ಪಂಜಾಬ್ನ ಕಾಲೇಜೊಂದರಲ್ಲಿ, ಕಾನೂನು ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ತರಗತಿಯಲ್ಲೇ ಗುಂಡಿಕ್ಕಿ ತಾನು ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಈ ಭಯಾನಕ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಂಜಾಬ್ನಲ್ಲಿ ಕ್ಲಾಸ್ಮೇಟ್ಗೆ ಗುಂಡಿಕ್ಕಿದ ವಿದ್ಯಾರ್ಥಿ
ಪಂಜಾಬ್ನಲ್ಲಿ ಇತ್ತೀಚೆಗೆ ಗುಂಡಿಕ್ಕಿ ಹತ್ಯೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ತರಗತಿ ಕೊಠಡಿಯೊಳಗೆ ಪಿಸ್ತೂಲ್ ತಂದ ಕಾನೂನು ವಿದ್ಯಾರ್ಥಿಯೊಬ್ಬ ತನ್ನ ಕ್ಲಾಸ್ಮೇಟ್ ಯುವತಿಗೆ ಗುಂಡಿಕ್ಕಿ ಬಳಿಕ ತಾನು ಗುಂಡಿಕ್ಕಿಕೊಂಡು ಸಾವಿಗೆ ಶರಣಾಗಿದ್ದಾರೆ. ಪಂಜಾಬ್ನ ತರಣ್ ತರಣ್ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು 20 ವರ್ಷದ ಸಂದೀಪ್ ಕೌರ್ ಎಂದು ಗುರುತಿಸಲಾಗಿದೆ. ಆರೋಪಿ ಅಭಿರಾಜ್ ಸಿಂಗ್ ಕೊಲೆ ಮಾಡಿದ ಆರೋಪಿ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಪಿಸ್ತೂಲ್ನೊಂದಿಗೆ ಕ್ಲಾಸ್ಗೆ ಬಂದ ಅಭಿರಾಜ್ ಅಲ್ಲಿ ಬೆಂಚ್ ಮೇಲೆ ಸ್ನೇಹಿತೆ ಜೊತೆ ಕುಳಿತಿದ್ದ ಮಹಿಳಾ ಕ್ಲಾಸ್ಮೇಟ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ನಂತರ ಅದೇ ಜಾಗದಲ್ಲಿ ತನಗೂ ಗುಂಡು ಹಾರಿಸಿಕೊಂಡು ಆತ ಸಾವಿಗೆ ಶರಣಾಗಿದ್ದಾನೆ. ಕೆಲ ಸೆಕೆಂಡುಗಳಲ್ಲಿ ಈ ದುರಂತ ನಡೆದಿದ್ದು, ಘಟನೆಯಿಂದಾಗಿ ತರಗತಿ ಕೊಠಡಿ ಹಾಗೂ ಕಾಲೇಜು ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯ್ತು.
ಹತ್ಯೆಯಾದ ಸಂದೀಪ್ ಕೌರ್ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿನಿಯಾಗಿದ್ದಳು. ಆರೋಪಿ ಅಭಿರಾಜ್ ಸಿಂಗ್ ಕೂಡ ಅದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಘಟನೆಯ ಬಳಿಕ ಪೊಲೀಸರು ಇಡೀ ಕ್ಯಾಂಪಸ್ ಅನ್ನು ಸೀಲ್ ಮಾಡಿ ತನಿಖೆ ಆರಂಭಿಸಿದ್ದಾರೆ. ಪೊಲೀಸರ ಪ್ರಕಾರ, ಘಟನೆಯ ಹಿಂದಿನ ಉದ್ದೇಶ ಸಂಪೂರ್ಣವಾಗಿ ತಿಳಿದುಬಂದಿಲ್ಲ. ಪ್ರಾಥಮಿಕ ವರದಿಗಳ ಪ್ರಕಾರ ಇದು ಒನ್ಸೈಡ್ ಲವ್ನ ಕಾರಣದಿಂದ ಆಗಿರಬಹುದು. ವಿದ್ಯಾರ್ಥಿನಿ ತನ್ನ ಭಾವನೆಗಳಿಗೆ ಸ್ಪಂದಿಸದಿದ್ದಾಗ ಪುರುಷ ವಿದ್ಯಾರ್ಥಿ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಘಟನೆಯ ನಂತರ ಸ್ಥಳಕ್ಕಾಗಮಿಸಿದ ಪೋಷಕರು, ಇಲ್ಲಿ ಮಕ್ಕಳಿಗೆ ಭದ್ರತೆ ಇಲ್ಲ. ಪಿಸ್ತೂಲ್ ಹಿಡಿದು ಒಬ್ಬ ವಿದ್ಯಾರ್ಥಿ ಕಾಲೇಜಿನೊಳಗೆ ಬಂದರೂ ಯಾರೂ ಗಮನಿಸಲಿಲ್ಲ ಎಂದು ಆರೋಪಿಸಿದ್ದಾರೆ. ಯುವತಿಯ ತಾಯಿಗೆ ಯುವತಿಗೆ ಜಗಳದಲ್ಲಿ ಸಣ್ಣ ಗಾಯವಾಗಿದೆ ಎಂದು ಹೇಳಿ ಸ್ಥಳಕ್ಕೆ ಕರೆಸಿದರು. ಆದರೆ ಇಲ್ಲಿ ಬಂದು ನೋಡಿದಾಗ ಆಕೆಯ ತಲೆ ಸೀಳಿದೆ. ಹುಡುಗಿಗೆ ಗುಂಡು ಹಾರಿಸಲಾಗಿದೆ. ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಹುಡುಗಿಯ ದೇಹವು ಸಂಪೂರ್ಣವಾಗಿ ರಕ್ತದಲ್ಲಿ ಮುಳುಗಿತ್ತು. ಅವಳ ಮೆದುಳಿಗೆ ಗುಂಡು ಹಾರಿಸಲಾಗಿತ್ತು. ಪೊಲೀಸರು ನಮ್ಮನ್ನು ದೇಹದ ಬಳಿಗೆ ಹೋಗಲು ಬಿಡುತ್ತಿಲ್ಲ. ಮೃತ ವಿದ್ಯಾರ್ಥಿನಿಯ ತಂದೆ ಈಗಾಗಲೇ ನಿಧನರಾಗಿದ್ದಾರೆ. ಆಕೆಗೆ 6 ಸಹೋದರಿಯರು ಮತ್ತು ಒಬ್ಬ ಕಿರಿಯ ಸಹೋದರ ಇದ್ದಾರೆ ಎಂದು ಮೃತಪಟ್ಟ ಯುವತಿಯ ಸಂಬಂಧಿಕರು ದೂರಿದ್ದಾರೆ.
ಇದನ್ನೂ ಓದಿ: ಬೆಚ್ಚಗಾಗಲು ಇನ್ಕ್ಯುಬೇಟರ್ಲ್ಲಿಟ್ಟ ಮಗು ಸಜೀವ ದಹನ; ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಆಗಷ್ಟೇ ಜನಿಸಿದ ನವಜಾತ ಶಿಶು ಸಾವು
ಹುಡುಗಿಯ ತಾಯಿ ಹರ್ಜಿಂದರ್ ಕೌರ್ ಮಾತನಾಡಿ ಬೆಳಗ್ಗೆ ಮಗಳು ಮನೆಯಿಂದ ಚೆನ್ನಾಗಿ ಸಿದ್ಧಳಾಗಿ ಬಂದಿದ್ದಾಳೆ. ನನ್ನ ಮಗಳು ಸಂದೀಪ್ ಕೌರ್ ಯಾರೊಂದಿದಾದರೂ ಜಗಳವಾಡಿದ್ದಾಳೆಯೇ ಎಂದು ತಿಳಿದಿಲ್ಲ. ಮೇಡಂ ಕರೆ ಮಾಡಿ ನಿಮ್ಮ ಮಗಳು ತೀವ್ರವಾಗಿ ಗಾಯಗೊಂಡಿದ್ದಾಳೆ, ಬೇಗ ಬಾ ಎಂದು ಹೇಳಿದರು. ನಾನು ಕಾಲೇಜಿಗೆ ಬಂದಾಗ, ನನ್ನ ಮಗಳು ಮೃತಪಟ್ಟಿದ್ದಾಳೆಂದು ಗೊತ್ತಾಯ್ತು ಆ ಹುಡುಗ ತರಣ್ ತರಣ್ನವನು ಎಂದು ನಮಗೆ ತಿಳಿದು ಬಂದಿದೆ. ಪಿಸ್ತೂಲ್ ಕೂಡ ಒಳಗೆ ಬಿದ್ದಿರುವುದು ಕಂಡುಬಂದಿದೆ ಎಂದು ಹೇಳಿದರು.
ಎಸಿಪಿ ಜಗ್ಬೀರ್ ಮಾತನಾಡಿ, ಹುಡುಗಿ ಬೆಂಚಿನ ಮೇಲೆ ಕುಳಿತಿದ್ದಳು. ತರಗತಿ ಇನ್ನೂ ಪ್ರಾರಂಭವಾಗಿರಲಿಲ್ಲ. ಗುಂಡು ಹಾರಿಸಿದ ತಕ್ಷಣ ಹುಡುಗಿ ಸಾವನ್ನಪ್ಪಿದಳು. ಹುಡುಗ ಕೂಡ ಗುಂಡು ಹಾರಿಸಿಕೊಂಡ, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವನು ಕೂಡ ಸಾವನ್ನಪ್ಪಿದನು. ಆರೋಪಿ ಯುವಕ ಪಿಸ್ತೂಲ್ ಅನ್ನು ಎಲ್ಲಿಂದ ತಂದಿದ್ದಾನೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತನ ತಂದೆಗೆ ಪರವಾನಗಿ ಪಡೆದ ಪಿಸ್ತೂಲ್ ಇದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇಲ್ಲದಿದ್ದರೆ, ಈ ಪಿಸ್ತೂಲ್ ಅಕ್ರಮವಾಗಿರಬಹುದು. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಏರ್ಪೋರ್ಟ್ನಲ್ಲಿ ಪ್ರಯಾಣಿಕನ ಚಡ್ಡಿ ಕತ್ತರಿಸಿ 50 ಲಕ್ಷ ಮೌಲ್ಯದ ಚಿನ್ನ ಹೊರತೆಗೆದ ಕಸ್ಟಮ್ಸ್ ಅಧಿಕಾರಿಗಳು
