ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯನ್ನು ಐತಿಹಾಸಿಕ ಎಂದು ಬಣ್ಣಿಸಿದ ಅವರು, ಇದನ್ನು ವಿರೋಧಿಸುವ ವಿಪಕ್ಷಗಳ ನಿಲುವನ್ನು ತೀವ್ರವಾಗಿ ಖಂಡಿಸಿದರು.

ಚಿಕ್ಕಮಗಳೂರು (ಏ.18): ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಅಂತರದಿಂದ ಜಯಭೇರಿ ಬಾರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶನಿವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆ ವಿಚಾರವಾಗಿ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಮಾನತೆಯ ವಿರುದ್ಧ ನಿಲ್ಲಬೇಡಿ

ಮಹಿಳಾ ಮೀಸಲಾತಿಯನ್ನು ವಿರೋಧಿಸುವುದು ಸಮಾನತೆ ವಿರೋಧಿಗಳು. ಮಹಿಳಾ ಮೀಸಲಾತಿ ಬಗ್ಗೆ ಬಹಳ ವರ್ಷಗಳಿಂದ ಮಾತನಾಡಿಕೊಂಡು ಬರ್ತಿದ್ವಿ. ಇನ್ನು ಚರ್ಚೆ ಆಗಬೇಕು ಅಂದರೆ ಅದರ ವಿಳಂಬ ನೀತಿ ಸ್ಪಷ್ಟ ಆಗುತ್ತೆ. ಮಹಿಳಾ ಮೀಸಲಾತಿ ಜಾರಿ ಮಾಡ್ತಿರೋದು ರಾಜಕೀಯ ಲಾಭಕ್ಕಾಗಿ ಅನ್ನೋದು ತಪ್ಪು. ಒಳ್ಳೆಯ ನೀತಿ ಯಾವಾಗ ಬಂದರೂ ಒಳ್ಳೆಯದೆ ಬಸವಣ್ಣನವರು ಅಂದೇ ಹೆಣ್ಣು-ಗಂಡು ಭೇದವಿಲ್ಲದೆ ಸಮಾನ ಹಕ್ಕಿಗಾಗಿ ಹೋರಾಡಿದ್ದರು. ಅಕ್ಕಮಹಾದೇವಿಯಂತಹವರು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಅದೇ ತತ್ವ ಮುಂದುವರಿಯಬೇಕೆಂದ್ರೆ ರಾಜಕೀಯದಲ್ಲಿ ಮಹಿಳೆಯರಿಗೆ ರಾಜಕೀಯ ಪ್ರವೇಶ, ಅವಕಾಶ ಕೊಡೋದು ಅನಿವಾರ್ಯ ಎಂದು ಪ್ರತಿಪಾದಿಸಿದರು. ಪ್ರತಿಯೊಂದಕ್ಕೂ ವಿರೋಧ ಮಾಡುವುದು ಸರಿಯಲ್ಲ ಎಂದು ವಿಪಕ್ಷ ನಾಯಕರ ವಿರುದ್ಧ ಕಿಡಿಕಾರಿದರು.

ಮೋದಿ ನಿರ್ಧಾರಕ್ಕೆ ಬೆಂಬಲಿಸಿ

ಮಹಿಳಾ ಮೀಸಲಾತಿ ಜಾರಿಗೊಳಿಸಿರುವ ಪ್ರಧಾನಿ ಮೋದಿಯವರ ನಿರ್ಧಾರ ಐತಿಹಾಸಿಕವಾದುದು. ಇದು ರಾಜಕೀಯ ಲಾಭಕ್ಕಾಗಿ ಎಂಬ ಟೀಕೆಗಳು ತಪ್ಪು. ಇದನ್ನು ವಿಳಂಬ ಮಾಡುವ ನೀತಿ ಸರಿಯಲ್ಲ. ಒಳ್ಳೆಯ ಕೆಲಸ ಯಾವಾಗ ನಡೆದರೂ ಸ್ವಾಗತಾರ್ಹ. ಆದ್ದರಿಂದ ಪಕ್ಷಾತೀತವಾಗಿ ಎಲ್ಲರೂ ಮೋದಿಯವರ ಈ ನಿರ್ಧಾರಕ್ಕೆ ಬೆಂಬಲ ನೀಡಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.