ಅಣ್ಣತಮ್ಮಂದಿರು ಬಾಲ್ಯ ಕಳೆದು ಯೌವ್ವನ ತಲುಪುತ್ತಿದ್ದಂತೆ ದಾಯಾದಿಗಳಾಗುವ ಕಾಲದಲ್ಲಿ ಇಂತಹ ಯಾವುದೇ ಸಂಬಂಧವಿಲ್ಲದ ಸ್ನೇಹವೊಂದು ಕುಟುಂಬವಾಗಿ ಬದಲಾಗಿ ಮಕ್ಕಳ ಕಾಲಕ್ಕೂ ಮುಂದುವರೆದಿದ್ದು, ಸ್ನೇಹಿತರಾಗಿ ಅಣ್ಣತಮ್ಮನಂತೆ ಒಂದೇ ಮನೆಯಲ್ಲಿ ಬದುಕುತ್ತಿರುವಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ ಸೂರತ್ ನಗರಿ.
ರಕ್ತಸಂಬಂಧಕ್ಕಿಂತಲೂ ಅಮೂಲ್ಯವಾದುದು ಸ್ನೇಹ. ಜೊತೆಯಲ್ಲಿ ಬೆನ್ನಹಿಂದೆ ರಕ್ತ ಹಂಚಿಕೊಂಡು ಹುಟ್ಟಿದ ಅಣ್ಣತಮ್ಮಂದಿರು ಬಾಲ್ಯ ಕಳೆದು ಯೌವ್ವನ ತಲುಪುತ್ತಿದ್ದಂತೆ ದಾಯಾದಿಗಳಾಗುವ ಕಾಲದಲ್ಲಿ ಇಂತಹ ಯಾವುದೇ ಸಂಬಂಧವಿಲ್ಲದ ಸ್ನೇಹವೊಂದು ಕುಟುಂಬವಾಗಿ ಬದಲಾಗಿ ಮಕ್ಕಳ ಕಾಲಕ್ಕೂ ಮುಂದುವರೆದಿದ್ದು, ಸ್ನೇಹಿತರಾಗಿ ಅಣ್ಣತಮ್ಮನಂತೆ ಒಂದೇ ಮನೆಯಲ್ಲಿ ಬದುಕುತ್ತಿರುವಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ ಸೂರತ್ ನಗರಿ.
ಬಹುತೇಕ ಸ್ನೇಹಗಳು ಬಹಳ ದಿನ ಮುಂದುವರೆಯುವುದಿಲ್ಲ, ಅದರಲ್ಲೂ ಬಾಲ್ಯದ ಸ್ನೇಹಗಳು ಕಡೆತನಕ ಬಾಳುವುದು ಬಹಳ ಕಡಿಮೆ ಆದರೆ ಇಲ್ಲೊಂದು ಸ್ನೇಹ ರಕ್ತಸಂಬಂಧವನ್ನು ಮೀರಿ ಬೆಳೆದಿದ್ದು,. ಬಾಲ್ಯದ ಸ್ನೇಹಿತರಿಬ್ಬರು ತಮ್ಮ ಕುಟುಂಬದೊಂದಿಗೆ ಒಂದೇ ಮನೆಯಲ್ಲಿ ಬಾಳುತ್ತಿದ್ದಾರೆ. ಅವರ ಮಕ್ಕಳು ಮರಿಮೊಮ್ಮಕ್ಕಳು ಕೂಡ ಅಣ್ಣ ತಮ್ಮಂದಿರಂತೆ ಒಂದೇ ಮನೆಯಲ್ಲಿ ಬದುಕುತ್ತಿದ್ದಾರೆ. ಗುಜರಾತ್ನ ಸೂರತ್ನಲ್ಲಿ ಈ ಅಪರೂಪದ ಮನೆ ಇದ್ದು, ಮನೆಗೆ ಮೈತ್ರಿ ಎಂದು ಹೆಸರಿಡಲಾಗಿದೆ.
ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳು ದೊಡ್ಡವರಾಗಿ ಮದುವೆಯಾಗುತ್ತಿದ್ದಂತೆ ಸ್ವಂತ ಅಣ್ಣತಮ್ಮಂದಿರೇ ಒಂದೇ ಮನೆಯಲ್ಲಿ ಇರುವುದಿಲ್ಲ. ಹೀಗಿರುವಾಗ 80 ವರ್ಷದ ಹಳೆಯ ಸ್ನೇಹವೊಂದು ಜೊತೆಯಾಗಿ ಸಾಗಿ ತನ್ನ ಕುಟುಂಬವನ್ನು ಸ್ನೇಹದ ಕಡಲಲ್ಲಿ ಬೆರೆಸಿ ರಕ್ತಸಂಬಂಧಿಗಳಂತೆ ಬೆಳೆಸುತ್ತಿದೆ ಎಂದರೆ ಅಚ್ಚರಿ ಅಲ್ಲದೇ ಮತ್ತೇನು?
ಸೂರತ್ನ ಶಾಲೆಯಲ್ಲಿ ಆರಂಭವಾದ ಸ್ನೇಹ:
ಈ ಅದ್ಭುತ ಬಾಂಧವ್ಯದ ಬೇರುಗಳು ಆರಂಭವಾಗಿದ್ದು, 1940 ರಲ್ಲಿ. ಸೂರತ್ನ ಸರ್ಕಾರಿ ಶಾಲೆಯಲ್ಲಿ ಬಿಪಿನ್ ದೇಸಾಯಿ ಮತ್ತು ಗುಣವಂತ್ ದೇಸಾಯಿ ಎಂಬ ಇಬ್ಬರು ಬಾಲಕರು ಒಂದೇ ತರಗತಿಯಲ್ಲಿ ಅಧ್ಯಯನ ಮಾಡಲು ಆರಂಭಿಸುತ್ತಾರೆ. ಸಾಗರಂಪುರದಲ್ಲಿ ನೆರೆಹೊರೆಯವರಾದ ಅವರು ಕೈ ಕೈ ಹಿಡಿದು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದರು. ಊಟದ ಡಬ್ಬಿಗಳನ್ನು ಹಂಚಿಕೊಳ್ಳುತ್ತಿದ್ದರು. ಆಲದ ಮರಗಳ ನೆರಳಿನಲ್ಲಿ ಒಟ್ಟಿಗೆ ಕನಸು ಕಂಡಿದ್ದರು. ಆದರೆ ಅವರ ಈ ಬಾಲ್ಯದ ಮುಗ್ಧ ಸ್ನೇಹವೊಂದು ತಮ್ಮ ಮುಂದಿನ ಹಲವು ತಲೆಮಾರುಗಳಿಗೆ ಒಂದು ಏಕತೆ ಮತ್ತು ಪ್ರೀತಿಯ ಪರಂಪರೆಯನ್ನು ನಿರ್ಮಿಸುತ್ತದೆ ಎಂಬುದು ಅವರಿಗೂ ತಿಳಿದಿರಲಿಲ್ಲ.
1942 ರಲ್ಲಿ ಮಹಾತ್ಮಾ ಗಾಂಧಿಯವರ ಕ್ವಿಟ್ ಇಂಡಿಯಾ ಚಳುವಳಿಯ ಕರೆಯೊಂದಿಗೆ ದೇಶವು ಸ್ವಾತಂತ್ರ್ಯದ ಸಂಗ್ರಾಮದಲ್ಲಿ ತೊಡಗಿದಾಗ ಇವರೂ ಕೂಡ ಶಾಲೆಯಿಂದ ಹೊರನಡೆದು ಸ್ವಾತಂತ್ರದ ಕ್ರಾಂತಿಯಲ್ಲಿ ಸೇರಿಕೊಂಡರು. ಹೆಗಲಿಗೆ ಹೆಗಲು ಕೊಟ್ಟು, ಬ್ರಿಟಿಷ್ ವಿರೋಧಿ ಕರಪತ್ರಗಳನ್ನು ವಿತರಿಸಿದರು, ಪ್ರತಿಭಟನೆಗಳನ್ನು ನಡೆಸಿದರು ಮತ್ತು ಒಟ್ಟಿಗೆ ಜೈಲು ಶಿಕ್ಷೆಯನ್ನು ಅನುಭವಿಸಿದರು ಈ ಒಡನಾಟ ಅವರ ಸ್ನೇಹವನ್ನು ಇನ್ನಷ್ಟು ಗಾಢವಾಗಿಸಿತು.
ಸ್ವಾತಂತ್ರ್ಯಾನಂತರ, ಇಬ್ಬರೂ ಪುಣೆಯ ಕೃಷಿ ವಿಶ್ವವಿದ್ಯಾಲಯಕ್ಕೆ ಅಧ್ಯಯನಕ್ಕಾಗಿ ಸೇರಿಕೊಂಡಾಗ ಈ ಬಾಂಧವ್ಯ ಇನ್ನಷ್ಟು ಗಟ್ಟಿಯಾಯ್ತು.ಪದವಿ ಪಡೆದ ನಂತರ ಇಬ್ಬರು ಸಾಮಾನ್ಯ ಕನಸುಗಳೊಂದಿಗೆ ಸೂರತ್ಗೆ ಮರಳಿದರು. ಹಲವು ದಶಕಗಳಲ್ಲಿ ಅವರು ಕೃಷಿ, ಹೈನುಗಾರಿಕೆ, ಗುತ್ತಿಗೆ ಕೆಲಸ ಮತ್ತು ವಿವಿಧ ಉದ್ಯಮ ಹೀಗೆ ತಾವು ಕೈಗೆತ್ತಿಕೊಂಡ ಪ್ರತಿ ಕೆಲಸದಲ್ಲೂ ಪಾಲುದಾರರಾದರು. ನಂತರ ಜೊತೆಯಾಗಿ ಮನೆ ನಿರ್ಮಾಣ ಮಾಡಿದ್ದು, ಒಂದೇ ಮನೆಯಲ್ಲಿ ಅವರಿಬ್ಬರ ಕುಟುಂಬದವರು ಮಕ್ಕಳು ಮರಿಮೊಮ್ಮಕ್ಕಳು ಬೇರ್ಪಡಿಸಲಾಗದಂತೆ ಬದುಕ್ತಿದ್ದಾರೆ. ಹುಟ್ಟುಹಬ್ಬಗಳು, ಹಬ್ಬಗಳು ಹೀಗೆ ಪ್ರತಿಯೊಂದನ್ನು ಈ ಇವರು ಒಟ್ಟಿಗೆ ಆಚರಿಸುತ್ತಾರೆ.
ಸೂರತ್ನ ಭಟ್ನಾಗರ್ನಲ್ಲಿರುವ ಮೈತ್ರಿ ಮನೆ:
ಅಂದಹಾಗೆ ಇವರು ವಾಸ ಮಾಡುವ ಮನೆ ಮೈತ್ರಿ ಇರುವುದು ಸೂರತ್ನ ಭಟ್ನಾಗರ್ನಲ್ಲಿ. ಇವರ ಸ್ನೇಹದ ಅದ್ಭುತ ಪರಂಪರೆಯನ್ನು ಅವರ ಮುಂದಿನ ತಲೆಮಾರುಗಳು ಮುಂದುವರಿಸಿಕೊಂಡು ಹೋಗುತ್ತಿವೆ, ಅಣ್ಣ ತಮ್ಮಂದಿರೇ ಜೊತೆಯಾಗಿರದ ಈ ಕಾಲದಲ್ಲಿ ಇವರ ಈ ಬಂದ ಸ್ನೇಹಕ್ಕೊಂದು ಹೊಸ ಭಾಷ್ಯ ಬರೆದಿದೆ.


