ಪ್ರಜ್ವಲ್ ರೇವಣ್ಣ ಅಪರಾಧಿ ತೀರ್ಪಿಗೆ ಮೌನಕ್ಕೆ ಶರಣಾದ ಅಪ್ಪ, ಯಾರ್ಯಾರು ಏನು ಹೇಳಿದ್ರು?
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಒಂದು ಪ್ರಕರಣದಲ್ಲಿ ತೀರ್ಪು ಬಂದಿದ್ದು, ಇನ್ನೂ ಮೂರು ಪ್ರಕರಣಗಳು ಬಾಕಿ ಇವೆ. ಡಿಕೆಶಿ, ಅಶ್ವಥ್ ನಾರಾಯಣ್, ಸುಮಲತಾ ಅಂಬರೀಶ್ ಮತ್ತು ರೂಪಾ ಹಾಸನ್ ಪ್ರತಿಕ್ರಿಯಿಸಿದ್ದಾರೆ.

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಪರಾಧಿ ಎಂದು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 2ರಂದು ಪ್ರಕಟಿಸುವುದಾಗಿ ಹೇಳಿದೆ. ಒಂದು ಪ್ರಕರಣದಲ್ಲಷ್ಟೇ ಇಂದು ತೀರ್ಪು ಬಂದಿದ್ದು, ಇನ್ನೂ ಮೂರು ಪ್ರಕರಣಗಳು ಬಾಕಿ ಇದೆ. ಕೋರ್ಟ್ ತೀರ್ಪು ಬಳಿಕ ಯಾರು ಏನು ಅಭಿಪ್ರಾಯ ವ್ಯಕ್ತಪಡಿಸಿದರು ಎಂಬ ಸಂಪೂರ್ಣ ವಿವರಣೆ ಇಲ್ಲಿ ನೀಡಲಾಗಿದೆ.
ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಕುರಿತು ನನಗೆ ಏನು ಹೇಳಲು ಇಷ್ಟವಿಲ್ಲ. ನಾವು ಕಾನೂನಿಗೆ ಪ್ರಶ್ನೆ ಮಾಡುವವರು ಅಲ್ಲ. ನ್ಯಾಯಾಲಯ ಏನು ತೀರ್ಪು ನೀಡುತ್ತದೆ ಎಂಬುದನ್ನು ನಾವು ಸ್ವೀಕರಿಸಬೇಕು, ಕೇಳಬೇಕು. ನ್ಯಾಯಾಲಯದ ಮುಂದೆ ತಲೆಬಾಗುವುದು ನಮ್ಮ ಕರ್ತವ್ಯ ಎಂದು ಡಿಸಿಎಂ ಡಿಕೆಶಿ ಅಭಿಪ್ರಾಯಪಟ್ಟರು. ನಾನೂ ಸಹ ಹಿಂದೆ ಕಾನೂನಿನ ಎದುರು ನಿಂತಿದ್ದೆ. ನನ್ನನ್ನು ಒಳಗೆ ಕಳಿಸಿದಾಗ ನಾನು ತಿಹಾರ್ ಜೈಲಿಗೆ ಹೋಗಿದ್ದೆ. ನಂತರ ಹೊರಬಂದೆ, ಕಾನೂನು ಪ್ರಕ್ರಿಯೆ ಅನುಭವಿಸಿದ್ದೆ. ಕೊನೆಗೆ ನಾನು ಅಕ್ವಿಟ್ (ಖುಲಾಸೆ) ಆಗಿದೆ. ಇದೇ ರೀತಿಯಲ್ಲಿ ಈಗಿನ ನ್ಯಾಯಾಧೀಶರು ಕೂಡಾ ಈ ಪ್ರಕರಣವನ್ನು ಪರಿಶೀಲಿಸಿ, ಸತ್ಯ- ಸತ್ಯಾತೆಯ ಗುರುತಿಸುವ ಕಾರ್ಯ ಮಾಡುತ್ತಿದ್ದಾರೆ.
ನ್ಯಾಯಾಧೀಶರು ಅವರು ನೋಡಿದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅಭಿಪ್ರಾಯ ರೂಪಿಸಿಕೊಂಡಿದ್ದಾರೆ. ನಮ್ಮ ಬಳಿ ಯಾವುದೇ ಒಳಗಿನ ಮಾಹಿತಿ ಇಲ್ಲ. ನಾವು ಕೂಡಾ ಪತ್ರಿಕೆಯಲ್ಲಿ ಬಂದ ಮಾಹಿತಿಯನ್ನಷ್ಟೇ ಓದಿದ್ದೇವೆ. ಹೆಚ್ಚಿನ ಮಾಹಿತಿಯ ಬಗ್ಗೆ ನಮಗೆ ತಿಳಿದಿಲ್ಲ. ಅವರ ಪಕ್ಷದವರು ಇದ್ದಾರೆ, ಅವರು ಉತ್ತರ ನೀಡುತ್ತಾರೆ. ನಾವು ಇದರಲ್ಲಿ ತಲೆಹಾಕುವ ಅಗತ್ಯವಿಲ್ಲ. ಈ ವಿಚಾರವಾಗಿ ಚರ್ಚೆ ನಡೆಸುವ ಮನಸ್ಥಿತಿಯಲ್ಲೂ ನಾವು ಇಲ್ಲ ಎಂದರು.
ಅತ್ಯಾ8ಚಾರ ಕೇಸ್ ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ವಿಚಾರವಾಗಿ ಮಂಡ್ಯದಲ್ಲಿ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಮಾತನಾಡಿ ಕಾನೂನನ್ನು ಎಲ್ಲರೂ ಗೌರವಿಸಬೇಕು. ಮುಂದೆ ಏನಾಗತ್ತೆ ಅನ್ನೋದನ್ನ ಕಾದು ನೋಡಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ದೋಷಿ ಎಂದು ಕೋರ್ಟ್ ನೀಡಿರುವ ತೀರ್ಪಿಗೆ ಮಂಡ್ಯದಲ್ಲಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿ, ಕೋರ್ಟ್ ಆದೇಶವನ್ನು ಯಾರೇ ಆಗಲಿ ಪಾಲಿಸಬೇಕು. ಈ ವಿಚಾರದ ಬಗ್ಗೆ ನಾನು ಹೆಚ್ಚು ಕಮೆಂಟ್ ಮಾಡಲು ಏನು ಇಲ್ಲ. ಕೋರ್ಟ್ ತೀರ್ಪು ಕೊಟ್ಟ ಮೇಲೆ ಮಾತಾಡೋಕೆ ಏನೂ ಇಲ್ಲ. ಕೋರ್ಟ್ ದೋಷಿ ಎಂದು ಹೇಳಿದ ಮೇಲೆ ಮುಗಿತು. ಶಿಕ್ಷೆ ಏನು ಪ್ರಕಟ ಆಗುತ್ತೆ ಎನ್ನೋದನ್ನು ನೋಡೋಣ ಎಂದರು.
ಸಂತ್ರಸ್ತೆಯ ಪರವಾಗಿ ಹೋರಾಟ ನಡೆಸಿದ ಸಾಹಿತಿ ಮತ್ತು ಹೋರಾಟಗಾರ್ತಿ ರೂಪಾ ಹಾಸನ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ತೀರ್ಪು ಸತ್ಯದ ಗೆಲುವು. ಅನೇಕ ಹೆಣ್ಣುಮಕ್ಕಳು ಪ್ರಜ್ವಲ್ನಿಂದ ಶೋಷಣೆಗೆ ಒಳಗಾಗಿದ್ದರು. ಅವರು ಸಹಾಯವಿಲ್ಲದ ಸ್ಥಿತಿಯಲ್ಲಿ ಕಣ್ಣೀರಿಡುತ್ತಿದ್ದಾರೆ, ಶಾಪ ಹಾಕಿದ್ದಾರೆ. ಇಂದಿನ ತೀರ್ಪು ಅವರು ಅನುಭವಿಸಿದ ನೋವಿಗೆ ಸಮಾಧಾನ ತಂದಿದೆ ಎಂದು ರೂಪಾ ಹಾಸನ್ ಹೇಳಿದರು.
ಇಂತಹ ಪ್ರಕರಣಗಳಲ್ಲಿ ನ್ಯಾಯ ವಿಳಂಬವಾಗುವುದು ಸಾಮಾನ್ಯ. ಆದರೆ ಈ ಪ್ರಕರಣದಲ್ಲಿ ಕೇವಲ ಆರು ತಿಂಗಳಲ್ಲಿ ತೀರ್ಪು ಪ್ರಕಟವಾಗಿದೆ ಎಂಬುದು ಬಹಳ ಖುಷಿಯ ಸಂಗತಿ. ನ್ಯಾಯಾಲಯಕ್ಕೆ ಇದಕ್ಕಾಗಿ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಅವರು ಹೇಳಿದರು.
ನಾನು ಸದಾ ನಂಬುತ್ತಿದ್ದೆ. ಸತ್ಯಕ್ಕೆ ಯಾವತ್ತೂ ಸಹಾಯ ಸಿಗುತ್ತೆ. ಎಷ್ಟೇ ಪ್ರಭಾವಶಾಲಿ ವ್ಯಕ್ತಿಯಾಗಿರಲಿ, ನ್ಯಾಯ ಎಲ್ಲರಿಗೂ ಒಂದೇ. ಈ ತೀರ್ಪು ಅದರ ನಿಜವಾದ ಉದಾಹರಣೆ ಎಂದು ರೂಪಾ ಹಾಸನ್ ಅಭಿಪ್ರಾಯಪಟ್ಟರು. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಾಹಿತಿ ರೂಪಾ ಹಾಸನ್ ಹೋರಾಟ ನಡೆಸಿದ್ದರು.
ಮಗನಿಗೆ ಅತ್ಯಾ8ಚಾರ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬರುವ ಸಮಯದಲ್ಲಿ ವಿಧಾನಸೌಧದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮೀಟಿಂಗ್ ನಲ್ಲಿ ಎಚ್ ಡಿ ರೇವಣ್ಣ ಬ್ಯುಸಿ ಆಗಿದ್ದರು. ಸಭೆ ಮುಗಿಸಿದ ಬಳಿಕ ವಿಧಾನಸೌಧದಿಂದ ಹೊರಟ ಎಚ್ ಡಿ ರೇವಣ್ಣ
ಬೇಸರದಿಂದಲೇ ಹೊರಟರು. ಮಾದ್ಯಮ ಗಳಿಗೆ ಏನೂ ಪ್ರತಿಕ್ರಿಯೆ ನೀಡದೇ ಹೊರಟ ಎಚ್ ಡಿ ರೇವಣ್ಣ ಮೌನಕ್ಕೆ ಶರಣಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

