ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಒಂದು ವರ್ಷದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಸ್ಯಾಂಡಲ್ವುಡ್ ನಟಿ ರನ್ಯಾರಾವ್, ಕಾಫಿಪೋಸಾ ಕಾಯ್ದೆಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಬಿಡುಗಡೆಯಾಗಲಿದ್ದಾರೆ. 102 ಕೋಟಿ ರೂ. ಮೌಲ್ಯದ ಚಿನ್ನ ಸಾಗಣೆ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸ್ಯಾಂಡಲ್ವುಡ್ ನಟಿ ರನ್ಯಾರಾವ್ ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಕಾಪಿಪೋಸಾ (COFEPOSA) ಕಾಯ್ದೆ ಜಾರಿಯಾದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇದ್ದ ಅವರು, ಇಂದು ಆ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಬಿಡುಗಡೆ ಪಡೆಯುತ್ತಿದ್ದಾರೆ. ಈ ಹಿಂದೆಯೇ ನಟಿ ರನ್ಯಾಗೆ ಕೋರ್ಟ್ ಜಾಮೀನು ನೀಡಿತ್ತು ಆದ್ರೆ ಕಾಫಿಪೋಸಾ ಜಾರಿ ಹಿನ್ನೆಲೆ ಬಿಡುಗಡೆ ಮಾಡಿರಲಿಲ್ಲ. ಅವಧಿ ಮುಗಿದ ಹಿನ್ನೆಲೆ ಇಂಉ ಬಿಡುಗಡೆಯಾಗುತ್ತಿದ್ದಾರೆ.
ರನ್ಯಾರಾವ್ ವಿರುದ್ಧ ಸುಮಾರು 102 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಆರೋಪ ಕೇಳಿಬಂದಿತ್ತು. 2025ರ ಮಾರ್ಚ್ 3ರಂದು ವಿಮಾನ ನಿಲ್ದಾಣದಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್ಐ) ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ 14.80 ಕೆಜಿ ಚಿನ್ನ ಪತ್ತೆಯಾಗಿ, ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿತ್ತು. ಬಳಿಕ ನ್ಯಾಯಾಂಗ ಪ್ರಕ್ರಿಯೆಯಂತೆ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು.
ಕಾಫಿಪೋಸಾ ಕಾಯ್ದೆ ಜಾರಿಗೊಂಡ ಹಿನ್ನೆಲೆ ಜಾಮೀನು ಸಿಕ್ಕಿದ್ದರೂ ಬಿಡುಗಡೆ ಇರಲಿಲ್ಲ
ಈ ಪ್ರಕರಣದಲ್ಲಿ 2025ರ ಮೇ 20ರಂದು ಆರ್ಥಿಕ ಅಪರಾಧಗಳ ನ್ಯಾಯಾಲಯದಿಂದ ರನ್ಯಾರಾವ್ ಅವರಿಗೆ ಜಾಮೀನು ಮಂಜೂರಾಗಿತ್ತು. ಆದರೆ ಸೆಂಟ್ರಲ್ ಎಕನಾಮಿಕ್ಸ್ ಇಂಟೆಲಿಜೆನ್ಸ್ ಬ್ಯೂರೋ (CEIB) ನಿರ್ದೇಶನದ ಮೇರೆಗೆ ಕಾಫಿಪೋಸಾ ಕಾಯ್ದೆ ಜಾರಿಗೊಂಡ ಹಿನ್ನೆಲೆಯಲ್ಲಿ, ಜಾಮೀನು ಸಿಕ್ಕಿದ್ದರೂ ಅವರು ಜೈಲಿನಿಂದ ಹೊರಬರಲು ಸಾಧ್ಯವಾಗಿರಲಿಲ್ಲ.
ಇದೀಗ ಕಾಫಿಪೋಸಾ ಅಡಿಯಲ್ಲಿ ವಿಧಿಸಲಾದ ಒಂದು ವರ್ಷದ ಬಂಧನ ಅವಧಿ ಪೂರ್ಣಗೊಂಡಿರುವುದರಿಂದ, ರನ್ಯಾರಾವ್ ಅವರನ್ನು ಇಂದು ಸಂಜೆ ಬಿಡುಗಡೆ ಮಾಡಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ಅವರು, ಈ ಪ್ರಕರಣದ ಹಿನ್ನೆಲೆಯಲ್ಲಿ ಬಹಳ ಗಮನ ಸೆಳೆದಿದ್ದರು.
ರನ್ಯಾ ಆಪ್ತನಿಗೂ ಬಿಡುಗಡೆ ಸಾಧ್ಯತೆ
ಇನ್ನೊಂದೆಡೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರನ್ಯಾ ಆಪ್ತ ಮೈಸೂರು ಜೈಲಿನಲ್ಲಿ ಇರುವ ತರುಣ್ ಕೊಂಡರಾಜು ಕೂಡ ಇಂದು ಅಥವಾ ನಾಳೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ್ದ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಬಿಡುಗಡೆ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.


