ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಕಾಲೇಜಿಗೆ ತೆರಳಿದ್ದ 19 ವರ್ಷದ ಪ್ರಿಯಾಂಕಾ ಅಕ್ಕೇನ್ನವರ್ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದಾರೆ. ಯುವತಿಯ ಕುಟುಂಬಸ್ಥರು, ಮೂರು ಮಕ್ಕಳ ತಂದೆಯಾಗಿರುವ ಪಕ್ಕದ ಮನೆಯ ಸುರೇಶ್ ಹುಲ್ಲೇನ್ನವರ್ ಎಂಬಾತನೇ ಆಕೆಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ದೂರು ನೀಡಲಾಗಿದೆ.

ಚಿಕ್ಕೋಡಿ:(ನ.23): ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನಲ್ಲಿ 19 ವರ್ಷದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದು, ಆಕೆಯ ಕುಟುಂಬಸ್ಥರು ಇದು ಕಿಡ್ನಾಪ್ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಯುವತಿ ನಾಪತ್ತೆಯ ಹಿಂದೆ ಮದುವೆಯಾಗಿ ಮೂವರು ಮಕ್ಕಳನ್ನು ಹೊಂದಿರುವ ಪಕ್ಕದ ಮನೆಯ ವ್ಯಕ್ತಿಯ ಕೈವಾಡವಿದೆ ಎಂದು ಕುಟುಂಬಸ್ಥರು ಬಲವಾಗಿ ಶಂಕಿಸಿದ್ದಾರೆ.

ಕಾಲೇಜಿಗೆ ಹೋಗಿಬರುವುದಾಗಿ ಹೇಳಿ ನಾಪತ್ತೆ:

​ಕಾಣೆಯಾದ ಯುವತಿಯನ್ನು ಪ್ರಿಯಾಂಕಾ ಚಂದ್ರಕಾಂತ ಅಕ್ಕೇನ್ನವರ್ (19) ಎಂದು ಗುರುತಿಸಲಾಗಿದೆ. ಪ್ರಿಯಾಂಕಾ ಕಾಲೇಜಿಗೆ ಹೋಗಿದ್ದವರು ಮತ್ತೆ ಮನೆಗೆ ವಾಪಸ್ ಬಾರದ ಕಾರಣ ಆತಂಕಗೊಂಡ ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿದ್ದಾರೆ. ಪಕ್ಕದ ಮನೆಯವನಾದ ಸುರೇಶ್ ಹುಲ್ಲೇನ್ನವರ್ ಎಂಬಾತನ ಮೇಲೆ ಕುಟುಂಬಸ್ಥರು ನೇರವಾಗಿ ಆರೋಪ ಮಾಡಿದ್ದು, ಆತನೇ ಪ್ರಿಯಾಂಕಾಳನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ರಾಯಭಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರಿಂದ ಶೋಧ:

​ಈ ದೂರಿನ ಬೆನ್ನಲ್ಲೇ, ಮದುವೆಯಾದ ಪುರುಷನೊಂದಿಗೆ ಯುವತಿ ಪರಾರಿಯಾಗಿರುವ ಸಾಧ್ಯತೆಗಳ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ರಾಯಭಾಗ ಪೊಲೀಸ್ ಠಾಣೆಯ ಅಧಿಕಾರಿಗಳು ಸುರೇಶ್ ಹುಲ್ಲೇನ್ನವರ್ ಮತ್ತು ಕಾಣೆಯಾದ ಯುವತಿ ಪ್ರಿಯಾಂಕಾಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.