ಹಾವೇರಿಯಲ್ಲಿ 22 ವರ್ಷದ ಯುವತಿಯ ಕೊಲೆಯಾಗಿದ್ದು, ಪೊಲೀಸರೇ ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂದು ದೃಢಪಟ್ಟ ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಹಾವೇರಿ (ಮಾ.14): ಸಾಮಾನ್ಯವಾಗಿ ಯಾವುದೇ ಅಪರಿಚಿತ ಶವ ಸಿಕ್ಕರೂ ಕನಿಷ್ಠ ಆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮಿಸ್ಸಿಂಗ್ ಕಂಪ್ಲೇಂಟ್ಗಳನ್ನು ನೋಡಿ ಅವರಿಗೆ ತಿಳಿಸುವುದು ಪೊಲೀಸ್ ಇಲಾಖೆಯ ವಾಡಿಕೆ. ಅದರಲ್ಲೂ ಮಹಿಳೆ, ಯುವತಿ, ಅಪ್ರಾಪ್ತ ಯುವತಿ ಆಗಿದ್ದಲ್ಲಿ ಪೊಲೀಸರು ಇನ್ನಷ್ಟು ಎಚ್ಚರಿಕೆಯಿಂದ ಈ ಕೆಲಸ ಮಾಡುತ್ತಾರೆ. ಆದರೆ, ಹಾವೇರಿಯ ಜಿಲ್ಲೆಯಲ್ಲಿ 22 ವರ್ಷದ ಯುವತಿಯ ಕೊಲೆ ಆಗಿದ್ದು, ಅಪರಿಚಿತ ಶವ ಎಂದುಕೊಂಡು ಪೊಲೀಸರೇ ಅಂತ್ಯಸಂಸ್ಕಾರ ಮಾಡಿರುವ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯ ಕೊಲೆಯಾಗಿರುವ ದೃಢವಾದ ಬೆನ್ನಲ್ಲಿಯೇ ಯಾವುದೇ ಮಾಹಿತಿ ನೀಡದೇ ಅಂತ್ಯಸಂಸ್ಕಾರ ಮಾಡಿದ ಪೊಲೀಸರಿಗೆ ಸಂಕಷ್ಟ ಎದುರಾಗಿದೆ.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಯುವತಿ 22 ವರ್ಷದ ಸ್ವಾತಿ ಮಾರ್ಚ್ 3 ರಂದು ನಾಪತ್ತೆಯಾಗಿದ್ದಳು. ಮೂರು ದಿನಗಳ ಕಾಲ ಮನೆಯವರೆಲ್ಲಾ ಹುಡುಕಿ 7ನೇ ತಾರೀಖಿನಿಂದ ಮಿಸ್ಸಿಂಗ್ ದೂರು ದಾಖಲಿಸಿದ್ದಾರೆ. ಈಕೆಯ ಶವ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಪತ್ತೆಯಾಗಿತ್ತು. ಮಾರ್ಚ್ 6 ರಂದು ಯುವತಿಯ ಮೃತದೇಹ ಸಿಕ್ಕಿತ್ತು.
ಮೊದಲು ಅಪರಿಚಿತ ಯುವತಿ ಶವ ಎಂದು ಘೋಷಿಸಿದ್ದ ಹಲಗೇರಿ ಪೊಲೀಸರು, ವಾರಸುದಾರರರು ಯಾರೂ ಇಲ್ಲದ ಹಿನ್ನಲೆಯಲ್ಲಿ, ಮರಣೋತ್ತರ ಪರೀಕ್ಷೆ ನಡೆಸಿ ಕಾನೂನು ಪ್ರಕಾರ ಸ್ವಾತಿ ಶವ ಹೂತು ಹಾಕಲಾಗಿತ್ತು. ಈ ಹಂತದಲ್ಲಿ ಕನಿಷ್ಠ ಜಿಲ್ಲೆಯಲ್ಲಿ ದಾಖಲಾದ ಮಿಸ್ಸಿಂಗ್ ಕಂಪ್ಲೇಂಟ್ಗಳ ಮಾಹಿತಿಯನ್ನೂ ಅವರು ಪಡೆದುಕೊಂಡಿಲ್ಲ. ಮರಣೋತ್ತರ ಪರೀಕ್ಷೆ ವೇಳೆ ಸ್ವಾತಿ ಹತ್ಯೆಯಾಗಿರುವುದು ದೃಢವಾಗಿದೆ. ಇದರ ಬೆನ್ನಲ್ಲಿಯೇ ಹಲಗೇರಿ ಪೊಲೀಸರು ತನಿಖೆ ತೀವ್ರ ಮಾಡಿದ್ದಾರೆ.
ಕಳೆದ ಮಾರ್ಚ್ 3 ರಂದು ಸ್ವಾತಿ ಕಾಣೆಯಾಗಿದ್ದಳು. ಈ ಕುರಿತು ಸ್ವಾತಿ ಪೋಷಕರು ಮಿಸ್ಸಿಂಗ್ ಕಂಪ್ಲೇಂಟ್ ದಾಖಲು ಮಾಡಿದ್ದರು. ಹಿರೇಕೇರೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ಮಾರ್ಚ್ 6 ರಂದು ರಾಣೆಬೆನ್ನೂರು ತಾಲೂಕು ಪತ್ತೆಪುರ ಬಳಿ ಸ್ವಾತಿ ಶವ ಪತ್ತೆಯಾಗಿತ್ತು. ರಾಣೆಬೆನ್ನೂರೀನ ಆಸ್ಪತ್ರೆಯೊಂದರಲ್ಲಿ ಸ್ವಾತಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಸ್ವಾತಿ ತಂದೆ ತೀರಿಕೊಂಡಿದ್ದು, ತಾಯಿ ಜೊತೆ ವಾಸವಿದ್ದಳು ಎನ್ನಲಾಗಿದೆ. ಸ್ವಾತಿ ಕೊಲೆಯಾಗಿದ್ದಾಗಿ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದು, ಶವದ ಚಿತ್ರವನ್ನು ಪೋಷಕರಿಗೆ ತೋರಿಸಿದ್ದಾರೆ. ಫೋಟೋದಲ್ಲಿಯೇ ಈಕೆ ತನ್ನ ಮಗಳು ಎಂದು ತಾಯಿ ತಿಳಿಸಿದ್ದಾರೆ.
ಮೂವರು ಹೆಂಡಿರ ಮುದ್ದಿನ ಗಂಡ, ಮೂರನೇ ಹೆಂಡ್ತಿಯಿಂದಲೇ ಸಾವು ಕಂಡ!
ಈ ನಡುವೆ ಹಿಂದೂ ಯುವತಿ ಹತ್ಯೆ ಜಸ್ಟೀಸ್ ಫಾರ್ ಸ್ವಾತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲಾಗಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಸ್ವಾತಿ ಹಂತಕರನ್ನು ಪತ್ತೆ ಹಚ್ಚಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕೆಂದು ಆಗ್ರಹ ಪಡಿಸಲಾಗಿದೆ. ಸ್ವಾತಿ ಕೊಲೆ ಆರೋಪಿಗಳಿಗೆ ಕಠೀಣ ಶಿಕ್ಷೆ ಆಗಬೇಕು. ಸ್ವಾತಿ ಹತ್ಯೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ರಟ್ಟಿಹಳ್ಳಿ ತಾಲೂಕು ಮಾಸೂರು ಗ್ರಾಮದ ಸ್ವಾತಿ ನಿವಾಸ ಮುಂದೆ ಸ್ಥಳಿಯರು ಪ್ರತಿಭಟನೆ ಮಾಡಿದ್ದಾರೆ.
