ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆ ಬಿಟ್ಟು ಅಹಿಂದ ಸಮಾವೇಶ ಮಾಡುತ್ತಿಲ್ಲ. ಅದು ಅವರ ಎಕ್ಸ್ಟ್ರಾ ಕೆಲಸವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬಾಗಲಕೋಟೆ (ಜು.27): ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆ ಬಿಟ್ಟು ಅಹಿಂದ ಸಮಾವೇಶ ಮಾಡುತ್ತಿಲ್ಲ. ಅದು ಅವರ ಎಕ್ಸ್ಟ್ರಾ ಕೆಲಸವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಒತ್ತಾಯದ ಮೇರೆಗೆ ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಿದ್ದಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಜಿಲ್ಲೆಯ ಬಾಡಗಂಡಿಯಲ್ಲಿ ಪ್ರತಿಕ್ರಿಯಿಸಿದರು.
ಅಹಿಂದ ಸಭೆ ಸಿದ್ದರಾಮಯ್ಯ ಅವರಿಗೆ ಅದು ಎಕ್ಸ್ಟ್ರಾ ಕೆಲಸವಾಗಿದೆ. ಅವರು ಸಿಎಂ ಸ್ಥಾನ ಬಿಟ್ಟು ಸಮಾವೇಶ ಮಾಡುತ್ತಿಲ್ಲ. ಈ ಹುದ್ದೆಗಳ ಜತೆಗೆ ಇನ್ನೇರೆಡು ಹುದ್ದೆ ಕೊಡಬಹುದಲ್ವಾ ಎಂದು ಉತ್ತರಿಸಿದರು. ಸಚಿವ ಸಂಪುಟ ಪುನಾರಚನೆ ಹಾಗೂ ಸಿಎಂ ಅಧಿಕಾರ ಹಂಚಿಕೆ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಪಕ್ಷದ ಅಧ್ಯಕ್ಷರು, ಸಿಎಂ, ಡಿಸಿಎಂ ಅವರನ್ನೇ ಕೇಳಬೇಕು. ಅವರೇ ಇದಕ್ಕೆ ಸರಿಯಾದ ಉತ್ತರ ಕೊಡುತ್ತಾರೆ. ನಾವು ಕೇವಲ ಮಂತ್ರಿಗಳು ಅಷ್ಟೇ, ದಿನಾಂಕ ನಿಗದಿ ಮಾಡುವ ಅಧಿಕಾರ ವ್ಯಾಪ್ತಿ ನಮ್ಮದಲ್ಲ ಎಂದರು.
ತಾರಾಬಲವಿದ್ದರೆ ಸಿಎಂ ಆಗಬಹುದು: ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆಗಳಿವೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಅದರಂತೆ ಮುಖ್ಯಮಂತ್ರಿ ಸ್ಥಾನ ಒಲಿಯಲು ಗುರುಬಲ, ತಾರಾಬಲ ಬೇಕು. ಶನಿಕಾಟ ಕಡಿಮೆಯಾಗಬೇಕು ಎಂದು ಹೇಳಿದ್ದಾರೆ. ಒಬ್ಬಬ್ಬರಿಗೆ ಒಂದೊಂದು ರೀತಿಯ ಸಮಸ್ಯೆಗಳಿವೆ. ಎಲ್ಲದಕ್ಕೂ ಕಾಲಕೂಡಿ ಬರಬೇಕಿದೆ. ಅಲ್ಲಿ ತನಕ ನಮ್ಮೆಲ್ಲ ಪ್ರಯತ್ನಗಳೂ ವಿಫಲವಾಗುತ್ತವೆ ಎಂದರು. ಸಿಎಂ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿ, ನಿಗಮ ಮಂಡಳಿಗಳಿಗೆ ಯಾರನ್ನೇ ನೇಮಕ ಮಾಡಬೇಕಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಗಾಂಧಿ ಅವರ ಒಪ್ಪಿಗೆ ಪಡೆಯುತ್ತಾರೆ.
ಹೀಗಾಗಿ, ಅವರು ವಾರಕ್ಕೊಮ್ಮೆ ದೆಹಲಿಗೆ ಹೋದರೂ ಅದು ಕಡಿಮೆಯೇ. ಇನ್ನು ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿಲ್ಲ. ರಾಜ್ಯಾಧ್ಯಕ್ಷ ಬದಲಾವಣೆ ಯಾವುದೇ ಅರ್ಜೆಂಟ್ ಇಲ್ಲ. ನಮ್ಮ ಅಭಿಪ್ರಾಯ ಹೇಳಬಹುದು. ಆದರೆ, ಹೈಕಮಾಂಡ್ ತೀರ್ಮಾನ ಅಂತಿಮ. ಸೆಪ್ಟೆಂಬರ್ನಲ್ಲಿ ಕ್ರಾಂತಿ ವಿಚಾರ ತಿಳಿದಿಲ್ಲ. ರಾಜಣ್ಣ ಅವರನ್ನು ಭೇಟಿ ಮಾಡಿದಾಗ ಈ ಬಗ್ಗೆ ವಿಚಾರಿಸುತ್ತೇನೆ. ಅಧ್ಯಕ್ಷ ಮತ್ತು ಡಿಸಿಎಂ ಬದಲಾವಣೆ ಬಿಟ್ಟು ಬೇರೆ ಕ್ರಾಂತಿ ಆಗಬಹುದು ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇದೆ. ಅದನ್ನು ಸರಬರಾಜು ಮಾಡುವುದು ಕೇಂದ್ರ ಸರ್ಕಾರ. ಹಂಚಿಕೆ ಮಾತ್ರ ರಾಜ್ಯ ಸರ್ಕಾರದ ಜವಾಬ್ದಾರಿ. ಎರಡು ಸರ್ಕಾರಗಳು ಕೂಡಿ ಸಮಸ್ಯೆ ಬಗೆಹರಿಸಬೇಕು. ಮಹದಾಯಿ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಆದಷ್ಟು ಬೇಗನೆ ಕೇಂದ್ರ ಸರ್ಕಾರ ಪರವಾನಗಿ ಕೊಡಿಸಬೇಕು ಎಂದರು.


