- Home
- Life
- Health
- Don't Refrigerate: ಈ 5 ತರಕಾರಿಗಳನ್ನು ಅಪ್ಪಿತಪ್ಪಿಯೂ ಫ್ರಿಡ್ಜ್ನಲ್ಲಿ ಇಡಲೇಬೇಡಿ, ಇಟ್ರೆ ಕೆಲಸ ಕೆಟ್ಟಂತೆ!
Don't Refrigerate: ಈ 5 ತರಕಾರಿಗಳನ್ನು ಅಪ್ಪಿತಪ್ಪಿಯೂ ಫ್ರಿಡ್ಜ್ನಲ್ಲಿ ಇಡಲೇಬೇಡಿ, ಇಟ್ರೆ ಕೆಲಸ ಕೆಟ್ಟಂತೆ!
ಮಾರುಕಟ್ಟೆಯಿಂದ ತಂದ ಎಲ್ಲಾ ತರಕಾರಿಗಳನ್ನು ಫ್ರಿಡ್ಜ್ನಲ್ಲಿ ಇಡುವುದು ಒಳ್ಳೆಯದು ಎಂಬ ಭಾವನೆ ತಪ್ಪು. ಕೆಲವು ತರಕಾರಿಗಳನ್ನು ತಂಪಾದ ವಾತಾವರಣದಲ್ಲಿಟ್ಟರೆ ಅವುಗಳ ರುಚಿ, ಸುವಾಸನೆ ಮತ್ತು ಪೋಷಕಾಂಶಗಳು ಕಡಿಮೆಯಾಗಿ ಬೇಗನೆ ಹಾಳಾಗುತ್ತವೆ.

ಮಾರುಕಟ್ಟೆಯಿಂದ ತರಕಾರಿ ತಂದ ತಕ್ಷಣ ಫ್ರಿಡ್ಜ್ನಲ್ಲಿ ಇಡುವುದು ಹೆಚ್ಚಿನವರ ಅಭ್ಯಾಸ. ತಂಪಾಗಿಟ್ಟರೆ ಹೆಚ್ಚು ದಿನ ತಾಜಾವಾಗಿ ಇರುತ್ತೆ ಅನ್ನೋದೆ ಇದಕ್ಕೆ ಕಾರಣ. ಆದರೆ ತಜ್ಞರು ಹೇಳುವುದೇ ಬೇರೆ. ಎಲ್ಲಾ ತರಕಾರಿಗಳು ತಂಪನ್ನು ಇಷ್ಟಪಡುವುದಿಲ್ಲ. ಕೆಲವು ತರಕಾರಿಗಳನ್ನು ಫ್ರಿಡ್ಜ್ನಲ್ಲಿಟ್ಟರೆ ಅವುಗಳ ರುಚಿ, ಸುವಾಸನೆ, ಪೋಷಕಾಂಶಗಳು ಕಡಿಮೆಯಾಗಿ ಬೇಗ ಹಾಳಾಗುತ್ತವೆ. ಹೀಗಾಗಿ ಯಾವ ತರಕಾರಿಗಳನ್ನು ಫ್ರಿಡ್ಜ್ನಲ್ಲಿ ಇಡಬಾರದು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.
ಮೊದಲನೆಯದು ಸೌತೆಕಾಯಿ. ಇದನ್ನು ತಂಪಾಗಿ ತಿಂದರೆ ಚೆನ್ನಾಗಿರುತ್ತೆ ಎಂದು ಹಲವರು ಫ್ರಿಡ್ಜ್ನಲ್ಲಿ ಇಡುತ್ತಾರೆ. ಆದರೆ 10°C ಗಿಂತ ಕಡಿಮೆ ತಾಪಮಾನದಲ್ಲಿ 2-3 ದಿನ ಇಟ್ಟರೆ ಸಾಕು, ಇದು ಹಳದಿ ಬಣ್ಣಕ್ಕೆ ತಿರುಗಿ ಹಾಳಾಗುತ್ತದೆ. ವಿಶೇಷವಾಗಿ ಟೊಮ್ಯಾಟೊ, ಕಲ್ಲಂಗಡಿ, ಅವಕಾಡೊ ಹಣ್ಣುಗಳ ಜೊತೆ ಇಟ್ಟರೆ, ಅವುಗಳಿಂದ ಬರುವ ಎಥಿಲೀನ್ ಗ್ಯಾಸ್ನಿಂದ ಸೌತೆಕಾಯಿ ಬೇಗನೆ ಕೆಡುತ್ತದೆ. ಹಾಗಾಗಿ ಇದನ್ನು ನೇರ ಬಿಸಿಲು ಇಲ್ಲದ ಜಾಗದಲ್ಲಿ, ಸಾಮಾನ್ಯ ತಾಪಮಾನದಲ್ಲಿ ಇಡಬೇಕು.
ಎರಡನೆಯದು ಬೆಳ್ಳುಳ್ಳಿ. ಬೆಳ್ಳುಳ್ಳಿಯ ಸುವಾಸನೆ, ಖಾರ ರುಚಿ ಮತ್ತು ಔಷಧೀಯ ಗುಣಗಳು ಫ್ರಿಡ್ಜ್ನ ತಂಪಿಗೆ ಕಡಿಮೆಯಾಗುತ್ತವೆ. ಫ್ರಿಡ್ಜ್ನಲ್ಲಿರುವ ತೇವಾಂಶದಿಂದ ಬೆಳ್ಳುಳ್ಳಿ ಬೇಗನೆ ಮೊಳಕೆಯೊಡೆಯುತ್ತದೆ, ಮೃದುವಾಗಿ ಕೆಡುತ್ತದೆ. ಪ್ಲಾಸ್ಟಿಕ್ ಕವರ್ ಅಥವಾ ಮುಚ್ಚಿದ ಡಬ್ಬದಲ್ಲಿ ಇಟ್ಟರೆ ತೇವಾಂಶ ಮತ್ತಷ್ಟು ಹೆಚ್ಚುತ್ತದೆ. ಬದಲಿಗೆ, ತಂಪಾದ, ಗಾಳಿಯಾಡುವ ಒಣ ಜಾಗದಲ್ಲಿಟ್ಟರೆ ಬೆಳ್ಳುಳ್ಳಿ ಹೆಚ್ಚು ದಿನ ಚೆನ್ನಾಗಿರುತ್ತದೆ.
ಈರುಳ್ಳಿಯೂ ಕೂಡ ಫ್ರಿಡ್ಜ್ಗೆ ಹೊಂದುವುದಿಲ್ಲ. ತಂಪಾದ ವಾತಾವರಣದಲ್ಲಿಟ್ಟರೆ ಅದರಲ್ಲಿರುವ ಪಿಷ್ಟವು ಸಕ್ಕರೆಯಾಗಿ ಬದಲಾಗಿ, ಈರುಳ್ಳಿ ಮೃದುವಾಗುತ್ತದೆ. ಜೊತೆಗೆ, ತೇವಾಂಶದಿಂದ ಮೊಳಕೆಯೊಡೆಯಲು ಶುರುವಾಗುತ್ತದೆ. ಕತ್ತಲಿರುವ, ಗಾಳಿಯಾಡುವ ಜಾಗದಲ್ಲಿಟ್ಟರೆ ಈರುಳ್ಳಿ 1-2 ತಿಂಗಳವರೆಗೆ ಹಾಳಾಗುವುದಿಲ್ಲ. ಹಾಗೆಯೇ, ಟೊಮ್ಯಾಟೊವನ್ನು ಫ್ರಿಡ್ಜ್ನಲ್ಲಿ ಇಡುವುದು ಕೂಡ ದೊಡ್ಡ ತಪ್ಪು. ತಂಪು ವಾತಾವರಣವು ಟೊಮ್ಯಾಟೊದ ಆಂತರಿಕ ರಚನೆಯನ್ನು ಹಾಳುಮಾಡಿ, ಅದನ್ನು ಸಪ್ಪೆ ಮತ್ತು ರುಚಿಹೀನವನ್ನಾಗಿ ಮಾಡುತ್ತದೆ. ಸಾಮಾನ್ಯ ತಾಪಮಾನದಲ್ಲಿಟ್ಟರೆ ಅದರ ಸಹಜ ರುಚಿ ಮತ್ತು ಸುವಾಸನೆ ಉಳಿಯುತ್ತದೆ.
ಕೊನೆಯದಾಗಿ ಆಲೂಗಡ್ಡೆ. ಇದನ್ನು ಫ್ರಿಡ್ಜ್ನಲ್ಲಿಡುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಾರೆ. ತಂಪಿನಲ್ಲಿಟ್ಟರೆ ಪಿಷ್ಟವು ಸಕ್ಕರೆಯಾಗಿ ಬದಲಾಗಿ, ಅಡುಗೆ ಮಾಡುವಾಗ ಸಿಹಿಯಾಗುತ್ತದೆ ಮತ್ತು ಬಣ್ಣ ಬದಲಾಗುತ್ತದೆ. ಅಷ್ಟೇ ಅಲ್ಲ, ಹೀಗೆ ಇಟ್ಟ ಆಲೂಗಡ್ಡೆಯನ್ನು ಹೆಚ್ಚು ಬಿಸಿಯಲ್ಲಿ ಹುರಿದರೆ 'ಅಕ್ರಿಲಮೈಡ್' ಎಂಬ ರಾಸಾಯನಿಕ ಉತ್ಪತ್ತಿಯಾಗುವ ಅಪಾಯವಿದೆ. ಆದ್ದರಿಂದ ಇದನ್ನು ಕತ್ತಲಿರುವ, ಒಣ ಮತ್ತು ಗಾಳಿಯಾಡುವ ಜಾಗದಲ್ಲಿ ಇಡಬೇಕು. ಬೇಯಿಸಿದ ನಂತರ ಉಳಿದ ಆಲೂಗಡ್ಡೆಯನ್ನು ಮಾತ್ರ ತಣ್ಣಗೆ ಮಾಡಿ ಫ್ರಿಡ್ಜ್ನಲ್ಲಿ ಇಡುವುದು ಸರಿಯಾದ ಕ್ರಮ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

