ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಯ ಸಂಚಿನ ಆರೋಪ ಎದುರಿಸುತ್ತಿದ್ದ ಭಾರತ ಮೂಲದ ನಿಖಿಲ್ ಗುಪ್ತಾ, ಅಮೆರಿಕದ ನ್ಯಾಯಾಲಯದಲ್ಲಿ ತನ್ನ ಅಪರಾಧ ಒಪ್ಪಿಗೆ ಈ ಹಿಂದೆ ಆರೋಪಗಳನ್ನು ನಿರಾಕರಿಸಿದ್ದ ಆತನ ಮೇಲೆ ಇದೀಗ ದೋಷಾರೋಪ ಹೊರಿಸಲಾಗಿದ್ದು, ಮೇ 29 ರಂದು ತೀರ್ಪು ಪ್ರಕಟವಾಗಲಿದೆ.

ನ್ಯೂಯಾರ್ಕ್‌ (ಫೆ.15): ಅಮೆರಿಕ/ಕೆನಡಾ ಪ್ರಜೆ ಆಗಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್‌ ಸಿಂಗ್‌ ಪನ್ನು ಹತ್ಯೆಯ ಸಂಚಿನಲ್ಲಿ ತಾನು ಈವರೆಗೂ ಭಾಗಿಯಾಗಿಲ್ಲ ಎಂದು ಭಾರತ ಮೂಲದ ನಿಖಿಲ್ ಗುಪ್ತಾ ಈವರೆಗೆ ನಿರಾಕರಿಸಿದ್ದರೂ. ಹಠಾತ್‌ ವಿದ್ಯಮಾನವೊಂದರಲ್ಲಿ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಸಾರಾ ನೆಟ್‌ಬರ್ನ್‌ ಅವರೆದುರು ಶುಕ್ರವಾರ ತನ್ನ ಅಪರಾಧ ಒಪ್ಪಿಕೊಂಡಿದ್ದಾನೆ.

ಇದರ ಬೆನ್ನಲ್ಲೇ ಆತನ ಮೇಲೆ ದೋಷಾರೋಪ ಹೊರಿಸಲಾಗಿದೆ. ಮೇ 29ರಂದು ಈ ಸಂಬಂಧ ತೀರ್ಪು ಪ್ರಕಟವಾಗಲಿದೆ.

ಭಾರತದ ವಿರುದ್ಧ ಸದಾ ನಾಲಗೆ ಹರಿಬಿಡುತ್ತಾ, ಪ್ರಧಾನಿ ಸೇರಿ ಇಲ್ಲಿನ ನಾಯಕರಿಗೆ ಜೀವಬೆದರಿಕೆ ಒಡ್ಡುತ್ತಿದ್ದ ಪನ್ನು ಹತ್ಯೆಗೆ ಭಾರತದ ಗುಪ್ತಚರ ಸಂಸ್ಥೆ ರಾ ನಿಖಿಲ್‌ ಗಪ್ತಾರನ್ನು ನೇಮಿಸಿಕೊಂಡಿದೆ ಎಂಬ ಸುದ್ದಿ ಈ ಹಿಂದೆ ಸದ್ದು ಮಾಡಿತ್ತು. ಭಾರತ ಹಾಗೂ ಭಾರತದೊಂದಿಗೆ ನಂಟಿರುವವರ ಜತೆ ಸೇರಿಕೊಂಡು ಗುಪ್ತಾ ಪನ್ನು ಹತ್ಯೆಗೆ ಸಂಚು ರೂಪಿಸಿರುವುದಾಗಿ ಆರೋಪಪಟ್ಟಿ, ಕೋರ್ಟ್‌ ದಾಖಲೆ ಹಾಗೂ ಹೇಳಿಕೆಗಳ ಆಧಾರದಲ್ಲಿ ಆರೋಪಿಸಲಾಗಿತ್ತು. ಆದರೆ ಈತ ಭಾರತ ಸರ್ಕಾರದ ನೌಕರ ಅಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿತ್ತು.

ಶಿಕ್ಷೆಯೆಷ್ಟು?:

ಅಮೆರಿಕದ ಕಾನೂನಿನ ಪ್ರಕಾರ, ಸುಪಾರಿ ಕೊಲೆಗೆ 10 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ. ಅದರ ಸಂಚಿಗೂ ಸಮಾನ ಶಿಕ್ಷೆಯಿದೆ. ಅಕ್ರಮ ಹಣ ವರ್ಗಾವಣೆಗೆ ಗರಿಷ್ಠ 20 ವರ್ಷ ಸೆರೆವಾಸದ ಸಜೆ ಕೊಡಲಾಗುವುದು. ಗುಪ್ತಾ ವಿರುದ್ಧ ಮೂರೂ ಆರೋಪಗಳಿವೆ.