಆ ಕ್ಯಾಚ್ ಎನ್ನುತ್ತಾರೆ. ಈ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಂಬೈ 195 ರನ್ಗಳಿಗೆ ಸೀಮಿತ
ಓಪನರ್ ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಶತಕದ (112*) ನೆರವಿದ್ದರೂ, ಮುಂಬೈ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯಲ್ಲಿ ಹಾರ್ದಿಕ್ ಅಬ್ಬರಿಸಲು ವಿಫಲವಾಗಿದ್ದೇ ಮುಂಬೈ 200ರ ಗಡಿ ದಾಟದಿರಲು ಮುಖ್ಯ ಕಾರಣವಾಯಿತು. ಗಾಯದ ಕಾರಣ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಆಡಿರಲಿಲ್ಲ. ಸೂರ್ಯಕುಮಾರ್ ಯಾದವ್ ಕೂಡ ತಾವು ಎದುರಿಸಿದ ಮೊದಲ ಎಸೆತದಲ್ಲೇ ಔಟಾಗಿದ್ದರು.

