ಪುತ್ರ ಶೋಕಂ ನಿರಂತರಂ ಎಂಬ ಶ್ಲೋಕದಂತೆ ಎದೆಯೆತ್ತರಕ್ಕೆ ಬೆಳೆದು ನಿಂತ ಮಕ್ಕಳ ಸಾವಿನ ನೋವು ಪೋಷಕರಿಗೆ ನಿರಂತರ. ತಮ್ಮ ಉಸಿರು ನಿಲ್ಲುವವರೆಗೂ ಅವರು ತಮ್ಮ ಪುತ್ರನನ್ನು ಸ್ಮರಿಸಿ ಕೊರಗುತ್ತಲೇ ಇರುತ್ತಾರೆ. ಅದೇ ರೀತಿ ಇಲ್ಲಿ ಅಪಘಾತದಲ್ಲಿ ಮಗನ ಸಾವನ್ನು ಸಹಿಸಲಾಗದೇ ದಂಪತಿ ಸಾವಿಗೆ ಶರಣಾಗಿದ್ದಾರೆ.
ಮಗನ ಸಾವಿನ ನೋವಿನಿಂದ ಹೊರಬರಲಾಗದೇ ದಂಪತಿ ಸಾವಿಗೆ ಶರಣು:
ಮಗನ ಸಾವಿನಿಂದ ಹೊರಬಾರಲಾಗದೇ ತಂದೆ ತಾಯಿ ಮನೆ ಮುಂದಿನ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಛತ್ತೀಸ್ಗಢದ ಹಳ್ಳಿಯಲ್ಲಿ ನಡೆದಿದೆ. ಪುತ್ರ ಶೋಕಂ ನಿರಂತರಂ ಎಂಬ ಶ್ಲೋಕದಂತೆ ಎದೆಯೆತ್ತರಕ್ಕೆ ಬೆಳೆದು ನಿಂತ ಮಕ್ಕಳ ಸಾವಿನ ನೋವು ಪೋಷಕರಿಗೆ ನಿರಂತರವಾಗಿರುತ್ತದೆ. ತಮ್ಮ ಉಸಿರು ನಿಲ್ಲುವವರೆಗೂ ಅವರು ತಮ್ಮ ನಡುವೆ ಅಗಲಿ ಹೋದ ಪುತ್ರನನ್ನು ಸ್ಮರಿಸಿ ಕೊರಗುತ್ತಲೇ ಇರುತ್ತಾರೆ. ಅದೇ ರೀತಿ ಇಲ್ಲಿ ಅಪಘಾತದಲ್ಲಿ ಈ ದಂಪತಿಯ ಪುತ್ರ ಹಠಾತ್ ಸಾವನ್ನಪ್ಪಿದ್ದ 2024ರಲ್ಲಿ ಈ ದುರಂತ ನಡೆದಿತ್ತು. ಒಬ್ಬನೇ ಮಗನ ಸಾವಿನ ನಂತರ ಪೋಷಕರು ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲೇ ಇಲ್ಲ, ಹೀಗಾಗಿ ಮಗನ ನೋವಿನಲ್ಲೇ ಅವರು ಸಾವಿಗೆ ಶರಣಾಗಿದ್ದಾರೆ.
ಹೌದು ಛತ್ತೀಸ್ಗಢದ ಜಂಜ್ಗೀರ್-ಚಂಪಾ ಜಿಲ್ಲೆಯ ಶಿವರಿನಾರಾಯಣ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಾವಿಗೂ ಮೊದಲು ದಂಪತಿ 4 ಪುಟಗಳ ಡೆತ್ನೋಟ್ ಬರೆದು ಜೊತೆಗೆ ವಿಡಿಯೋ ಸಂದೇಶವನ್ನು ಕೂಡ ಕಳುಹಿಸಿದ್ದಾರೆ. ವೃತ್ತಿಯಲ್ಲಿ ಮೇಸ್ತ್ರಿ ಆಗಿದ್ದ 48 ವರ್ಷದ ಕೃಷ್ಣ ಹಾಗೂ 47 ವರ್ಷದ ಗೃಹಿಣಿ ರಮಾ ಬಾಯಿ ಅವರ ಏಕೈಕ ಪುತ್ರ ಆದಿತ್ಯ ಪಟೇಲ್ 2024 ರಲ್ಲಿ ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ದಂಪತಿಯ ಪಾಲಿಗೆ ತಮ್ಮ ಪುತ್ರ ತಮ್ಮ ಪಾಲಿನ ಪ್ರಪಂಚ ಆಗಿದ್ದ. ತಾವು ಬರೆದ ಡೆತ್ನೋಟ್ನಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ. ಆದಿತ್ಯ ನಮ್ಮ ಜೀವನದ ಅಡಿಪಾಯ, ನಮ್ಮ ಜಗತ್ತು, ಆತ ನಮ್ಮ ವಿಧೇಯ ಮಗ ಮತ್ತು ಸ್ನೇಹಿತ, ಆತ ನಮ್ಮ ಮನೆಯನ್ನು ನಗುವಿನಿಂದ ತುಂಬಿದ ಮತ್ತು ಪೋಷಕರಂತೆ ಅವರನ್ನು ನೋಡಿಕೊಂಡ ಅವನು ನಮ್ಮ ಪಾಲಿಗೆ ಸಿಕ್ಕ ದೇವರ ಆಶೀರ್ವಾದ ಎಂದು ಅವರು ವಿವರಿಸಿದ್ದಾರೆ.
ಆದರೆ ಅಪಘಾತದಲ್ಲಿ ಆದಿತ್ಯನ ಸಾವಿನ ನಂತರ ಮನೆ ಸ್ತಬ್ಧವಾಯಿತು. ಆದಿತ್ಯ ಸಾವನ್ನಪ್ಪುವುದಕ್ಕೂ ಮೊದಲು ದೇವಸ್ಥಾನದ ಕೆಲಸ ಮತ್ತು ಯಜ್ಞಕ್ಕೆ ಸಹಾಯ ಮಾಡಲು ಗ್ರಾಮದ ಪುರೋಹಿತರೊಂದಿಗೆ ಹೊರಗೆ ಹೋದ ದಿನದ ಬಗ್ಗೆ ಕೃಷ್ಣ ಬರೆದಿದ್ದು, ಆತ ಅಂದು ಆ ಕೆಲಸಕ್ಕೆ ಹೋಗುವುದಕ್ಕೆ ಹಿಂಜರಿದಿದ್ದ. ಆರೂ ನಾನು ಅದು ದೇವರ ಕೆಲಸ ಎಂದು ಒತ್ತಾಯಿಸಿದೆ. ಅದೇ ನಾನು ನನ್ನ ಜೀವನದಲ್ಲಿ ಮಾಡಿದ ಅತೀ ದೊಡ್ಡ ತಪ್ಪು ಎಂದು ಅವರು ಹೇಳಿದ್ದಾರೆ. ಅವನು ನನ್ನನ್ನು ಶಾಶ್ವತವಾಗಿ ತೊರೆದ. ಆತ ತೊರೆದು ಹೋದ ಮೇಲೆ ನಾವು ಜೀವಂತವಾಗಿದ್ದೆವು ಆದರೆ ಬದುಕಿರಲಿಲ್ಲ ಎಂದು ಅವರು ಡೆತ್ನೋಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಬಕೆಟ್ನಲ್ಲಿ ಹೀಟರ್ ಇಟ್ಟು ಸ್ನಾನಕ್ಕೆ ನೀರು ಬಿಸಿ ಮಾಡುವಾಗ ಕರೆಂಟ್ ಶಾಕ್: 7ನೇ ಕ್ಲಾಸ್ ಬಾಲಕ ಸಾವು
ಹೀಗೆ ಮಗನ ಸಾವಿನಿಂದ ತೀವ್ರ ನೊಂದು ಸಾವಿಗೆ ಶರಣಾಗಿರುತ್ತಿರುವುದಾಗಿ ಡೆತ್ ನೋಟ್ ಬರೆದಿರುವ ದಂಪತಿ ನಂತರ ಭಾನುವಾರ ತಡರಾತ್ರಿ ತಮ್ಮ ಮನೆಯ ಅಂಗಳದಲ್ಲಿರುವ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರದ ಬಳಿ ಇದ್ದ ಗೋಡೆಯ ಸಹಾಯದಿಂದ ಮರಕ್ಕೆ ನೇಣು ಬಿಗಿದುಕೊಂಡು ದಂಪತಿ ಸಾವು ಕಂಡಿದ್ದಾರೆ ಎಂದು ರಹೌದ್ ಹೊರಠಾಣೆ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ..
ಘಟನಾ ಸ್ಥಳದಲ್ಲಿ ಆತ್ಮ*ಹತ್ಯೆ ಪತ್ರ ಪತ್ತೆಯಾಗಿದೆ ಎಂದು ಹೊರ ಠಾಣೆ ಉಸ್ತುವಾರಿ ಸತ್ಯಂ ಚೌಹಾಣ್ ತಿಳಿಸಿದ್ದಾರೆ. ತಮ್ಮ ಏಕೈಕ ಮಗನನ್ನು ಕಳೆದುಕೊಂಡ ನಂತರ ದುಃಖ ಸಹಿಸಲಾಗದೇ ದಂಪತಿ ಸಾವಿನ ಹಾದಿ ಹಿಡಿದಿದ್ದಾರೆ. ಕಳೆದ ವರ್ಷದಿಂದ, ದಂಪತಿಗಳು ಖಿನ್ನತೆಗೆ ಜಾರಿದ್ದರು. ಬಹಳ ವಿರಳವಾಗಿ ನಗುತ್ತಿದ್ದರು ಎಂದು ಗ್ರಾಮದವರು ಹೇಳಿದ್ದಾರೆ. ಆದಿತ್ಯ ತಂದೆ ಕೃಷ್ಣ ತನ್ನ ಅಂತಿಮ ಮಾತುಗಳಲ್ಲಿ, ಒಂದು ವರ್ಷದ ನೋವಿನ ನಂತರವೂ ಅವರ ದುಃಖ ಮಾಯವಾಗಿರಲಿಲ್ಲ ಅದು ಸರಳವಾಗಿ ರೂಪಾಂತರಗೊಂಡಿತ್ತು. ದೇವರು ದಯಾಳು, ದೀರ್ಘಕಾಲದ ನೋವಿನ ನಂತರ, ನನ್ನ ಮನಸ್ಸು ಈಗ ಶಾಂತವಾಗಿದೆ. ನಾನು ಅವನ ಕಡೆಗೆ ಆಕರ್ಷಿತನಾಗಿದ್ದೇನೆ. ದೇವರೊಂದಿಗೆ ವಿಲೀನವಾಗುವುದು ನನ್ನ ಧ್ಯೇಯವಾಗಿದೆ. ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ: ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಯುವತಿಯರು ಹಿಂದೂ ಸೋದರರನ್ನು ಮದುವೆಯಾಗಿ ಪತ್ತೆ
ನೇಣು ಹಾಕಿಕೊಳ್ಳುವ ಮೊದಲು, ಕೃಷ್ಣ ಮತ್ತು ರಮಾ ಬಾಯಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಅದರಲ್ಲಿ ಅವರು ತಮ್ಮ ವಕೀಲರಿಗೆ ಕೆಲ ಸಲಹೆ ನೀಡಿದ್ದು, ಆದಿತ್ಯನ ಅಪಘಾತದ ನಂತರ ಬಂದ ಪರಿಹಾರದ ಹಣವನ್ನು ತಮ್ಮ ಹಿರಿಯ ಸಹೋದರರಾದ ಕುಲಭರ ಪಟೇಲ್ ಮತ್ತು ಜಲಭರ ಪಟೇಲ್ಗೆ ವರ್ಗಾಯಿಸಬೇಕೆಂದು ಅವರು ವಿನಂತಿಸಿದರು. ನಾವು ಇನ್ನು ಮುಂದೆ ಜೀವಂತವಾಗಿರುವುದಿಲ್ಲ, ದಯವಿಟ್ಟು ನಮ್ಮ ಮಗ ಆದಿತ್ಯನ ಅಪಘಾತ ವಿಮೆ ಹಣ ನಮ್ಮ ಅಣ್ಣಂದಿರಿಗೆ ಹೋಗುವಂತೆ ನೋಡಿಕೊಳ್ಳಿ. ಇದು ನಮ್ಮ ವಿನಂತಿ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.
ನಾವು ಪ್ರಜ್ಞಾಪೂರ್ವಕವಾಗಿ ಮತ್ತು ಸ್ವಇಚ್ಛೆಯಿಂದ ನಮ್ಮನ್ನು ಶಿವನಿಗೆ ಅರ್ಪಿಸಿಕೊಳ್ಳುತ್ತಿದ್ದೇವೆ. ಇದಕ್ಕೆ ಯಾರೂ ಹೊಣೆಯಲ್ಲ. ದಯವಿಟ್ಟು ಸಂತೋಷದ ಹೃದಯದಿಂದ ನಮಗೆ ವಿದಾಯ ಹೇಳಿನಮಗಾಗಿ ದುಃಖಿಸಬೇಡಿ. ನಾವು ಈ ಲೋಕವನ್ನು ಸಂಪೂರ್ಣ ಶಾಂತಿಯಿಂದ, ಆಸೆಯಿಲ್ಲದೆ ಮತ್ತು ಸಂತೋಷದ ಮನೋಭಾವದಿಂದ ಬಿಡುತ್ತಿದ್ದೇವೆ ಎಂದು ಅವರು ಡೆತ್ನೋಟ್ನಲ್ಲಿ ಬರೆದಿದ್ದಾರೆ.


