ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!

ಪ್ರೀತಿಸಿದ ಯುವತಿಯನ್ನು ಮದುವೆಯಾದ ಲಾರಿ ಚಾಲಕ ರೇವಣಸಿದ್ದಪ್ಪ, ಪೋಕ್ಸೋ ಕಾಯ್ದೆಯಡಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಹೊರಬಂದ ಕೇವಲ ಮೂರೇ ದಿನಗಳಲ್ಲಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆತನ ಜೇಬಿನಲ್ಲಿದ್ದ ತಾಳಿ ಸಾವಿನ ಸುತ್ತ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

Share this Video
  • FB
  • Linkdin
  • Whatsapp

ಆತ ಕಷ್ಟಪಟ್ಟು ದುಡಿಯುತ್ತಿದ್ದ ಲಾರಿ ಚಾಲಕ. ಮನೆಯಲ್ಲಿ ಅಪ್ಪ-ಅಮ್ಮ, ಅಣ್ಣಂದಿರು, ಹತ್ತಾರು ಎಕರೆ ಜಮೀನು, ಟ್ರ್ಯಾಕ್ಟರ್‌ಗಳಿದ್ದವು. ಸುಖವಾಗಿಯೇ ಇದ್ದ ಸಂಸಾರಕ್ಕೆ ಪ್ರವೇಶಿಸಿದ್ದು 'ಪ್ರೀತಿ'. ತನ್ನದೇ ಗ್ರಾಮದ ಹುಡುಗಿ ಈತನನ್ನ ಇಷ್ಟಪಟ್ಟಿದ್ದಳು. ಆಕೆಯ ಪ್ರೀತಿಗಾಗಿ ಮನೆ-ಮಠ ಬಿಟ್ಟು ಬಂದಿದ್ದ ರೇವಣಸಿದ್ದಪ್ಪ, ಈಗ ಹೆಣವಾಗಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆದರೆ ಈ ಸಾವಿನ ಸುತ್ತ ಹತ್ತಾರು ಅನುಮಾನಗಳು ಆರಂಭವಾಗಿವೆ.

ಗುಜರಾತ್‌ನಲ್ಲಿ ಮದುವೆ, ಕರ್ನಾಟಕದಲ್ಲಿ ಕೇಸ್!

ರೇವಣಸಿದ್ದಪ್ಪ ಲಾರಿ ಕೆಲಸಕ್ಕಾಗಿ ಹೈದರಾಬಾದ್‌ಗೆ ಹೋಗಿದ್ದಾಗ, ಆತನನ್ನೇ ನಂಬಿ 18 ವರ್ಷವೂ ತುಂಬದ ಆ ಹುಡುಗಿ ಮನೆ ಬಿಟ್ಟು ಬಂದಿದ್ದಳು. ಅನಿವಾರ್ಯವಾಗಿ ಆಕೆಯನ್ನು ಕರೆದುಕೊಂಡು ರೇವಣಸಿದ್ದಪ್ಪ ಗುಜರಾತ್‌ನಲ್ಲಿದ್ದ ತನ್ನ ಸಂಬಂಧಿಕರ ಮನೆಗೆ ಹೋಗಿದ್ದನು. ಅಲ್ಲಿ ವಕೀಲರೊಬ್ಬರ ಸಲಹೆಯಂತೆ, ಆಕೆಗೆ 18 ವರ್ಷ ತುಂಬಲು ಕೇವಲ 10 ದಿನಗಳಷ್ಟೇ ಬಾಕಿ ಇತ್ತು. ಇಬ್ಬರೂ ಮದುವೆಯ ವಯಸ್ಕರಾದ ಬಳಿಕವೇ ಕಾನೂನುಬದ್ಧವಾಗಿ ಇಬ್ಬರೂ ಮದುವೆಯಾಗಿದ್ದರು. ಆದರೆ ಈ 10 ದಿನಗಳ ಅಂತರವೇ ರೇವಣಸಿದ್ದಪ್ಪನ ಜೀವನಕ್ಕೆ ಮುಳುವಾಯಿತು.

ಪೋಕ್ಸೋ (POCSO) ಎಂಬ ಶಾಪ:

ಇತ್ತ ಹುಡುಗಿಯ ಪೋಷಕರು ನೀಡಿದ ಕಿಡ್ನ್ಯಾಪ್ ದೂರಿನ ಮೇರೆಗೆ ಪೊಲೀಸರು ಇಬ್ಬರನ್ನೂ ಪತ್ತೆ ಹಚ್ಚಿ ಕರೆತಂದಿದ್ದರು. ಹುಡುಗಿ ಅಪ್ರಾಪ್ತ ಎನ್ನುವ ಕಾರಣಕ್ಕೆ ರೇವಣಸಿದ್ದಪ್ಪನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಯಿತು. ಮದುವೆಯಾದ ಹೊಸ ಸಂಭ್ರಮದಲ್ಲಿದ್ದ ಯುವಕನಿಗೆ ಜೈಲುವಾಸದ ಆಘಾತ ಎದುರಾಯಿತು. ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದ ಆತ, ಕೇವಲ ಮೂರೇ ದಿನಗಳಲ್ಲಿ ತನ್ನದೇ ಹೊಲದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ.

ಜೇಬಿನಲ್ಲಿ ಸಿಕ್ಕ ತಾಳಿ: ಇದು ದೊಡ್ಡ ಟ್ವಿಸ್ಟ್!

ರೇವಣಸಿದ್ದಪ್ಪನ ಶವ ಪತ್ತೆಯಾದಾಗ ಆತನ ಪ್ಯಾಂಟ್ ಜೇಬಿನಲ್ಲಿ ತಾಳಿ ಪತ್ತೆಯಾಗಿದೆ. ಹೆಂಡತಿಯ ಕತ್ತಿನಲ್ಲಿ ಇರಬೇಕಾದ ತಾಳಿ, ಈತನ ಜೇಬಿಗೆ ಬಂದಿದ್ದೇಗೆ? ಸಾವಿನ ದವಡೆಯಲ್ಲಿ ಇರುವಾಗ ಆತ ತಾಳಿಯನ್ನೇ ಯಾಕೆ ಜೇಬಿನಲ್ಲಿಟ್ಟುಕೊಂಡಿದ್ದ? ಅಥವಾ ಪತ್ನಿಯ ಕತ್ತಿನಲ್ಲಿದ್ದ ತಾಳಿಯನ್ನು ಯಾರಾದರೂ ಕಿತ್ತು ಈತನ ಜೇಬಿಗೆ ತುರುಕಿದ್ದರಾ? ಎಂಬ ಪ್ರಶ್ನೆಗಳು ಕಾಡುತ್ತಿವೆ. ಪೊಲೀಸರ ಕಿರುಕುಳ ಅಥವಾ ಹುಡುಗಿಯ ಪೋಷಕರ ಬೆದರಿಕೆಯೇ ಈ ಸಾವಿಗೆ ಕಾರಣವೇ ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ.

ಪ್ರೀತಿಸಿದ ಹುಡುಗಿಯ ಜೊತೆ ಸುಂದರ ಜೀವನ ನಡೆಸಬೇಕೆಂಬ ಕನಸು ಕಂಡಿದ್ದ ರೇವಣಸಿದ್ದಪ್ಪ, ಈಗ ಹೆಣವಾಗಿದ್ದಾನೆ. ಪ್ರೀತಿಗಾಗಿ ಹುಡುಗನ ಈ ದುರಂತ ಅಂತ್ಯ ಸಮಾಜಕ್ಕೆ ಒಂದು ಕಹಿಸತ್ಯವನ್ನು ಹೇಳುತ್ತಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Related Video