ಆಪರೇಶನ್ ಸಿಂದೂರ್ ವೇಳೆ ಸೇನೆಗೆ ತನ್ನ ಕೈಲಾದ ನೆರವು ನೀಡಿದ 10 ವರ್ಷದ ಬಾಲಕನಿಗೆ ಭಾರತೀಯ ಸೇನೆ ಭರ್ಜರಿ ಗಿಫ್ಟ್ ನೀಡಿದೆ. ಬಾಲಕನ ಶಿಕ್ಷಣದ ಜವಾಬ್ದಾರಿಯನ್ನು ಭಾರತೀಯ ಸೇನೆ ಹೊತ್ತುಕೊಂಡಿದೆ.
ನವದೆಹಲಿ (ಜು.20) ಕಾಶ್ಮೀರ ಪೆಹಲ್ಗಾಂನಲ್ಲಿ ನಡೆದ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ಮೂಲಕ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಇತ್ತ ಪಾಕಿಸ್ತಾನ ಸೇನೆ, ಭಾರತದ ಜನವಸತಿಗಳ ಮೇಲೆ ಟಾರ್ಗೆಟ್ ಮಾಡಿ ದಾಳಿ ಆರಂಭಿಸಿತ್ತು. ಹೀಗಾಗಿ ಅಘೋಷಿತ ಯುದ್ಧ ನಡೆದಿತ್ತು. ಈ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಭಾರತೀಯ ಸೇನೆಗೆ 10 ವರ್ಷದ ಬಾಲಕನೊಬ್ಬ ನೆರವಾಗಿದ್ದ. ಈ ಬಾಲಕನ ನೆರವಿಗೆ ಭಾರತೀಯ ಸೇನೆ ಭರ್ಜರಿ ಗಿಫ್ಟ್ ನೀಡಿದೆ. ಆಪರೇಶನ್ ಸಿಂದೂರ್ ವೇಳೆ ಭಾರತೀಯ ಸೇನೆಗೆ ನೆರವಾದ ಈ ಪುಟ್ಟ ಬಾಲಕನ ಶಿಕ್ಷಣದ ಜವಾಬ್ದಾರಿಯನ್ನು ಭಾರತೀಯ ಸೇನೆ ಹೊತ್ತುಕೊಂಡಿದೆ.
ಶ್ವಾನ್ ಸಿಂಗ್ ಧೈರ್ಯ ಹಾಗೂ ನೆರವು ಮೆಚ್ಚಿದೆ ಭಾರತೀಯ ಸೇನೆ
ಭಾರತದ ಆಪರೇಶನ್ ಸಿಂದೂರ್ಗೆ ಪ್ರತಿಯಾಗಿ ಪಾಕಿಸ್ತಾನ ಭಾರಿ ದಾಳಿಗೆ ಮುಂದಾಗಿತ್ತು. ಆದರೆ ಈ ಎಲ್ಲಾ ದಾಳಿಗಳನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಪಂಜಾಬ್ ಗಡಿ ಭಾಗದಲ್ಲಿ ಪಾಕಿಸ್ತಾನ ಭಾರಿ ದಾಳಿ ನಡೆಸಿತ್ತು. ಅಮೃತಸರ ಸೇರಿದಂತೆ ಹಲವೆಡೆ ಟಾರ್ಗೆಟ್ ಮಾಡಿ ದಾಳಿಗೆ ಮುಂದಾಗಿತ್ತು. ಪಾಕಿಸ್ತಾನ ಪ್ರಯತ್ನ ವಿಫಲಗೊಳಿಸುತ್ತಾ ತೀವ್ರ ಚಕಮಕಿ ನಡೆದಿತ್ತು. ಪಂಜಾಬ್ನ ತಾರಾ ವಾಲಿ ಗ್ರಾಮದಲ್ಲಿ ಭಾರತೀಯ ಸೇನೆ ನಿರಂತವಾಗಿ ಪಾಕಿಸ್ತಾನ ದಾಳಿ ಹಿಮ್ಮೆಟ್ಟಿಸಿತ್ತು. ಈ ವೇಳೆ ಭಾರತೀಯ ಯೋಧರಿಗೆ ಶ್ವಾನ್ ಸಿಂಗ್ ನೀರು, ಚಹಾ, ಹಾಲು, ಐಸ್, ಲಸ್ಸಿ ಸೇರಿದಂತೆ ಹಲವು ಪಾನೀಯಗಳನ್ನು ಭಾರತೀಯ ಸೇನಾ ಯೋಧರಿಗೆ ಹಂಚಿದ್ದ. ಈ ಕುರಿತ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆ ಲೆಫ್ಟಿನೆಂಟ್ ಜನರಲ್ ಮನೋಜ್ ಕುಮಾರ್ ಕಟಿಯಾರ್, ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಈ ಬಾಲಕನ ನೆರವು ಗುಣಗಾನ ಮಾಡಿದ್ದಾರೆ. ಇದೇ ವೇಳೆ ಈತನ ಶಿಕ್ಷಣದ ಜವಾಬ್ದಾರಿಯನ್ನು ಭಾರತೀಯ ಸೇನೆ ಹೊತ್ತುಕೊಳ್ಳುತ್ತಿರುವುದಾಗಿ ಘೋಷಿಸಿದ್ದಾರೆ.
ಶ್ವಾನ್ ಸಿಂಗ್ ಧೈರ್ಯ, ಸೇವಾ ಮನೋಭಾವ, ತುರ್ತು ಸಂದರ್ಭದಲ್ಲಿ ನೀಡಿದ ನೆರವು ಅತ್ಯಂತ ಮುಖ್ಯವಾಗಿತ್ತು. ಸಾಮಾನ್ಯವಾಗಿ ಗಡಿಯಲ್ಲಿ ಸೇನಾ ಗುಂಡಿನ ಚಟುವಟಿಕೆ ಆರಂಭಗೊಂಡಾಗ ಸ್ಥಲೀಯರು ಸುರಕ್ಷಿತ ಸ್ಥಳಕ್ಕೆ ತೆರಳುತ್ತಾರೆ. ಆದರೆ ಈ ಬಾಲಕ ಧೈರ್ಯವಾಗಿ ಭಾರತೀಯ ಸೇನೆಗೆ ನೆರವು ನೀಡಿದ್ದ ಎಂದು ಸೇನೆ ಹೇಳಿದೆ. ಈ ಹೀರೋವನ್ನು ದೇಶ ಗೌರವಿಸಬೇಕು. ಆತನ ಧೈರ್ಯಕ್ಕೆ, ಆತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದು ಭಾರತೀಯ ಸೇನೆ ಹೇಳಿದೆ.
ಸೇನೆ ಸೇರಬೇಕು ಎಂದಿರುವ ಶ್ವಾನ್ ಸಿಂಗ್
ಪಂಜಾಬ್ನ ಫಿರೋಜ್ಪುರ್ ಜಿಲ್ಲೆಯ ಮಮ್ದೋಚ್ ಗ್ರಾಮದ ಶ್ವಾನ್ ಸಿಂಗ್ ಭಾರತೀಯ ಸೇನೆ ಸೇರಿಕೊಳ್ಳಬೇಕು ಎಂದು ಬಯಕೆ ವ್ಯಕ್ತಪಡಿಸಿದ್ದಾನೆ. ಈ ದೇಶಕ್ಕಾಗಿ ಹೋರಾಡಲು, ದೇಶ ಉಳಿಸಲು ಭಾರತೀಯ ಸೇನೆಗೆ ಸೇರಿಕೊಳ್ಳುವುದಾಗಿ ಹೇಳಿದ್ದಾನೆ.
