Nanded honor killing: ಮಹಾರಾಷ್ಟ್ರದ ನಾಂದೇಡ್ನಲ್ಲಿ, ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಯುವತಿಯ ಕುಟುಂಬದವರೇ ಆತನನ್ನು ಹತ್ಯೆ ಮಾಡಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾದ ಯುವತಿ, ತನ್ನ ಪ್ರಿಯಕರನ ಶವವನ್ನೇ ಮದುವೆಯಾಗಿದ್ದಾಳೆ.
ಮಹಾರಾಷ್ಟ್ರದ ನಾಂದೇಡ್ನಲ್ಲಿ ಮರ್ಯಾದಾ ಹತ್ಯೆ:
ಮಹಾರಾಷ್ಟ್ರದ ನಾಂದೇಡ್ನಲ್ಲಿ ಮರ್ಯಾದಾ ಹತ್ಯೆಯೊಂದು ನಡೆದಿದೆ. ಬೇರೆ ಜಾತಿ ಎಂಬ ಕಾರಣಕ್ಕೆ ಯುವತಿ ಪ್ರೀತಿಸುತ್ತಿದ್ದ ಹುಡುಗನನ್ನು ಆಕೆಯ ಮನೆಯವರೇ ಹೊಡೆದು ಕೊಂದಿದ್ದಾರೆ. ಯುವಕನ ಸಾವಿನ ನಂತರ ಆಘಾತಗೊಂಡ ಯುವತಿ ಆತನ ಶವವನ್ನೇ ಮದುವೆಯಾಗಿದ್ದಲ್ಲದೇ ಆತನ ಮನೆಯಲ್ಲೇ ಸೊಸೆಯಾಗಿ ನೆಲೆಸುವುದಕ್ಕೆ ನಿರ್ಧಾರ ಮಾಡಿದ್ದಾಳೆ.
ಮಗಳ ಪ್ರಿಯಕರನ ಕೊಂದ ಮನೆಯವರು
20 ವರ್ಷದ ಸಕ್ಷಮ್ ಟಾಟೆ ಕೊಲೆಯಾದ ಯುವಕ. ಈತ ಅಂಚಲ್ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ತನ್ನ ಸಹೋದರರಿಂದಲೇ ಅಂಚಲ್ಗೆ ಸಕ್ಷಮ್ ತಾಟೆಯ ಪರಿಚಯವಾಗಿತ್ತು. ತನ್ನ ಸೋದರರ ಜೊತೆ ಆಗಾಗ ಮನೆಗೆ ಬರುತ್ತಿದ್ದ ಸಕ್ಷಮ್ ಮೇಲೆ ನಿಧಾನವಾಗಿ ಅಂಚಲ್ಗೆ ಪ್ರೀತಿಯಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅವರ ಪ್ರೀತಿಗೆ ಜಾತಿ ಅಡ್ಡಿಯಾಗಿತ್ತು. ಮೂರು ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು. ಆದರೆ ಇತ್ತೀಚೆಗೆ ಈ ಪ್ರೀತಿ ಅಂಚಲ್ ಕುಟುಂಬಕ್ಕೆ ತಿಳಿದು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬೇರೆ ಬೇರೆ ಜಾತಿ ಎಂಬ ಕಾರಣಕ್ಕೆ ಯುವತಿ ಮನೆಯವರು ಈ ಪ್ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಮನೆಯವರ ವಿರೋಧದ ನಡುವೆಯೂ ಅಂಚಲ್ ಸಕ್ಷಮ್ ತಾಟೆ ಜೊತೆಗಿನ ತಮ್ಮ ಪ್ರೀತಿಯನ್ನು ಮುಂದುವರೆಸಿದ್ದರು.
ಆತನ ಶವವನ್ನೇ ಮದುವೆಯಾದ ಯುವತಿ
ಅಲ್ಲದೇ ಆತನನ್ನೇ ಮದುವೆಯಾಗುವುದಕ್ಕೆ ಅಂಚಲ್ ಧೃಡ ನಿರ್ಧಾರ ಮಾಡಿದ್ದಳು. ಈ ವಿಚಾರ ಅಂಚಲ್ನ ಸೋದರ ಹಾಗೂ ತಂದೆಗೆ ತಿಳಿದಿದ್ದು, ತಂದೆ ಹಾಗೂ ಆಕೆಯ ಸೋದರರು ಸೇರಿ ಸಕ್ಷಮ್ಗೆ ಸರಿಯಾಗಿ ಥಳಿಸಿ ತಲೆಗೆ ಗುಂಡಿಕ್ಕಿದ್ದಲ್ಲದೇ ಆತನ ತಲೆಯನ್ನು ಕಲ್ಲಿಂದ ಜಜ್ಜಿ ನಜ್ಜುಗುಜ್ಜಾಗಿಸಿದ್ದಾರೆ.
ಇದನ್ನೂ ಓದಿ: ಸ್ವಂತ ಕ್ಯೂ ಆರ್ ಕೋಡ್ ಇಟ್ಕೊಂಡು ವಸೂಲಿಗಿಳಿದ ಟ್ರಾಫಿಕ್ ಕಾನ್ಸ್ಟೇಬಲ್ ಅಂದರ್: ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಸಕ್ಷಮ್ ಕೊಲೆಯಾದ ವಿಚಾರ ತಿಳಿದ ಅಂಚಲ್ ಆತನ ಮನೆಗೆ ಹೋಗಿದ್ದಾಳೆ., ಅಲ್ಲಿ ಸಕ್ಷಮ್ ಅಂತ್ಯಸಂಸ್ಕಾರ ನಡೆಸುತ್ತಿದ್ದಾಗಲೇ ಅಲ್ಲಿಗೆ ತಲುಪಿದ ಅಂಚಲ್ ಆತನ ದೇಹಕ್ಕೆ ಅರಶಿಣ ಹಚ್ಚಿ ತನ್ನ ಹಣೆಗೆ ಸಿಂಧೂರ ಹಚ್ಚಿ ಆತನ ಮೃತದೇಹವನ್ನೇ ಮದುವೆಯಾಗಿದ್ದಾಳೆ. ಅಲ್ಲದೇ ತನ್ನ ಉಳಿದ ಜೀವನವನ್ನು ಸಕ್ಷಮ್ನ ಮನೆಯಲ್ಲೇ ಆತನ ಪತ್ನಿಯಂತೆ ಬದುಕಲು ನಿರ್ಧರಿಸಿದ್ದಾಳೆ. ಸಕ್ಷಮ್ನ ಸಾವಿನಲ್ಲೂ ನಮ್ಮ ಪ್ರೀತಿ ಗೆದ್ದಿದೆ, ನನ್ನ ತಂದೆ ಹಾಗೂ ಸೋದರರು ಸೋತಿದ್ದಾರೆ ಎಂದು ಆಕೆ ಹೇಳಿದ್ದಾಳೆ. ಜೊತೆಗೆ ಸಕ್ಷಮ್ನ ಕೊಲೆ ಮಾಡಿದ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸುವಂತೆ ಆಕೆ ಆಗ್ರಹಿಸಿದ್ದಾಳೆ. ಸಕ್ಷಮ್ ಮೃತನಾಗಿದ್ದರೂ ನಮ್ಮ ಪ್ರೀತಿ ಜೀವಂತವಾಗಿದೆ ಇದೇ ಕಾರಣಕ್ಕೆ ತಾನು ಆತನ ಮದುವೆಯಾಗಿದ್ದಾಗಿ ಆಕೆ ಹೇಳಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲಿಸರು ಆರು ಜನರನ್ನು ಬಂಧಿಸಿದ್ದು, ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಈಗ ಭಾರತ ಮಾತ್ರವಲ್ಲ ಲಂಡನ್ ಬೀದಿಯಲ್ಲೂ ಪಾನ್ ಮಸಾಲಾದ ಮದರಂಗಿ: ಇಲ್ಲಿ ಉಗುಳ್ತಿರೋರು ಭಾರತೀಯರಾ?


