ವಿಜಯಪುರದಲ್ಲಿ ಮಹಾಶಿವರಾತ್ರಿ ಜಾಗರಣೆಗಾಗಿ ಕುಟುಂಬವೊಂದು ಹೊರಗೆ ತೆರಳಿದ್ದಾಗ, ಕಳ್ಳರು ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗದು, ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ. ಶಾರದಾ ನಗರದಲ್ಲಿ ನಡೆದ ಈ ಘಟನೆ ಸಂಬಂಧ ಗೋಲಗುಂಬಜ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯಪುರ: ಮಹಾಶಿವರಾತ್ರಿ ಜಾಗರಣೆಯ ಸಂಭ್ರಮವನ್ನು ದುರುಪಯೋಗಪಡಿಸಿಕೊಂಡ ಕಳ್ಳರು, ಕುಟುಂಬದವರು ಹೊರಗೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡು ಮನೆ ಕಳ್ಳತನ ನಡೆಸಿರುವ ಘಟನೆ ವಿಜಯಪುರ ನಗರದಲ್ಲಿ ವರದಿಯಾಗಿದೆ. ವಿಜಯಪುರ ನಗರದ ಶಾರದಾ ನಗರ ಪ್ರದೇಶದಲ್ಲಿರುವ ಸೋಮಶೇಖರ ಗಣಿ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.

ಮಹಾಶಿವರಾತ್ರಿ ಜಾಗರಣೆಗೆಂದು ಸೋಮಶೇಖರ ಗಣಿ ಕುಟುಂಬದ ಎಲ್ಲರೂ ಮನೆಗೆ ಬೀಗ ಹಾಕಿ ಶಿವಗಿರಿಗೆ ತೆರಳಿದ್ದರು. ಇದೇ ವೇಳೆ ಇಂಡಿಯಾ–ಪಾಕಿಸ್ತಾನ ಟಿ20 ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ಕಾರಣ, ಬೀದಿಗಳಲ್ಲೂ ಜನರ ಓಡಾಟ ಕಡಿಮೆಯಾಗಿತ್ತು. ಈ ಪರಿಸ್ಥಿತಿಯನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾರೆ.

ಕಳ್ಳರು ಮನೆಯಲ್ಲಿ ಇರಿಸಿದ್ದ ₹40,000 ನಗದು, ಸುಮಾರು 154 ಗ್ರಾಂ ಚಿನ್ನಾಭರಣ ಹಾಗೂ 270 ಗ್ರಾಂ ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಕುಟುಂಬದವರು ಮನೆಗೆ ಹಿಂದಿರುಗಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಘಟನೆ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆಯೇ ಗೋಲಗುಂಬಜ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳ್ಳತನ ನಡೆದ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೂಕ್ಷ್ಮ ಪರಿಶೀಲನೆ ಕೈಗೊಳ್ಳಲಾಗಿದ್ದು, ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನದಳದಿಂದಲೂ ಸಾಕ್ಷ್ಯ ಸಂಗ್ರಹ ಕಾರ್ಯ ನಡೆಸಲಾಗಿದೆ.

ಈ ಘಟನೆ ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಹಬ್ಬ-ಹರಿದಿನಗಳ ಸಂದರ್ಭಗಳಲ್ಲಿ ಮನೆ ಬಿಟ್ಟು ಹೊರಗೆ ತೆರಳುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.

ಕೊಪ್ಪಳದಲ್ಲಿ ಬುರ್ಖಾ ಧರಿಸಿದ ಮಹಿಳೆಯರಿಂದ ಚಿನ್ನ ಕಳವು

ಕೊಪ್ಪಳ: ನಗರದ ಜವಾಹರ್ ರಸ್ತೆಯ ವಿಶಾಲ್ ಜ್ಯುವೆಲರಿಯಲ್ಲಿ ಬುರ್ಖಾಧಾರಿಗಳಾಗಿ ಬಂದು ಇಬ್ಬರು ಮಹಿಳೆಯರು ₹40000 ಮೌಲ್ಯದ ಜುಮಕಿ ಕದ್ದ ಘಟನೆ ಜರುಗಿದೆ. ಮಹಿಳೆಯರು ಜುಮಕಿ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದು, ಮಾಲಿಕರು ಜುಮಕಿ ತೋರಿಸುವಾಗ ಬುರ್ಖಾಧಾರಿ ಮಹಿಳೆಯೊಬ್ಬರು ಅಂಗಡಿಯವರ ಗಮನ ಸೆಳೆದಿದ್ದು, ಇನ್ನೊಬ್ಬ ಮಹಿಳೆ ಜುಮಕಿ ಎಗರಿಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಳ್ಳತನ ಮಾಡಿದ ತಕ್ಷಣವೇ ಆ ಇಬ್ಬರೂ ಮಹಿಳೆಯರು ಅಲ್ಲಿಂದ ಪಲಾಯನಗೈದಿದ್ದಾರೆ. ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು: ಬೈಕ್ ಸೇರಿ 1.50 ಲಕ್ಷ ರು. ಬೆಲೆಬಾಳುವ ವಸ್ತುಗಳ ಜಪ್ತಿ

ಸಿಂಧನೂರು: ಇಲ್ಲಿನ ಗ್ರಾಮೀಣ ಹಾಗೂ ತುರ್ವಿಹಾಳ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಮೂರು ಕಳ್ಳತನ ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಕಳ್ಳರನ್ನು ಬಂಧಿಸಿ, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್.ಜೆ.ಕುಮಾರ ಸ್ವಾಮಿ ಹಾಗೂ ಹರೀಶ್ ಅವರ ಮಾರ್ಗದರ್ಶನದಲ್ಲಿ ಸಿಂಧನೂರು ಡಿವೈಎಸ್ಪಿ ಚಂದ್ರಶೇಖರ ಜಿ. ನೇತೃತ್ವದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ವಿನಾಯಕ, ಗ್ರಾಮೀಣ ಪೊಲೀಸ್ ಠಾಣೆಯ ಸಬ್ಇನ್ಸ್‌ಪೆಕ್ಟರ್ ಮೌನೇಶ ರಾಠೋಡ್, ಬಳಗಾನೂರು ಪೊಲೀಸ್ ಠಾಣೆಯ ಸಬ್ಇನ್ಸ್‌ಪೆಕ್ಟರ್ ಎರಿಯಪ್ಪ ಅಂಗಡಿ, ತುರ್ವಿಹಾಳ ಪೊಲೀಸ್ ಠಾಣೆಯ ಸಬ್ಇನ್ಸ್‌ಪೆಕ್ಟರ್ ಸುಜಾತ, ಸಿಬ್ಬಂದಿ ದೌಲತ್ಸಾಬ್, ಗೋಪಾಲ, ಬಸವರಾಜ, ಅಫೀಜುಲ್ಲಾ, ಅಮರೇಶ, ಮಹೇಶಬಾಬು ಅವರುಗಳ ಪ್ರತ್ಯೇಕ ತಂಡಗಳನ್ನು ರಚಿಸಿ, ವಿಶೇಷ ಕಾರ್ಯಾಚರಣೆ ನಡೆಸಿ ಶುಕ್ರವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ವಿಹಾಳ ಪಟ್ಟಣದ ವಾರ್ಡ್ ನಂ.10ರ ನಿವಾಸಿಯಾಗಿ ರುವ ಜಿಲಾನಿ ರಾಜಾಸಾಬ್‌ನನ್ನು ಬಂಧಿಸಿ 60 ಸಾವಿರ ರು. ಮೌಲ್ಯದ 5 ಗ್ರಾಂ ಬಂಗಾರದ ನತ್ತು, 60 ಸಾವಿರ ರು. ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು, ಕಳ್ಳತನ ಮಾಡಲು ಉಪಯೋಗಿಸಿದ 30 ಸಾವಿರ ರು. ಮೌಲ್ಯದ ಹೊಂಡಾ ಯೂನಿಕಾರ್ನ್ ಬೈಕ್ ಸೇರಿ ಒಟ್ಟು 1.50 ಲಕ್ಷ ರು. ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ.

ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸ್ಕಿ ತಾಲ್ಲೂಕಿನ ಸುಂಕನೂರು ಗ್ರಾಮದ ಶಿವರಾಜ ಹನುಮಮ್ಮ ಎಂಬ ಆರೋಪಿಯನ್ನು ಬಂಧಿಸಿ 2 ತೊಲೆ ಬಂಗಾರದ ಆಭರಣ, 15 ತೊಲೆ ಬೆಳ್ಳಿಯ ಆಭರಣ ಸೇರಿ ಒಟ್ಟು ₹2.50 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.