ಪದ್ಮಶ್ರೀ ಪುರಸ್ಕೃತ, ಗ್ರ್ಯಾಮಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರ ಬೆಂಗಳೂರಿನ ನಿವಾಸದಲ್ಲಿ ಕಳ್ಳತನ ನಡೆದಿದೆ. ಡೆಲಿವರಿ ಬಾಯ್‌ಗಳ ವೇಷದಲ್ಲಿ ಬಂದ ಇಬ್ಬರು ಕಳ್ಳರು, ಮನೆಯ ನೀರಿನ ಸಂಪ್‌ನ ಕಬ್ಬಿಣದ ಮುಚ್ಚಳವನ್ನು ಕದ್ದೊಯ್ದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಬೆಂಗಳೂರು: ಪದ್ಮಶ್ರೀ ಪುರಸ್ಕೃತ, ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರಾಗಿರುವ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರ ನಿವಾಸದಲ್ಲಿ ಕಳ್ಳತನ ನಡೆದಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮನೆಯ ಆವರಣದಲ್ಲಿ ಇರುವ ನೀರಿನ ಸಂಪ್‌ನ ಕಬ್ಬಿಣದ ಮುಚ್ಚಳವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಗುರುವಾರ, ಡಿಸೆಂಬರ್ 11ರಂದು ಸಂಜೆ ಸುಮಾರು 6 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಬಂದು ಈ ಕೃತ್ಯ ಎಸಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಡೆಲಿವರಿ ಬಾಯ್‌ಗಳಂತೆ ವೇಷಧಾರಣೆ

ಕಳ್ಳರು ಸ್ವಿಗ್ಗಿ ಅಥವಾ ಝೊಮ್ಯಾಟೋ ಡೆಲಿವರಿ ಸಿಬ್ಬಂದಿಯಂತೆ ಕಾಣಿಸಿಕೊಂಡಿದ್ದರು ಎಂದು ರಿಕ್ಕಿ ಕೇಜ್ ಆರೋಪಿಸಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರು ಸ್ಪಷ್ಟವಾಗಿ ಕಾಣಿಸಿಕೊಂಡಿದ್ದಾರೆ. ಮತ್ತು ಡೆಲಿವರಿ ಬ್ಯಾಗ್ ಅವರ ಕೈನಲ್ಲಿರುವುದು ಸ್ಪಷ್ಟವಾಗಿ ಕಾಣಿಸಿದೆ. ಒಬ್ಬ ಯುವಕ ರಸ್ತೆಯಲ್ಲಿಯೇ ಬೈಕ್ ಮೇಲೆ ಕುಳಿತಿದ್ದರೆ, ಮತ್ತೊಬ್ಬನು ಬೈಕ್‌ನಿಂದ ಕೆಳಗಿಳಿದು ಮನೆಯ ಆವರಣಕ್ಕೆ ಪ್ರವೇಶಿಸಿ ನೀರಿನ ಸಂಪ್‌ನ ಕಬ್ಬಿಣದ ಗಾರ್ಡ್ ಅಥವಾ ಮುಚ್ಚಳವನ್ನು ಕದ್ದುಕೊಂಡು ಹೊರಟು ಹೋಗಿರುವುದು ದೃಶ್ಯಗಳಲ್ಲಿ ದಾಖಲಾಗಿದೆ.

15 ನಿಮಿಷ ಮುಂಚಿತವಾಗಿ ಬಂದಿದ್ದ ಅನುಮಾನಾಸ್ಪದ ಯುವಕ

ಸಿಸಿಟಿವಿ ಪರಿಶೀಲನೆ ವೇಳೆ, ಕಳ್ಳತನಕ್ಕೂ ಸುಮಾರು 15 ನಿಮಿಷಗಳ ಮುಂಚಿತವಾಗಿ ಒಬ್ಬ ಝೊಮ್ಯಾಟೋ ಡೆಲಿವರಿ ಬಾಯ್‌ನಂತೆ ಕಾಣಿಸಿದ ವ್ಯಕ್ತಿ ಮನೆಯ ಮುಂದೆ ಬಂದಿದ್ದನು. ಇದರಿಂದ ಕಳ್ಳತನ ಪೂರ್ವ ಯೋಜಿತವಾಗಿರಬಹುದೆಂಬ ಅನುಮಾನಗಳು ವ್ಯಕ್ತವಾಗಿವೆ. ಕಳ್ಳರು KA03 HY 8751 ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಬಂದಿದ್ದರು ಎಂದು ರಿಕ್ಕಿ ಕೇಜ್ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮನವಿ

ಈ ಘಟನೆಯ ಕುರಿತು ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರು ತಮ್ಮ ಅಧಿಕೃತ ‘ಎಕ್ಸ್’ (ಹಳೆಯ ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ, ಪ್ರಕರಣದ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಅವರು ಹಂಚಿಕೊಂಡಿದ್ದು, ಕಳ್ಳರ ಚಲನವಲನಗಳು ಸ್ಪಷ್ಟವಾಗಿ ಕಾಣಿಸುತ್ತಿವೆ.

ಪೊಲೀಸರಿಂದ ತನಿಖೆ

ಪ್ರಕರಣ ಬೆಳಕಿಗೆ ಬಂದ ಬಳಿಕ, ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ಆರಂಭಿಸಿದ್ದಾರೆ. ದ್ವಿಚಕ್ರ ವಾಹನದ ನಂಬರ್ ಹಾಗೂ ಆರೋಪಿಗಳ ಗುರುತು ಪತ್ತೆ ಹಚ್ಚುವ ಕೆಲಸ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಖ್ಯಾತ ಕಲಾವಿದರ ನಿವಾಸದಲ್ಲೇ ನಡೆದಿರುವ ಈ ಕಳ್ಳತನ ಪ್ರಕರಣವು ನಗರದಲ್ಲಿ ಭದ್ರತೆ ಕುರಿತು ಮತ್ತೊಮ್ಮೆ ಪ್ರಶ್ನೆಗಳನ್ನು ಎಬ್ಬಿಸಿದ್ದು, ಪೊಲೀಸರು ಶೀಘ್ರವೇ ಪ್ರಕರಣವನ್ನು ಭೇದಿಸಬೇಕಿದೆ.

Scroll to load tweet…