'ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್'ನಲ್ಲಿ ಬೆಂಗಳೂರಿನ 'ನಿಯೋಸೇಪಿಯನ್' ಕಂಪನಿಯ ಪೇಟೆಂಟ್ ಪಡೆದ ಎಐ ವೇರಬಲ್ ಸಾಧನಗಳು ಕಳ್ಳತನವಾಗಿವೆ. ಪ್ರಧಾನಿ ಮೋದಿ ಉದ್ಘಾಟನೆಗೂ ಮುನ್ನ ಹೈ-ಸೆಕ್ಯುರಿಟಿ ವಲಯದಲ್ಲಿ ಈ ಘಟನೆ ನಡೆದಿದ್ದು, ಭದ್ರತಾ ಲೋಪದ ಬಗ್ಗೆ ಸಿಇಒ ಧನಂಜಯ್ ಯಾದವ್ ಆರೋಪಿಸಿದ್ದಾರೆ. 

ಬೆಂಗಳೂರು/ನವದೆಹಲಿ (ಫೆ.17): ದೇಶದ ತಾಂತ್ರಿಕ ವಲಯದ ಪ್ರತಿಷ್ಠಿತ ಕಾರ್ಯಕ್ರಮವಾದ 'ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್'ನಲ್ಲಿ ಭದ್ರತಾ ಲೋಪದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ 'ನಿಯೋಸೇಪಿಯನ್' (NeoSapien) ಕಂಪನಿಯ ಸಿಇಒ ಧನಂಜಯ್ ಯಾದವ್, ಸಮಿಟ್‌ನಲ್ಲಿ ತಮ್ಮ ಕಂಪನಿಯ ಪ್ರಮುಖ ಎಐ ವೇರಬಲ್ ಸಾಧನಗಳು ಕಳ್ಳತನವಾಗಿವೆ ಎಂದು ಆರೋಪಿಸಿದ್ದು, ಇಡೀ ಟೆಕ್ ವಲಯದಲ್ಲಿ ಸಂಚಲನ ಮೂಡಿಸಿದೆ.

ಪ್ರಧಾನಿ ಉದ್ಘಾಟನೆಗೂ ಮುನ್ನವೇ ಭದ್ರತಾ ಲೋಪ?

ಫೆಬ್ರವರಿ 16 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆಯನ್ನು ಉದ್ಘಾಟಿಸಬೇಕಿತ್ತು. ಈ ಕಾರ್ಯಕ್ರಮದ ಭದ್ರತೆಯ ದೃಷ್ಟಿಯಿಂದ, ಭದ್ರತಾ ಸಿಬ್ಬಂದಿ ಪ್ರದರ್ಶನ ಹಾಲ್ ಅನ್ನು ಖಾಲಿ ಮಾಡಿಸಿದ್ದರು. ಈ ವೇಳೆ ತಮ್ಮ ಬೆಲೆಬಾಳುವ ಸಾಧನಗಳನ್ನು ಜೊತೆಗೆ ಕೊಂಡೊಯ್ಯಬೇಕೇ ಎಂದು ಧನಂಜಯ್ ಯಾದವ್ ಅವರು ಸಿಬ್ಬಂದಿಯನ್ನು ವಿಚಾರಿಸಿದ್ದರು. ಅದಕ್ಕೆ ಭದ್ರತಾ ಸಿಬ್ಬಂದಿ, 'ಯಾವುದೇ ಅಗತ್ಯವಿಲ್ಲ, ಇತರರೂ ತಮ್ಮ ಲ್ಯಾಪ್‌ಟಾಪ್‌ಗಳನ್ನು ಇಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ. ನಾವು ಭದ್ರತೆ ನೋಡಿಕೊಳ್ಳುತ್ತೇವೆ' ಎಂದು ಭರವಸೆ ನೀಡಿದ್ದರು. ಆದರೆ, 6 ಗಂಟೆಗಳ ನಂತರ ವಾಪಸ್ ಬಂದು ನೋಡಿದಾಗ ಸಾಧನಗಳು ನಾಪತ್ತೆಯಾಗಿದ್ದವು ಮತ್ತು ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿದ್ದವು ಎಂದು ಧನಂಜಯ್ ವಿವರಿಸಿದ್ದಾರೆ.

ಏನಿದು ವಿಶೇಷ ಸಾಧನ?

ಕಳ್ಳತನವಾದ ಈ ಸಾಧನ ಸಾಮಾನ್ಯ ವೇರಬಲ್ ಡಿವೈಸ್ ಆಗಿರಲಿಲ್ಲ. ಇದು ಸಂಭಾಷಣೆಗಳನ್ನು ಟ್ರ್ಯಾಕ್ ಮಾಡಿ, ಭಾವನೆಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಹೊಂದಿರುವ ಭಾರತದ ಮೊದಲ ಪೇಟೆಂಟ್ ಪಡೆದ ಎಐ ವೇರಬಲ್ ಸಾಧನವಾಗಿತ್ತು. ಇದನ್ನು ಪ್ರಧಾನಿ ಮೋದಿಯವರ ಗಮನಕ್ಕೆ ತರಬೇಕೆಂದು ಧನಂಜಯ್ ಬಹಳ ಉತ್ಸುಕರಾಗಿದ್ದರು. ಆದರೆ, ಕಳ್ಳತನದ ಈ ಘಟನೆ ಅವರ ಕನಸಿಗೆ ತಣ್ಣೀರೆರೆಚಿದಂತಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ:

ಈ ಘಟನೆಯ ಬಗ್ಗೆ ಧನಂಜಯ್ ಯಾದವ್ ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. "ಇದು ತುಂಬಾ ನಿರಾಶಾದಾಯಕ ಅನುಭವ. ಕೇವಲ ಭದ್ರತಾ ಸಿಬ್ಬಂದಿ ಮತ್ತು ಅಧಿಕೃತ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶವಿದ್ದ ಹೈ-ಸೆಕ್ಯುರಿಟಿ ಜಾಗದಲ್ಲಿ ಇದು ಹೇಗೆ ಸಾಧ್ಯವಾಯಿತು? ವಿಮಾನ ಪ್ರಯಾಣ, ವಸತಿ ಮತ್ತು ಸ್ಟಾಲ್ ಬಾಟಿಗೆಯಂತಹ ಖರ್ಚುಗಳನ್ನು ಮಾಡಿಕೊಂಡು ಇಲ್ಲಿಗೆ ಬಂದ ನಮಗೆ ಸಿಕ್ಕಿದ್ದು ಈ ಆಘಾತ," ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Scroll to load tweet…


ಸುಂದರ್ ಪಿಚೈ, ಬಿಲ್ ಗೇಟ್ಸ್ ಮತ್ತು ಸ್ಯಾಮ್ ಆಲ್ಟ್‌ಮನ್ ಅವರಂತಹ ವಿಶ್ವಪ್ರಸಿದ್ಧ ವ್ಯಕ್ತಿಗಳು ಭಾಗವಹಿಸುವ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಇಂತಹ ಭದ್ರತಾ ಲೋಪ ಸಂಭವಿಸಿರುವುದು ಭಾರತದ ಆತಿಥ್ಯದ ಮೇಲೆ ಪ್ರಶ್ನೆ ಮೂಡುವಂತೆ ಮಾಡಿದೆ. ಸದ್ಯ ಈ ಬಗ್ಗೆ ತನಿಖೆ ನಡೆಯಬೇಕಿದ್ದು, ಕಳ್ಳತನವಾದ ಸಾಧನಗಳ ಪತ್ತೆಗೆ ಒತ್ತಾಯ ಕೇಳಿಬಂದಿದೆ.