ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ಶಿವನ ಆರಾಧಕರಾದ ನಾಗಸಾಧುವೊಬ್ಬರು ಪುಟ್ಟ ಬಾಲಕಿಯಿಂದ ಆಶೀರ್ವಾದ ಪಡೆಯುತ್ತಾರೆ. ಸಾಮಾನ್ಯವಾಗಿ ಆಶೀರ್ವಾದ ನೀಡುವ ಸಾಧು, ಬಾಲಕಿಯ ಆಶೀರ್ವಾದ ಪಡೆದ ಈ ಅಚ್ಚರಿಯ ಘಟನೆಯ ವೀಡಿಯೋ ವೈರಲ್ ಆಗಿದೆ.
ನಾಗಸಾಧುಗಳು ಶಿವನ ಆರಾಧಕರಾಗಿದ್ದು, ದಿಗಂಬರರಾಗಿ (ಬಟ್ಟೆ ಧರಿಸದೆ), ದೇಹಕ್ಕೆ ವಿಭೂತಿ ಹಚ್ಚಿಕೊಂಡು ಹಿಮಾಲಯದ ಗುಹೆಗಳಲ್ಲಿ ಅಥವಾ ಅಖಾಡಗಳಲ್ಲಿ ಕಠಿಣ ತಪಸ್ಸು ಮಾಡುವ ತಪಸ್ವಿಗಳಾಗಿದ್ದಾರೆ. ಮುಖ್ಯವಾಗಿ ಕುಂಭಮೇಳದ ಸಮಯದಲ್ಲಿ ಇವರು ಪವಿತ್ರ ಸ್ನಾನಕ್ಕಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಇವರು ಲೌಕಿಕ ಜೀವನವನ್ನು ತ್ಯಜಿಸಿ, ಜಟೆ ಬಿಟ್ಟು, ತ್ರಿಶೂಲ ಹಿಡಿದು ಅಚಲ ಭಕ್ತಿಯಿಂದ ಆಧ್ಯಾತ್ಮಿಕ ಸಾಧನೆಯಲ್ಲಿ ಮುಳುಗಿರುತ್ತಾರೆ. ಇಂತಹ ನಾಗಸಾಧುವಿನ ವೀಡಿಯೋವೊಂದು ವೈರಲ್ ಆಗಿದೆ.
ಪುಟ್ಟ ಬಾಲಕಿಯಿಂದ ಆಶೀರ್ವಾದ ಕೇಳಿ ಪಡೆದ ನಾಗಸಾಧು:
ಸಾಮಾಜಿಕ ಜಾಲತಾಣದಲ್ಲಿ ನಾಗಸಾಧುವೊಬ್ಬರ ವೀಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಕಾಣುವಂತೆ ಮೈತುಂಬಾ ಭಸ್ಮ ಬಳಿದುಕೊಂಡಿರುವ ನಾಗಸಾಧುವೊಬ್ಬರು ಬಹುಶಃ ದೇಗುಲದ ಕಟ್ಟೆಯೊಂದರಲ್ಲಿ ಸಣ್ಣ ಜೋಳಿಗೆಯೊಂದನ್ನು ಹಿಡಿದು ಕುಳಿತಿದ್ದು, ಅವರಿಗೆ ಒಬ್ಬರು ಹಿರಿಯ ನಾಗರಿಕರು ಭಿಕ್ಷೆ ಹಾಕಿದ್ದಾರೆ. ಈ ವೇಳೆ ಅವರ ತಲೆಗೆ ಕೈ ಇಟ್ಟು ಆಶೀರ್ವಾದ ಮಾಡುವ ನಾಗಸಾಧು ಅವರ ಹಿಂದೆ ಬಂದ ಬಾಲಕಿಗೆ ತನಗೆ ಆಶೀರ್ವಾದ ಮಾಡುವಂತೆ ಹೇಳುತ್ತಾರೆ. ಮೊದಲಿಗೆ ಬಾಲಕಿಗೆ ಕೈ ಮುಗಿದ ನಾಗಸಾಧು ಆ ಬಾಲಕಿಗೆ, ತಮ್ಮ ತಲೆಗೆ ಕೈ ಇಟ್ಟು ಆಶೀರ್ವಾದ ಮಾಡುವಂತೆ ಸನ್ನೆ ಮಾಡಿದ್ದಾರೆ. ಅದರಂತೆ ಬಾಲಕಿಯೂ ಕೂಡ ನಾಗಸಾಧುವಿಗೆ ಕೈ ಮುಗಿದಿದ್ದು, ನಂತರ ನಾಗಸಾಧುವಿನ ತಲೆಗೆ ಕೈ ಇಟ್ಟು ಬಾಲಕಿ ಆಶೀರ್ವಾದ ಮಾಡಿದ್ದಾಳೆ. ಈ ವಿಡಿಯೋ ಈಗ ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಚಿನ್ನ ಅಡವಿಟ್ಟವರಿಗೆ ಗುಡ್ ನ್ಯೂಸ್... ಸಾಲ ಮನ್ನಾ ಬಗ್ಗೆ ಶೀಘ್ರದಲ್ಲೇ ಮಹತ್ವದ ಘೋಷಣೆ?
Aparajite(@amshilparaghu) ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಭಾರಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು, ಹಲವು ಕಾಮೆಂಟ್ ಮಾಡಿದ್ದಾರೆ. ಜನರು ತಮಗೆ ಅನೇಕ ವಿಷಯಗಳು ತಿಳಿದಿವೆ ಎಂದು ಭಾವಿಸುತ್ತಾರೆ, ಆದರೆ ನಾವೆಲ್ಲರೂ ಏನೂ ತಿಳಿಯದ ಸ್ಥಿತಿಗೆ ಬಂದು ಬಿಡುತ್ತೇವೆ. ಭೈರಾಗಿ ಮಗುವನ್ನು ಆಶೀರ್ವದಿಸುವ ಬದಲು, ಆ ಪುಟ್ಟ ಮಗುವಿನ ಆಶೀರ್ವಾದವನ್ನು ಏಕೆ ಪಡೆಯಬೇಕು? ಸಾಮಾನ್ಯ ಕಣ್ಣುಗಳಿಗೆ ತಿಳಿದಿಲ್ಲದ, ಗುಪ್ತವಾದ ಒಂದು ಸತ್ಯವಿರಬೇಕು ಎಂದು ಒಬ್ಬರು ವೀಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ.
ಹೆಣ್ಣು ಮಕ್ಕಳನ್ನು ದೇವರೆಂದು ಪೂಜಿಸಲಾಗುತ್ತದೆ. ಋತುಚಕ್ರಕ್ಕೆ ಕಾಲಿರಿಸದ ಹೆಣ್ಣನ್ನು ಅನೇಕ ಕಡೆಗಳಲ್ಲಿ ಕುಮಾರಿ ದೇವತೆಗಳಾಗಿ ಪೂಜೆ ಮಾಡಲಾಗುತ್ತದೆ. ಬಹುಷ ಅದೇ ದೃಷ್ಟಿಯಿಂದ ಆ ನಾಗುಸಾಧು ಆ ಪುಟ್ಟ ಬಾಲಕಿಯ ಆಶೀರ್ವಾದ ಪಡೆದಿರುವ ಸಾಧ್ಯತೆ ಇದೆ.


