15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್, ತನ್ನ ತೀರ್ಪನ್ನು ಪ್ರಶ್ನಿಸಿದ ಕೇಂದ್ರ ಸರ್ಕಾರದ ಅರ್ಜಿಯನ್ನು ತೀವ್ರವಾಗಿ ಖಂಡಿಸಿದೆ. ಮಹಿಳೆಯರ ವೈಯಕ್ತಿಕ ಆಯ್ಕೆ ಮತ್ತು ದೇಹದ ಮೇಲಿನ ಹಕ್ಕನ್ನು ಗೌರವಿಸಬೇಕು ಎಂದು ನ್ಯಾಯಾಲಯ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ.

ನವದೆಹಲಿ (ಏ.30): ಅ*ತ್ಯಾಚಾರಕ್ಕೊಳಗಾಗಿ 31 ವಾರಗಳ ಗರ್ಭಿಣಿಯಾಗಿದ್ದ 15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ 'ಕ್ಯುರೇಟಿವ್' ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತೀವ್ರವಾಗಿ ಖಂಡಿಸಿದೆ. "ನಾವು ವೈಯಕ್ತಿಕ ಆಯ್ಕೆಗಳನ್ನು ಗೌರವಿಸುತ್ತೇವೆ, ನೀವೂ ಅದನ್ನು ಗೌರವಿಸಬೇಕು" ಎಂದು ನ್ಯಾಯಾಲಯ ಸರ್ಕಾರಕ್ಕೆ ಚಾಟಿ ಬೀಸಿದೆ. ತಮ್ಮ ದೇಹದ ಮೇಲೆ ಮಹಿಳೆಯರಿಗೆ ಇರುವ ಹಕ್ಕಿನ ಕುರಿತಾದ ಈ ಐತಿಹಾಸಿಕ ಹೋರಾಟದಲ್ಲಿ, ನ್ಯಾಯಾಲಯವು ಬಾಲಕಿ ಮತ್ತು ಆಕೆಯ ಕುಟುಂಬದ ನಿರ್ಧಾರವೇ ಅಂತಿಮ ಎಂದು ಸಾರಿದೆ.

ಕಾಯ್ದೆಗಳಲ್ಲಿ ಬದಲಾವಣೆ ತರಲು ಸೂಚನೆ

ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಕಾಲಮಿತಿಯನ್ನು ಹೇರುವ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬದಲಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. "ಅ*ತ್ಯಾಚಾರದಿಂದ ಗರ್ಭಧಾರಣೆಯಾದಾಗ ಯಾವುದೇ ಕಾಲಮಿತಿ ಇರಬಾರದು. ಕಾನೂನು ಎಂಬುದು ಕಾಲಕ್ಕೆ ತಕ್ಕಂತೆ ಬದಲಾಗುವ ಮತ್ತು ಜೀವಂತವಾಗಿರುವ ವ್ಯವಸ್ಥೆಯಾಗಿರಬೇಕು," ಎಂದು ಪೀಠವು ಅಭಿಪ್ರಾಯಪಟ್ಟಿದೆ.

ಸರ್ಕಾರದ ಪರ ವಕೀಲರಿಗೆ ಸಿಜೆಐ ಛೀಮಾರಿ

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಅಡಿಷನಲ್ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರಿಗೆ ಕಟುವಾದ ಶಬ್ದಗಳಿಂದ ಎಚ್ಚರಿಸಿದರು. 'ಅ*ತ್ಯಾಚಾರದ ನಂತರ ಆ ಮಗು ಅನುಭವಿಸಿದ ಯಾತನೆಯನ್ನು ಯಾವುದೂ ಸರಿದೂಗಿಸಲು ಸಾಧ್ಯವಿಲ್ಲ. ನಾಗರಿಕರಿಗೆ ಗೌರವ ನೀಡಿ ಮೇಡಂ," ಎಂದು ಸಿಜೆಐ ಗುಡುಗಿದರು. ಕೋರ್ಟ್ ಆದೇಶವನ್ನು ಪ್ರಶ್ನಿಸಲು ನಿಮಗೆ ಯಾವುದೇ ಹಕ್ಕಿಲ್ಲ (Locus standi). ಇದನ್ನು ಸಂತ್ರಸ್ತೆ ಅಥವಾ ಆಕೆಯ ಕುಟುಂಬ ಮಾತ್ರ ಪ್ರಶ್ನಿಸಬಹುದು ಎಂದರು.

ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರು ಮಾತನಾಡಿ, "ಪೋಷಕರಿಗೆ ಆರೋಗ್ಯದ ಅಪಾಯಗಳ ಬಗ್ಗೆ ಮಾಹಿತಿ ನೀಡಿ, ಅವರೇ ನಿರ್ಧರಿಸಲಿ. ಮಗುವಿನ ಮಾನಸಿಕ ಆರೋಗ್ಯ ಮುಖ್ಯ ಎಂದು ಅವರು ಭಾವಿಸಿದರೆ ಅದು ಅವರ ಆಯ್ಕೆ. ಜನರ ಪರವಾಗಿ ನೀವೇ ನಿರ್ಧಾರ ತೆಗೆದುಕೊಳ್ಳಬೇಡಿ," ಎಂದು ತಿಳಿಸಿದರು.

ಸರ್ಕಾರದ ವಾದವೇನಿತ್ತು?

ಸರ್ಕಾರದ ಪರ ಹಾಜರಿದ್ದ ಭಾಟಿ ಅವರು, "ಏಮ್ಸ್ (AIIMS) ವರದಿಯ ಪ್ರಕಾರ ಈಗ ಗರ್ಭಪಾತ ಮಾಡುವುದು ಅಸಾಧ್ಯ. ಇದು ಗಂಭೀರ ಅಂಗವೈಕಲ್ಯವಿರುವ ಮಗುವಿನ ಜನನಕ್ಕೆ ಕಾರಣವಾಗಬಹುದು ಮತ್ತು ಅಪ್ರಾಪ್ತ ತಾಯಿಯ ಆರೋಗ್ಯದ ಮೇಲೆ ಜೀವನಪರ್ಯಂತ ಪರಿಣಾಮ ಬೀರಬಹುದು. ಆದ್ದರಿಂದ ಮಗುವನ್ನು ಹೆತ್ತು ದತ್ತು ನೀಡುವುದು ಸಂತ್ರಸ್ತೆಯ ಹಿತದೃಷ್ಟಿಯಿಂದ ಒಳ್ಳೆಯದು. ಕೇವಲ ನಾಲ್ಕು ವಾರಗಳಷ್ಟೇ ಬಾಕಿ ಇದೆ," ಎಂದು ವಾದಿಸಿದರು.

ನೈತಿಕತೆಗಿಂತ ನ್ಯಾಯ ಮುಖ್ಯ ಎಂದ ಕೋರ್ಟ್

ಸರ್ಕಾರದ ವಾದವನ್ನು ತಳ್ಳಿಹಾಕಿದ ಸಿಜೆಐ ಸೂರ್ಯ ಕಾಂತ್, ಇದು ಮಗು ಮತ್ತು ಭ್ರೂಣದ ನಡುವಿನ ಹೋರಾಟವಾದರೆ, ಆ ಮಗು ಘನತೆಯಿಂದ ಬದುಕಲು ಅವಕಾಶ ನೀಡಬೇಕು. ನ್ಯಾಯಕ್ಕಾಗಿ ಕಾನೂನು ಕ್ರೂರವಾಗಬೇಕಾದರೂ ಸರಿ ಎಂದರು. ಇದು ಆಕೆ ಕನಸು ಕಾಣಬೇಕಾದ ವಯಸ್ಸು, ಆದರೆ ನಾವು ಆಕೆಯನ್ನು ತಾಯಿಯನ್ನಾಗಿ ಮಾಡಲು ಹೊರಟಿದ್ದೇವೆಯೇ? ಆಕೆ ಅನುಭವಿಸಿದ ನೋವು ಮತ್ತು ಅವಮಾನವನ್ನು ಕಲ್ಪಿಸಿಕೊಳ್ಳಿ," ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತು.

ಜೀವಿಸುವ ಹಕ್ಕಿನ ಉಲ್ಲಂಘನೆ

ಕಳೆದ ವಾರವಷ್ಟೇ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠವು ಸಂತ್ರಸ್ತೆಗೆ ಗರ್ಭಪಾತಕ್ಕೆ ಅನುಮತಿ ನೀಡಿತ್ತು. ಮಗುವನ್ನು ಹೆರುವಂತೆ ಒತ್ತಾಯಿಸುವುದು ಆಕೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಮತ್ತು ಮಹಿಳೆಯ ಪ್ರಜನನ ಸ್ವಾಯತ್ತತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ನ್ಯಾಯಾಲಯ ಹೇಳಿತ್ತು. ಸಂತ್ರಸ್ತ ಬಾಲಕಿಯು ಈಗಾಗಲೇ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಆಕೆಯ ಶಿಕ್ಷಣ ಮತ್ತು ಮಾನಸಿಕ ಸ್ಥಿತಿ ಹದಗೆಟ್ಟಿದೆ ಎಂಬ ಅಂಶವನ್ನು ಪೀಠವು ಗಂಭೀರವಾಗಿ ಪರಿಗಣಿಸಿತ್ತು. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜುಲೈ 14ಕ್ಕೆ ನಿಗದಿಪಡಿಸಿದೆ.