ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು, ಮಹಾರಾಷ್ಟ್ರದಲ್ಲಿ ಪ್ರಬಲ ಲೋಕಾಯುಕ್ತ ಕಾಯ್ದೆ ಜಾರಿಗೆ ತರಲು ಆಗ್ರಹಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಬೇಡಿಕೆ ಈಡೇರದಿದ್ದರೆ, 2026ರ ಜನವರಿ 30 ರಿಂದ  ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.

ಮಹಾರಾಷ್ಟ್ರ (ಡಿ.12): ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದು, ಜನವರಿ 30, 2026 ರಿಂದ ತಮ್ಮ ಗ್ರಾಮವಾದ ರಾಲೇಗನ್ ಸಿದ್ಧಿಯಲ್ಲಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಪ್ರಬಲ ಲೋಕಾಯುಕ್ತ ಕಾಯ್ದೆಯನ್ನು ಕೂಡಲೇ ಜಾರಿಗೆ ತರಬೇಕು ಎಂಬುದು ಅವರ ಮುಖ್ಯ ಬೇಡಿಕೆಯಾಗಿದೆ. ಈ ಸಂಬಂಧ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರವು ಈ ಹಿಂದೆಯೇ 2022 ರ ಡಿಸೆಂಬರ್ 28 ರಂದು ವಿಧಾನಸಭೆಯಲ್ಲಿ ಮತ್ತು 2023 ರ ಡಿಸೆಂಬರ್ 15 ರಂದು ವಿಧಾನ ಪರಿಷತ್ತಿನಲ್ಲಿ ಲೋಕಾಯುಕ್ತ ಮಸೂದೆಯನ್ನು ಅಂಗೀಕರಿಸಿದ್ದರೂ, ಅದು ಇದುವರೆಗೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ. ಸರ್ಕಾರದ ಈ ವಿಳಂಬ ನೀತಿಯಿಂದಾಗಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹದ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.

ಲೋಕಾಯುಕ್ತ ಮಸೂದೆ ಜಾರಿಯಾಗುವವರೆಗೂ ಹೋರಾಟ:

ಈ ದೇಶವು ಕಾನೂನಿನ ಆಧಾರದ ಮೇಲೆ ನಡೆಯುತ್ತದೆ. ನಾನು ಇಲ್ಲಿಯವರೆಗೆ 10 ಕಾನೂನುಗಳನ್ನು ರೂಪಿಸಲು ಸಹಾಯ ಮಾಡಿದ್ದೇನೆ. ಈಗ ರಾಜ್ಯದಲ್ಲಿ ಬಲವಾದ ಲೋಕಾಯುಕ್ತ ಕಾನೂನು ಅಗತ್ಯವಾಗಿದೆ ಎಂದು ಅಣ್ಣಾ ಹಜಾರೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಾಯುಕ್ತ ಕಾನೂನು ಜಾರಿಗೊಳಿಸುವ ಬಗ್ಗೆ ಸರ್ಕಾರ ಹಲವು ಸಭೆಗಳನ್ನು ನಡೆಸಿ ಭರವಸೆಗಳನ್ನು ನೀಡಿದರೂ, ಅವು ಈಡೇರಿಲ್ಲ. ಈ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಅವರು, ಪ್ರಬಲ ಲೋಕಾಯುಕ್ತ ಕಾನೂನು ಜಾರಿಗೆ ಬರದಿದ್ದರೆ ನಮಗೆ ಬದುಕುವ ಆಸೆ ಇಲ್ಲ ಎಂಬ ತೀರ್ಮಾನಕ್ಕೆ ನಾನು ಈಗ ಬಂದಿದ್ದೇನೆ ಎಂದಿದ್ದಾರೆ.

ಗಾಂಧಿ ಪುಣ್ಯತಿಥಿಯಂದೇ ಸತ್ಯಾಗ್ರಹ ಆರಂಭ

ಅಣ್ಣಾ ಹಜಾರೆ ಅವರು ಉಪವಾಸಕ್ಕೆ ಜನವರಿ 30 ರ ದಿನಾಂಕವನ್ನು ಆರಿಸಿಕೊಂಡಿರುವುದು ಮಹತ್ವದ್ದಾಗಿದೆ, ಏಕೆಂದರೆ ಇದು ಮಹಾತ್ಮ ಗಾಂಧಿಯವರ ಪುಣ್ಯತಿಥಿಯಾಗಿದೆ. 'ನನ್ನ ಇಡೀ ಜೀವನ ದೇಶದ ಕಲ್ಯಾಣಕ್ಕಾಗಿ ಮೀಸಲಾಗಿದೆ. ನನ್ನ ದೇಹದಲ್ಲಿ ಜೀವ ಇರುವವರೆಗೂ ನಾನು ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತೇನೆ. ಮಹಾತ್ಮ ಗಾಂಧಿಯವರ ಆದರ್ಶಗಳು ನಮ್ಮ ಮುಂದಿವೆ. ನಾನು ಅಲ್ಲಿಯೇ ಸಾಯುತ್ತೇನೆ, ಇದು ಕಾರ್ಯರೂಪಕ್ಕೆ ಬರುವವರೆಗೂ ಉಪವಾಸ ಮುಂದುವರಿಯುತ್ತದೆ' ಎಂದು ಅವರು ದೃಢ ನಿರ್ಧಾರ ವ್ಯಕ್ತಪಡಿಸಿದ್ದಾರೆ.

ಹಿನ್ನೆಲೆ: 2011 ರಲ್ಲಿ, ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ಐತಿಹಾಸಿಕ ಆಂದೋಲನವನ್ನು ಪ್ರಾರಂಭಿಸಿದರು. ಅವರ ಹೋರಾಟವು ಜನಲೋಕಪಾಲ್ ಮಸೂದೆಯ ಬೇಡಿಕೆಯನ್ನು ರಾಷ್ಟ್ರೀಯ ಮಟ್ಟಕ್ಕೆ ತಂದಿತು. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಅವರ ಪ್ರತಿಭಟನೆಯು ದೇಶದ ಗಮನ ಸೆಳೆದಿತ್ತು.