ಧರ್ಮಸ್ಥಳ ಗ್ರಾಮದಲ್ಲಿ ಹೂತಿಟ್ಟ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ವಿಶೇಷ ತನಿಖಾ ತಂಡದಿಂದ ಐಪಿಎಸ್ ಅಧಿಕಾರಿ ಸೌಮ್ಯಲತಾ ಹೊರಗುಳಿಯುವ ವಿಚಾರವನ್ನು ಅವರು ಅಧಿಕೃತವಾಗಿ ನನಗೆ ಮಾಹಿತಿ ತಿಳಿಸಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರು (ಜು.24): ಧರ್ಮಸ್ಥಳ ಗ್ರಾಮದಲ್ಲಿ ಹೂತಿಟ್ಟ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ವಿಶೇಷ ತನಿಖಾ ತಂಡದಿಂದ ಐಪಿಎಸ್ ಅಧಿಕಾರಿ ಸೌಮ್ಯಲತಾ ಹೊರಗುಳಿಯುವ ವಿಚಾರವನ್ನು ಅವರು ಅಧಿಕೃತವಾಗಿ ನನಗೆ ಮಾಹಿತಿ ತಿಳಿಸಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಅನ್ಅಫಿಷಿಯಲ್ ಆಗಿ ಸೌಮ್ಯಲತಾ ಅವರು ತಂಡದಿಂದ ಹೊರಗುಳಿಯುವ ವಿಚಾರಕ್ಕೆ ಪತ್ರ ಬರೆದಿರುವುದು ಗೊತ್ತಾಗಿದೆ. ವೈಯಕ್ತಿಕ ಕಾರಣ ಇದೆ ಹಾಗಾಗಿ ತಂಡದಿಂದ ಹೊರಗುಳಿಯುವ ಬಗ್ಗೆ ಅನ್ಅಫಿಷಿಯಲ್ ಆಗಿ ಮಾಹಿತಿ ಕೊಟ್ಟಿದ್ದಾರೆ. ಅವರನ್ನು ತಂಡದಿಂದ ರೀಪ್ಲೇಸ್ ಮಾಡಲಾಗುತ್ತೆ. ಈ ಮೂಲಕ ಸೌಮ್ಯಲತಾ ಎಸ್ಐಟಿಯಿಂದ ಹೊರಗೆ ಉಳಿಯುವ ಬಗ್ಗೆ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾ.ಕುನ್ಹಾ ವರದಿ ಮೇಲೆ ಸಂಪುಟದಲ್ಲಿ ತೀರ್ಮಾನ ತಗೋತೇವೆ. ಅವರು ಏನು ಶಿಫಾರಸು ಕೊಟ್ಟಿದ್ದಾರೋ ಅದರಂತೆ ತೀರ್ಮಾನ ತೆಗೆದುಕೊಂಡು ಕ್ರಿಮಿನಲ್ ಪ್ರೊಸೀಜರ್ ಬಗ್ಗೆಯೂ ಶಿಫಾರಸು ಮಾಡಿದ್ದಾರೆ. ಅದರಂತೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಕೊಹ್ಲಿ ವಿಚಾರ ಬಗ್ಗೆ ವರದಿಯಲ್ಲಿ ಪ್ರಸ್ತಾಪ ಇದ್ರೆ ಚರ್ಚೆ ಮಾಡಿ ನಿರ್ಣಯಿಸ್ತೇವೆ. ಒಬ್ಬ ವ್ಯಕ್ತಿ ಅಂತ ಬರಲ್ಲ ತಂಡದ ವಿಚಾರ ಇರುತ್ತೆ, ನೋಡ್ತೇವೆ. ಕುನ್ಹಾ ಅವರ ವರದಿಯಲ್ಲಿ ಕೊಹ್ಲಿ ಅವರ ಬಗ್ಗೆ ನಿರ್ದಿಷ್ಟವಾಗಿ ಪ್ರಸ್ತಾಪ ಇಲ್ಲ. ಯಾರ್ಯಾರು ಏನೇನು ಮಾಡಿದ್ದಾರೆ ಅನ್ನೋದು ಇದೆ ಎಂದು ತಿಳಿಸಿದರು.
ಸಿಎಂ, ಡಿಸಿಎಂ ದೆಹಲಿ ಭೇಟಿ ವಿಚಾರವಾಗಿ, ಓಬಿಸಿ ಸಲಹಾ ಮಂಡಳಿಯ ಸಭೆ ದೆಹಲಿಯಲ್ಲಿ ನಡೀತಿದೆ ಆ ಸಭೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹೋಗ್ತಿದ್ದಾರೆ. ನಮಗೆ ಆಹ್ವಾನ ಇಲ್ಲ, ಅವರು ಇಬ್ರೂ ಹೋಗ್ತಿದ್ದಾರೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ಸುಳ್ಳು ಸುದ್ದಿ, ದ್ವೇಷ ಭಾಷಣಗಳಿಗೆ ಕಡಿವಾಣ ಹಾಕಲು ಹೊಸ ಮಸೂದೆ: ಮಾಜದಲ್ಲಿ ಅಶಾಂತಿಗೆ ಕಾರಣವಾಗಿರುವ ಸುಳ್ಳು ಸುದ್ದಿ ಹಾಗೂ ದ್ವೇಷ ಭಾಷಣಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಇದೇ ಅಧಿವೇಶದಲ್ಲಿ ಹೊಸ ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ. ಕಳೆದ ಕೆಲವು ಸಮಯದಿಂದ ಕರಾವಳಿಯಲ್ಲಿ ಶಾಂತಿ ಕದಡುವ ವಾತಾವರಣ ಕಂಡುಬಂದಿದ್ದು, ಅದನ್ನು ನಿಯಂತ್ರಣಕ್ಕೆ ತರಲಾಗಿದೆ. ಮುಂದೆ ಅಂತಹ ಘಟನೆಗಳು ಮರುಕಳಿಸದೆ, ಸೌಹಾರ್ದತೆಯ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಸಭೆಯನ್ನು ಕರೆಯಲಾಗಿದೆ. ಇಲ್ಲಿ ಪ್ರಸ್ತಾಪಗೊಂಡ ವಿಚಾರಗಳನ್ನು ಮುಖ್ಯಮಂತ್ರಿ, ಸಂಬಂಧಿತ ಸಚಿವರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಪರಮೇಶ್ವರ ಹೇಳಿದರು.


